ಎಂಎಂ ಕಲಬುರ್ಗಿ ಕೊಂದವರನ್ನು ಬಂಧಿಸಿಲ್ಲ : ಸಿಐಡಿ ಸ್ಪಷ್ಟನೆ
ಬೆಂಗಳೂರು, ಡಿಸೆಂಬರ್ 31 : ಖ್ಯಾತ ಸಂಶೋಧಕ ಎಂಎಂ ಕಲಬುರ್ಗಿ ಅವರ ವಿವಾದಾತ್ಮಕ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯನ್ನು ಬಂಧಿಸಲಾಗಿಲ್ಲ ಎಂದು ತನಿಖೆ ನಡೆಸುತ್ತಿರುವ ಸಿಐಡಿ ಶನಿವಾರ ಸ್ಪಷ್ಟಪಡಿಸಿದೆ.
ಕಲಬುರ್ಗಿ ಅವರ ಹತ್ಯೆಯನ್ನು ಮಾಡಿರುವ ಇಬ್ಬರು ವ್ಯಕ್ತಿಗಳನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ ಎಂದು ಹಬ್ಬಿರುವ ಸುದ್ದಿಯನ್ನು ಕೇವಲ ಗಾಳಿಸುದ್ದಿ ಎಂದಿರುವ ಸಿಐಡಿ, ಅಂತಹ ಯಾವುದೇ ವ್ಯಕ್ತಿಗಳನ್ನು ಬಂಧಿಸಲಾಗಿಲ್ಲ, ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು ಎಂದು ಹೇಳಿದೆ.
"ಇಂತಹ ಸುಳ್ಳು ಸುದ್ದಿ ಹಬ್ಬಿರುವುದು ನಮ್ಮ ಕಿವಿಗೆ ಬಿದ್ದಿದೆ. ಒಂದು ವೇಳೆ ಬಂಧಿಸಿದ್ದರೆ ನಾವೇ ಅದನ್ನು ಪ್ರಕಟಿಸುತ್ತೇವೆ" ಎಂದು ಹಿರಿಯ ಸಿಐಡಿ ಅಧಿಕಾರಿಯೊಬ್ಬರು ಒನ್ಇಂಡಿಯಾಗೆ ತಿಳಿಸಿದರು.
ಇಬ್ಬರನ್ನು ಬಂಧಿಸಿರುವುದು ಮಾತ್ರವಲ್ಲ, ಅವರಿಬ್ಬರೂ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆಸ್ತಿ ವಿಷಯವಾಗಿ ಅವರೊಂದಿಗೆ ಜಗಳವಿತ್ತು. ಈ ಕಾರಣಕ್ಕಾಗಿಯೇ ಅವರನ್ನು ಕೊಂದಿದ್ದೇವೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದನ್ನು ಸಿಐಡಿ ಸಂಪೂರ್ಣವಾಗಿ ಅಲ್ಲಗಳೆದಿದೆ.
ಕೆಲ ಕನ್ನಡ ಮಾಧ್ಯಮಗಳಲ್ಲಿ ಬಂಧನದ ಸುದ್ದಿ ಬಂದಿರುವುದು ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಸಿಐಡಿ ತನ್ನ ತನಿಖೆಯನ್ನು ಮುಗಿಸಿದ್ದು, ಇಂಥದೇ ಪ್ರಕರಣಗಳ ತನಿಖೆ ನಡೆಸುತ್ತಿರುವ ಸಿಬಿಐ ಸಲ್ಲಿಸಲಿರುವ ವರದಿಗೆ ಕಾಯುತ್ತಿದೆ.
ವಿಚಾರವಾದಿ ನರೇಂದ್ರ ಧಾಬೋಲ್ಕರ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಂಧಿತನಾಗಿರುವ ವ್ಯಕ್ತಿಯ ವಿಚಾರಣೆಯನ್ನು ಕರ್ನಾಟಕದ ಸಿಐಡಿ ಕೂಡ ಮಾಡಿದ್ದು, ಕಲಬುರ್ಗಿ ಅವರ ಹತ್ಯೆಯಲ್ಲಿ ಅವರ ಕೈವಾಡವೇನಾದರೂ ಇದೆಯಾ ಎಂದು ತನಿಖೆ ನಡೆಸುತ್ತಿದೆ.