ಮತ್ತೆ ನೈಸ್ ಹೋರಾಟ ಆರಂಭಿಸಲಿದ್ದಾರೆ ದೇವೇಗೌಡರು?
ಬೆಂಗಳೂರು, ಆಗಸ್ಟ್ 28 : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೈಸ್ ಸಂಸ್ಥೆ ವಿರುದ್ಧದ ತಮ್ಮ ಹೋರಾಟವನ್ನು ಮತ್ತೆ ಮುಂದುವರೆಸುವ ಸೂಚನೆ ನೀಡಿದ್ದಾರೆ. 'ರೈತರಿಗೆ ಅನ್ಯಾಯ ಮಾಡಿರುವ ನೈಸ್ ವಿರುದ್ಧ ಸುಮ್ಮನೆ ಕೂರುವ ಪ್ರಶ್ನೆ ಇಲ್ಲ' ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ದೇವೇಗೌಡರು, 'ನೈಸ್ ವಿರುದ್ಧ ಹೋರಾಟ ಕೈ ಬಿಟ್ಟಿದ್ದರಿಂದ ನನ್ನ ಮೇಲೆ ಅನುಮಾನಗಳು ವ್ಯಕ್ತವಾಗಿವೆ. ಆ ಕಂಪನಿ ಜತೆ ಶಾಮೀಲಾಗಿರಬಹುದು ಎಂಬ ಆರೋಪವೂ ಕೇಳಿಬಂದಿದೆ. ನೈಸ್ ವಿರುದ್ಧ ಸುಮ್ಮನೆ ಕೂರುವ ಪ್ರಶ್ನೆ ಇಲ್ಲ' ಎಂದರು.[ಗೌಡರು ಗುಡುಗಿದ್ರು, ನೈಸ್ ಪ್ರಕರಣ ಅಸ್ತವ್ಯಸ್ತ]
'ಆಗಸ್ಟ್ 29ರಂದು ಸುಪ್ರೀಂಕೋರ್ಟ್ನಲ್ಲಿ ನೈಸ್ ಸಂಸ್ಥೆಯ ವಿರುದ್ಧದ ಅರ್ಜಿಯ ವಿಚಾರಣೆ ಇದೆ. ವಿಚಾರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರದ ನಿಲುವು ಏನು? ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇನೆ' ಎಂದು ಗೌಡರು ಹೇಳಿದರು.[ನೈಸ್ ಹೋರಾಟ, ಮೋದಿಗೆ ಗೌಡರ ಪತ್ರ]
'1995 ರಲ್ಲಿ ಮುಖ್ಯಮಂತ್ರಿಯಾಗಿ ನಾನು ನೈಸ್ ಒಪ್ಪಂದಕ್ಕೆ ಸಹಿ ಹಾಕಿದಾಗ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಆಗ ಆರೋಗ್ಯ ಸಚಿವರಾಗಿದ್ದವರು ಇದೀಗ ಲೋಕೋಪಯೋಗಿ ಸಚಿವರು. ಸ್ಪೀಕರ್ ಆಗಿದ್ದ ರಮೇಶ್ಕುಮಾರ್ ಈಗ ಸಂಪುಟದ ಪ್ರಭಾವಿ ಸಚಿವರಾಗಿದ್ದಾರೆ' ಎಂದರು.[ನೈಸ್ ಅಕ್ರಮದ ತನಿಖೆ ಮಾಡಲಿದೆ ಸದನ ಸಮಿತಿ]
'ಭೂ ರಹಿತ ರೈತರ ಪರ ಹೋರಾಟ ಮಾಡಿದ ಕಾಗೋಡು ತಿಮ್ಮಪ್ಪ ಅವರು ಈಗ ಕಂದಾಯ ಸಚಿವರಾಗಿದ್ದಾರೆ. ಇವರೆಲ್ಲರ ಮೇಲೆ ನನಗೆ ಇನ್ನೂ ವಿಶ್ವಾಸ ಹೋಗಿಲ್ಲ. ಸರ್ಕಾರದ ನಿರ್ಧಾರವನ್ನು ಕಾದು ನೋಡುತ್ತೇನೆ. ನಂತರ ಹೋರಾಟದ ಬಗ್ಗೆ ಚಿಂತನೆ ನಡೆಸುತ್ತೇನೆ' ಎಂದು ಹೇಳಿದರು.