ರಾಜ್ಯದ ವಿವಿಧ ಜಿಲ್ಲೆಗಳ ಸುದ್ದಿಯ ರೌಂಡಪ್
ಬೆಂಗಳೂರು, ಮೇ 15 : ರಾಜ್ಯದ ಮೂವತ್ತು ಜಿಲ್ಲೆಗಳ ಪ್ರಮುಖ ಸುದ್ದಿ ರೌಂಡಪ್ ಇಲ್ಲಿದೆ. ನಿಮ್ಮ ಜಿಲ್ಲೆಯಳ ಕ್ರೈಂ. ರಾಜಕೀಯ, ಸಭೆ, ಸಮಾರಂಭ ಸೇರಿದಂತೆ ಇತರೆ ವಿವಿಧ ಸುದ್ದಿಗಳನ್ನು ನೀವು ಒಂದೇ ಪುಟದಲ್ಲಿ ಓದಬಹುದು.
ಕಲಬುರಗಿ: ಇಂದು (ಸೋಮವಾರ) ಕಲಬುರಗಿಯ ಹೊರವಲಯದಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು 3 ಜನರು ಗಾಯಗೊಂಡಿದ್ದಾರೆ.
ಬೆಳಗಾವಿ: ಭೂಗತ ಪಾತಕಿ ಛೋಟಾ ಶಕೀಲನ ಬಂಟ ರಶೀದ್ ಮಲಬಾರಿ ಮೂರು ವರ್ಷಗಳಿಂದ ಯಾರಿಗೂ ಗೊತ್ತಿಲ್ಲದಂತೆ ಬೆಳಗಾವಿಯಲ್ಲಿ ಠಿಕಾಣಿ ಹೂಡಿದ್ದ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.
2014ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ರಷೀದ್ ಮಾಮು ಎಂದು ಹೆಸರು ಬದಲಿಸಿಕೊಂಡು ಬೆಳಗಾವಿ, ಮುಂಬೈನಲ್ಲಿ ಓಡಾಡಿಕೊಂಡಿದ್ದ. ಈತನಿಗೆ ಬೆಳಗಾವಿ ಜಿಪಂ ಮಾಜಿ ಅಧ್ಯಕ್ಷರೊಬ್ಬರು ಫಾರ್ಮ್ ಹೌಸ್ನಲ್ಲಿ ಆಶ್ರಯ ನೀಡಿರುವುದು ಬೆಳಕಿಗೆ ಬಂದಿದೆ. ಇದೀಗ ರಷೀದ್ ಮಲಬಾರಿಗೆ ಸಹಕರಿಸಿದ ಆರೋಪದ ಮೇಲೆ 6 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉತ್ತರಕನ್ನಡ: ಸಿಡಿಲು ಬಡಿದು ಒಂದೂವರೆ ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಮದೀನಾ ಕಾಲೋನಿಯ ಫಿರದೋಸ್ ನಗರದಲ್ಲಿ ನಡೆದಿದೆ. 22 ವರ್ಷದ ಬೀಬಿ ಸುಫಿಯಾ ಮೃತ ಗರ್ಭಿಣಿ.
ಘಟನೆಯಲ್ಲಿ 19 ವರ್ಷದ ಮುಬಾರಕ್ ಹಾಗೂ 6 ವರ್ಷದ ಮಹಮದ್ ಕೈಫ್ ಎಂಬವರು ಗಾಯಗೊಂಡಿದ್ದಾರೆ. ಮನೆಯಲ್ಲಿ ಇದ್ದಾಗ ಸಿಡಿಲು ಬಡಿದು ಈ ಘಟನೆ ಸಂಭವಿಸಿದ್ದು ಗಾಯಾಳುಗಳಿಗೆ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಗದಗ ಜಿಲ್ಲಾ ಸುದ್ದಿ: ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರೀ ಮಳೆಯಾಗಿದ್ದು ನೀರಿನ ರಭಸಕ್ಕೆ ಕೆಎಸ್ ಆರ್ ಟಿಸಿ ಬಸ್ ವೊಂದು ಹಳ್ಳಕ್ಕೆ ಉರುಳಿದ ಘಟನೆ ಸೋಮವಾರ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ದೊಡ್ಡೂರ ಗ್ರಾಮದ ಬಳಿ ನಡೆದಿದೆ. ಲಕ್ಷ್ಮೇಶ್ವರ ದಿಂದ ಯಲ್ಲಾಪುರ ಕ್ಕೆ ಹೊರಟಿದ್ದ ಕೆಎ26ಎಫ್81 ನಂಬರಿನ ಬಸ್ ಹಳ್ಳಕ್ಕೆ ಉರುಳಿದೆ. ಬಸ್ ನಲ್ಲಿದ್ದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದ್ದು ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಬಳ್ಳಾರಿ: ಭಾನುವಾರ ಸುರಿದ ಭಾರೀ ಮಳೆಯಿಂದಾಗಿ ನಾಗಲಕೆರೆಯೊಂದರ ಮನೆ ಮೇಲೆ ಗುಡ್ಡದ ಕಲ್ಲು ಕುಸಿದ್ದ ಪರಿಣಾಮ ಮನೆಯಲ್ಲಿದ್ದ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಮೂರು ಜನ ಗಂಭೀರ ಗಾಯಗೊಂಡಿದ್ದಾರೆ. ಶಿವ(12) ಮೃತಪಟ್ಟ ಬಾಲಕ. ಈ ಬಗ್ಗೆ ನಗರದ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ: ಗಾಳಿ ಸಮೇತ ಧಾರಾಕಾರವಾಗಿ ಮಳೆ ಸುರಿದ ಹಿನ್ನಲೆಯಲ್ಲಿ ಮನೆಯ ಮೇಲಿನ ತಗಡು ಹಾಗೂ ಕಲ್ಲು ಬಾಲಕಿ ಮೇಲೆ ಬಿದ್ದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ಕಿರಸೂರು ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ: ಅನುಮತಿ ಪಡೆಯದೆ ಅಂತರರಾಜ್ಯಕ್ಕೆ ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಮೂರು ಲಾರಿಗಳನ್ನು ಗುಂಡ್ಲುಪೇಟೆ ತಹಸೀಲ್ದಾರ್ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಮದ್ದೂರು ಪೊಲೀಸ್ ಚೆಕ್ಪೋಸ್ಟ್ ಬಳಿ ದಾಳಿ ನಡೆಸಿ ಕೇರಳ ನೋಂದಣಿಯ ಕೆ.ಎಲ್-48 ಎಚ್ 3814, ಕೆಎಲ್-08 ಬಿಜಿ-8078, ಕೆಎಲ್-08 ಬಿಜಿ8060 ಮೂರು ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಈ ವೇಳೆ ಲಾರಿ ಚಾಲಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ತಾಜಾ ಸುದ್ದಿಗಳಿಗಾಗಿ ನಿರೀಕ್ಷಿಸಿ.