ಕಲಾಪದ ಸಮಯ ಉಳಿಸಲು ನಿಯಮಾವಳಿಗೆ ತಿದ್ದುಪಡಿ
ಬೆಂಗಳೂರು, ಆಗಸ್ಟ್ 30 : ಒಂದು ದಿನದ ವಿಧಾನಸಭೆ ಕಲಾಪಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಆದರೆ, ಕೆಲವೊಮ್ಮೆ ಒಂದು ಗಂಟೆಯೂ ಕಲಾಪ ನಡೆಯುವುದಿಲ್ಲ. ಆದ್ದರಿಂದ, ಸುಗಮ ಕಲಾಪಕ್ಕೆ ಅನುಕೂಲವಾಗುವಂತೆ ನಿಯಮಾವಳಿಗಳಿಗೆ ತಿದ್ದುಪಡಿ ತರಲಾಗುತ್ತದೆ.
ಸೋಮವಾರ ವಿಧಾನಸೌಧದಲ್ಲಿ ವಿಧಾನ ಮಂಡಲ ಜಂಟಿ ಸದನ ಸಮಿತಿ ಮೊದಲ ಸಭೆ ನಡೆಯಿತು. ಸ್ಪೀಕರ್ ಕೆ.ಬಿ. ಕೋಳಿವಾಡ ಮತ್ತು ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದಾರೆ.[12 ದಿನ ಮೊದಲೇ ಪರಿಷತ್ ಕಲಾಪ ಮುಕ್ತಾಯ]
ಸಭೆಯ ಬಳಿಕ ಮಾತನಾಡಿದ ಕೆ.ಬಿ.ಕೋಳಿವಾಡ ಅವರು, 'ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ಪ್ರಶ್ನೋತ್ತರ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆ ಮೇಲೆ ಚರ್ಚೆ ನಡೆಯಬೇಕು. ಬಳಿಕ ನಿಲುವಳಿ ಸೂಚನೆ ಮಂಡನೆ ಮಾಡಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ' ಎಂದರು.[ಸದನದ ಅಹೋರಾತ್ರಿ ಧರಣಿ: ಮಟನ್ ನಿಂದ ಅನ್ನಾಸಾಂಬರ್ ವರೆಗೆ]
'ಕಲಾಪಕ್ಕೆ ಒಂದು ಗಂಟೆ ಮೊದಲು ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಬೇಕು ಎಂಬ ನಿಯಮವನ್ನು ಮಧ್ಯಾಹ್ನ 2ರ ಬಳಿಕ ನಿಲುವಳಿ ಸೂಚನೆ ಮಂಡನೆ ಮಾಡಲು ಅವಕಾಶ ನೀಡಬೇಕು' ಎಂದು ಬದಲಾವಣೆ ಮಾಡಲಾಗುತ್ತದೆ ಎಂದು ಕೋಳಿವಾಡ ಅವರು ಹೇಳಿದರು.[ಗದ್ದಲದ ನಡುವೆಯೇ ಪರಿಷತ್ತಿನಲ್ಲಿ 3 ವಿಧೇಯಕಗಳಿಗೆ ಒಪ್ಪಿಗೆ]
'ಬೆಳಗಾವಿಯಲ್ಲಿ ನವೆಂಬರ್ನಲ್ಲಿ ನಡೆಯಲಿರುವ ಅಧಿವೇಶನದ ಮೊದಲ ದಿನ ವರದಿ ಮಂಡನೆ ಮಾಡಿ, ಅನುಮೋದನೆ ಪಡೆಯಲಾಗುತ್ತದೆ. ಈ ಅಧಿವೇಶನದಲ್ಲಿಯೇ ಹೊಸ ನಿಯಮಗಳಂತೆ ಕಲಾಪ ನಡೆಸಲಾಗುತ್ತದೆ' ಎಂದು ಕೋಳಿವಾಡ ಅವರು ಹೇಳಿದ್ದಾರೆ.