ನಾನೇ ಮುಂದಿನ ಮುಖ್ಯಮಂತ್ರಿ ಅನ್ನುತ್ತಿದ್ದ ಸಿದ್ದರಾಮಯ್ಯ ಉಲ್ಟಾ!
ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯ, ಈಗ ಸಿಎಂ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸುತ್ತದೆ ಎಂದು ಹೇಳಿದ್ದಾರೆ.
ಕಾಟಾಚಾರಕ್ಕೆ ಉಸ್ತುವಾರಿಯಂತಿದ್ದ ದಿಗ್ವಿಜಯ್ ಸಿಂಗ್ ಜಾಗಕ್ಕೆ ಕೆ ಸಿ ವೇಣುಗೋಪಾಲ್ ಅವರನ್ನು ನೇಮಿಸಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಹೊಸ ಸಂಚಲನ ಮೂಡಿಸಿದ್ದಾರಾ?
ಕೆಲವು ದಿನಗಳಿಂದ ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳು ಮೂಲ ಕಾಂಗ್ರೆಸ್ಸಿಗರಿಗೆ ಹೊಸ ಆಶಾವಾದ ಮೂಡಿಸಿದೆಯೇ, ವಲಸಿಗರಿಗೆ ಬಿಸಿಮುಟ್ಟಿಸಿದೆಯೇ? ಒಟ್ಟಿನಲ್ಲಿ ಉಸ್ತುವಾರಿ ವೇಣುಗೋಪಾಲ ಭೇಟಿ ಪಕ್ಷದೊಳಗೆ ಹೊಸಹೊಸ ಚರ್ಚೆ/ಊಹಾಪೋಹಗಳಿಗಂತೂ ದಾರಿ ಮಾಡಿಕೊಟ್ಟಿದೆ.
ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, ನಾನೇ ಮುಂದಿನ ಸಿಎಂ ಅನ್ನುತ್ತಿದ್ದ ಸಿದ್ದರಾಮಯ್ಯ, ಈಗ ಅದೇ ಮಾತನ್ನು ಆತ್ಮವಿಶ್ವಾದಲ್ಲಿ ಪುನರುಚ್ಚಿಸುವ ಸ್ಥಿತಿಯಿಲ್ಲಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ಕಾಂಗ್ರೆಸ್ ಪಡಶಾಲೆಯಲ್ಲಿ ಅಲ್ಲಲ್ಲಿ ಕೇಳಿಬರುತ್ತಿರುವ ಮಾತು.
ಇದಕ್ಕೆ ಪೂರಕ ಎನ್ನುವಂತೆ, ನನ್ನ ಮುಂದಾಳುತ್ವದಲ್ಲೇ ಚುನಾವಣೆ ನಡೆಯಲಿದೆ, ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎನ್ನುವುದನ್ನು ಪಕ್ಷದ ಶಾಸಕಾಂಗ ಸಭೆ ನಿರ್ಧರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪಕ್ಷ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ನಿಮಿತ್ತ ಆಯೋಜಿಸಲಾಗಿದ್ದ ಹೊತ್ತಗೆ ಬಿಡುಗಡೆಗೊಳಿಸುತ್ತಾ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಜೈಲಿಗೆ ಹೋದವರು ನಮ್ಮ ಪಕ್ಷದ ವಿರುದ್ದ ಆರೋಪ ಪಟ್ಟಿ ಬಿಡುಗಡೆ ಮಾಡಿರುವುದಕ್ಕೆ ಬಿಜೆಪಿಯನ್ನು ಕಟುವಾದ ಪದದಲ್ಲಿ ಟೀಕಿಸಿದರು. ಮುಂದೆ ಓದಿ.
ವಿಶ್ವನಾಥ್ ವಿಶ್ವಾಸದ ಮಾತು
ಅತ್ತ ಮೈಸೂರಿನಲ್ಲಿ ಸಿದ್ದರಾಮಯ್ಯ ವಿರುದ್ದ ಮುನಿಸಿಕೊಂಡಿದ್ದ ಹಿರಿಯ ಮುಖಂಡ ವಿಶ್ವನಾಥ್, ನಾನಿನ್ನೂ ಕಾಂಗ್ರೆಸ್ಸಿನಲ್ಲೇ ಇದ್ದೇನೆ. ನಾವು ಒಟ್ಟಾಗಿ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿರುವುದು, ವೇಣುಗೋಪಾಲ್ ಜೊತೆ ವಿಶ್ವನಾಥ್ ಭೇಟಿಯಾಗಿರುವುದು ಫಲನೀಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಹೊತ್ತಗೆ ಬಿಡುಗಡೆ
'ನುಡಿದಂತೆ ನಡೆಯುತ್ತಿದ್ದೇವೆ - ಸಾಧನೆಯ ನಾಲ್ಕು ವರ್ಷಗಳು' ಎನ್ನುವ ಹೊತ್ತಗೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಕಾರ್ಯಕ್ರಮವೊಂದರಲ್ಲಿ ನೀವೇ ಸಿಎಂ ಆಗಬೇಕು ಎಂದು ಯಾರೋ ಹೇಳಿದರು, ಆಯ್ತ ಬಿಡಪ್ಪಾ ನಾನೇ ಸಿಎಂ ಆಗುತ್ತೇನೆಂದು ಹೇಳಿದ್ದೆ - ಸಿದ್ದರಾಮಯ್ಯ.
ನಾವೇ ಗೆಲ್ಲುವುದು, ಸಿಎಂ ಅಭ್ಯರ್ಥಿ ಹೈಕಮಾಂಡ್ ನಿರ್ಧರಿಸುತ್ತದೆ
ಖಂಡಿತ ನಾವೇ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದೇವೆ. ಆದರೆ ನಮ್ಮಲ್ಲೊಂದು ಪದ್ದತಿಯಿದೆ. ಪಕ್ಷದ ನಾಯಕನನ್ನು ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ಅದಾದ ನಂತರ ಹೈಕಮಾಂಡ್ ಅನುಮತಿ ಪಡೆಯಬೇಕಾಗುತ್ತದೆ. ನಾನೆಲ್ಲೂ ನಾನೇ ಮುಂದಿನ ಸಿಎಂ ಎಂದು ಹೇಳಿಲ್ಲ - ಸಿದ್ದರಾಮಯ್ಯ.
ಸಾಮೂಹಿಕ ನಾಯಕತ್ವದಲ್ಲಿ ಪಕ್ಷಕ್ಕೆ ನಂಬಿಕೆ
ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟಿರುವ ಪಕ್ಷ ನಮ್ಮದು. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಬಿಜೆಪಿ ಬಿಡುಗಡೆಗೊಳಿಸಿದ ಆರೋಪ ಪಟ್ಟಿ ಭೂತದ ಬಾಯಿಯಿಂದ ಭಗವದ್ಗೀತೆ ಹೇಳಿಸಿದಂತೆ ಎಂದು ಪಕ್ಷದ ಮುಖಂಡ ವಿ ಆರ್ ಸುದರ್ಶನ್ ಲೇವಡಿ ಮಾಡಿದ್ದಾರೆ.
ಹೊತ್ತಗೆ ಬಿಡುಗಡೆಗೆ ಸಿಎಂಗೆ ಹಿರಿಯ ಮುಖಂಡರ ಕೈ
ಸಿಎಂ ಹೊತ್ತಗೆ ಬಿಡುಗಡೆ ವೇಳೆ ಪಕ್ಷದ ಯಾವುದೇ ಮುಖಂಡ ಹಾಜರಿರಲಿಲ್ಲ. ಉಗ್ರಪ್ಪ ಮತ್ತಿತರು ಬಿಟ್ಟರೆ ಹಿರಿಯ ಮುಖಂಡರು, ಸಚಿವರು ಸಭೆಯಲ್ಲಿ ಗೈರಾಗಿದ್ದದ್ದು ಎದ್ದು ಕಾಣುತ್ತಿತ್ತು. ಒಟ್ಟಿನಲ್ಲಿ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಭೇಟಿ, ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಹಲವು ಬದಲಾವಣೆಗಳು ತರಬಹುದು ಎನ್ನುವ ಆಶಾವಾದದಲ್ಲಿ ಹಲವು ಮುಖಂಡರು ಇರುವುದಂತೂ ನಿಜ.