ಕನ್ನಡದಲ್ಲೇ ಮಾಹಿತಿ ನೀಡಿದ್ರೆ ಮಾತ್ರ ಉತ್ಪನ್ನ ಕೊಳ್ತೇನೆ!
ಇಂದು (ಡಿಸೆಂಬರ್ 24) ರಾಷ್ಟ್ರೀಯ ಗ್ರಾಹಕರ ದಿನಾಚರಣೆ. #ServeInMyLanguage ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದ್ದು, ಟ್ವಿಟ್ಟರ್ ನಲ್ಲಿ ಈ ವಿಷಯದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
"ನನ್ನ ಭಾಷೆಯಲ್ಲಿ ಮಾಹಿತಿ/ಸೇವೆ ನೀಡದೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಹೇಗೆ ಆಚರಿಸುತ್ತೀರಿ?"
ಇದು ಮಾತೃಭಾಷೆಯ ಮೇಲೆ ಪ್ರೀತಿಯುಳ್ಳ, ಮಾತೃಭಾಷೆಯಲ್ಲೇ ಮಾಹಿತಿ ಪಡೆಯಬೇಕೆಂಬ ಆಸೆಯುಳ್ಳ ಟ್ವಿಟ್ಟಿಗರೊಬ್ಬರು ಕೇಳಿರುವ ಸರಳವಾದ ಪ್ರಶ್ನೆ. ಇನ್ನು ಮೇಲೆ ನನ್ನ ಭಾಷೆಯಲ್ಲಿ ಮಾಹಿತಿ ನೀಡದಿದ್ದರೆ ಯಾವ ಉತ್ಪನ್ನವನ್ನೂ ಕೊಳ್ಳುವುದಿಲ್ಲ ಎಂದು ಮತ್ತೊಬ್ಬ ಟ್ವಿಟ್ಟಿಗರು ಪ್ರತಿಜ್ಞೆ ಮಾಡಿದ್ದಾರೆ.
ಹೌದು, ಇದು ಪ್ರಸ್ತುತ ಪರಿಸ್ಥಿತಿಗೆ ಈ ಮಾತುಗಳು ಕನ್ನಡಿ ಹಿಡಿದಿವೆ. ಕನ್ನಡಕ್ಕೆ ಇದು ಅಕ್ಷರಶಃ ಅನ್ವಯಿಸುತ್ತದೆ. ಪ್ರತಿಯೊಂದಕ್ಕೂ ನಾವು ಕಾಡಿಬೇಡಿ ಕನ್ನಡದಲ್ಲಿ ನೀಡಿ ಎಂದು ಕೇಳುವಂಥ ಪರಿಸ್ಥಿತಿ ಬಂದಿದೆ. ಇದಕ್ಕೆ ಉದಾಹರಣೆ ನೀಡುತ್ತ ಹೋದರೆ ಅದರ ಬಾಲವೇ ಸಿಗುವುದಿಲ್ಲ.[ಕನ್ನಡ ಬಳಸಲು ನಿರಾಕರಿಸಿದ ಅಮೆಜಾನ್ ಗೆ ನೋಟಿಸ್]
ಇತ್ತೀಚೆಗೆ ಜವಳಿ ಖಾತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ನೇಕಾರರಿಗಾಗಿ ಆಪ್ ಬಿಡುಗಡೆ ಮಾಡಿದರು. ಕನ್ನಡಿಗರಿಗಿಂತಲೂ ಕಡಿಮೆ ಸಂಖ್ಯೆ ಇರುವ ಇತರ ಭಾಷೆಗಳಲ್ಲಿ ಆಪ್ ಬಿಡುಗಡೆ ಮಾಡಲಾಯಿತು. ಕನ್ನಡದಲ್ಲಿ ಏಕಿಲ್ಲ ಎಂದು ಅದೇ ಪಕ್ಷದ ಶಾಸಕರೊಬ್ಬರು ಕೇಳುವಂಥ ಪ್ರಸಂಗ ಎದುರಾಯಿತು.
ಇನ್ನು ಕನ್ನಡಕ್ಕೆ ಮಾಡುತ್ತಿರುವ ಅವಮಾನಗಳಿಗೂ ಲೆಕ್ಕವಿಲ್ಲ. ಅಮೇಜಾನ್ ಬುಕ್ ಸ್ಟೋರ್ ನಲ್ಲಿ ಕನ್ನಡ ಪುಸ್ತಕಗಳಿಗೆ ಜಾಗ ನೀಡಿರಲಿಲ್ಲ. ಕನ್ನಡಿಗರು ಹೋರಾಟ ಮಾಡಿದ ಪರಿಣಾಮ ಈಗ ಅಮೆಜಾನ್ ನಲ್ಲಿ ಕನ್ನಡ ಪುಸ್ತಕಗಳು ರಾರಾಜಿಸುತ್ತಿವೆ.
ಈ ವಿಷಯದ ಬಗ್ಗೆ ಏಕೆ ಪ್ರಸ್ತಾಪಿಸಬೇಕಾಯಿತೆಂದರೆ ಇಂದು (ಡಿಸೆಂಬರ್ 24) ರಾಷ್ಟ್ರೀಯ ಗ್ರಾಹಕರ ದಿನಾಚರಣೆ. #ServeInMyLanguage ಎಂಬ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ವಿಷಯದ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ.
ಕನ್ನಡಕ್ಕೂ ಸಂಬಂಧಪಟ್ಟಂತೆ ಹಲವಾರು ವಿಷಯಗಳು ಟ್ವಿಟ್ಟರ್ ನಲ್ಲಿ ಚರ್ಚೆಯಾಗುತ್ತಿವೆ. ಅವು ಯಾವುವು, ಯಾರು ಏನು ಟ್ವೀಟ್ ಮಾಡಿದ್ದಾರೆ, ನೋಡೋಣ ಬನ್ನಿ.
|
ಡೋಮಿನೋಸ್ ಇಂಡಿಯಾ
ಡೋಮಿನೋಸ್ ಇಂಡಿಯಾ ಕನ್ನಡದಲ್ಲಿಯೇ ಎಲ್ಲ ಖಾದ್ಯ ವಸ್ತುಗಳ ವಿವರ ನೀಡಿರುವುದನ್ನು ಇಲ್ಲಿ ಸುಹ್ರುತ ಯಜಮಾನ್ ಅವರು ಪ್ರಸ್ತಾಪಿಸಿದ್ದಾರೆ. ಇತರರೂ ಇದನ್ನ ನೋಡಿ ಗ್ರಾಹಕರನ್ನು ತಲುಪುವ ರೀತಿ ಕಲಿಯಲಿ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
|
ಅತ್ಯಂತ ಜನಪ್ರಿಯ ನೆಸ್ಲೆ ಕಂಪನಿ
ಅತ್ಯಂತ ಜನಪ್ರಿಯ ನೆಸ್ಲೆ ಕಂಪನಿಯ ಈ ಉತ್ಪನ್ನಗಳನ್ನು ನೋಡಿ. ಬಾಂಗ್ಲಾದೇಶ, ಶ್ರೀಲಂಕಾ, ಥೈಲ್ಯಾಂಡ್ ನಲ್ಲಿ ಆಯಾ ದೇಶದ ಭಾಷೆಯಲ್ಲಿ ಮಾಹಿತಿ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಕನ್ನಡಕ್ಕೊದಗಿರುವ ದುರ್ಗತಿ ನೋಡಿ. No Kannada ಅಂತ ಸ್ಪಷ್ಟವಾಗಿ ನಮೂದಿಸಿದ್ದಾರೆ. ಇಂಥ ಉತ್ಪನ್ನ ಯಾಕೆ ಕೊಳ್ಳಬೇಕು ಹೇಳಿ?
|
ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸುಗಳಲ್ಲಿ
ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ಸುಗಳಲ್ಲಿ ಕನ್ನಡ ನಾಮಫಲಕಗಳನ್ನು ಅಳವಡಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಲ್ ಹನುಮಂತಯ್ಯ ಅವರು ಕೇಳಿಕೊಳ್ಳುವಂತಾಗಬೇಕೆ?
|
ಎಲ್ಲಾ ಅರಿವು ಕನ್ನಡದಲ್ಲಿರಲಿ
"ಎಲ್ಲಾ ಮದ್ದುಗಳ ಮೇಲೆ ಎಲ್ಲಾ ಅರಿವು ಕನ್ನಡದಲ್ಲಿರಲಿ, ಇಲ್ಲದಿದ್ದರೆ ಓರ್ವರ ಬಾಳಿಗೆ ತುಂಬಾ ತೊಡಕು ಉಂಟುಮಾಡಬಹುದು" ಎಂದು ವಿವೇಕ್ ಶಂಕರ್ ಎಂಬುವವರು ಟ್ವೀಟಿಸಿದ್ದಾರೆ. ಎಷ್ಟು ನಿಜವಾದ ಮಾತು. ಔಷಧಿಯ ಬಾಟಲಿಯ ಮೇಲೆ ಏನು ಬರೆದಿದೆ ಎಂದು ತಿಳಿದುಕೊಳ್ಳುವವರು ಎಷ್ಟು ಜನ? ಇದು ಕನ್ನಡದಲ್ಲಿ ಏಕಿರಬಾರದು?
|
ಕನ್ನಡ ಚಳುವಳಿ
21ನೇ ಶತಮಾನದ ಕನ್ನಡ ಚಳುವಳಿ ಯಾವುದು ಗೊತ್ತೇ?-ಗ್ರಾಹಕ ಸೇವೆಯಲ್ಲಿ ಕನ್ನಡ. ಗ್ರಾಹಕರಿಗೆ ಕನ್ನಡ(ಆಯಾ ಭಾಷೆ)ದಲ್ಲೇ ಮಾಹಿತಿ ಸಿಗಬೇಕು ಎಂದು ಆಗ್ರಹಿಸಿ ಕನ್ನಡ ಗ್ರಾಹಕರ ಕೂಟ ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭಿಸಿದೆ. ನೂರಾರು ಕನ್ನಡಿಗರು, ಕನ್ನಡೇತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.