ರಾಜ್ಯದಲ್ಲಿ ’ನಮೋ ಬ್ರಿಗೇಡ್’ ಹುಟ್ಟಿದ್ದು ಬೆಳೆದಿದ್ದು ಹೀಗೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಈ ದೇಶದ ಪ್ರಧಾನಿ ಆಗಬೇಕು, ಭಾರತ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಬೇಕೆನ್ನುವ ಕನಸಿನೊಂದಿಗೆ ಜನ್ಮ ತಾಳಿದ ಸಂಘಟನೆಯೇ 'ನಮೋ ಬ್ರಿಗೇಡ್'.
ಸಂಘಟನೆಯ ಕನಸು ಸಾಕಾರಗೊಳ್ಳಬೇಕಾದರೆ ಪ್ರಮುಖವಾಗಿ ಯುವಪಡೆ ಜಾಗೃತರಾಗಬೇಕು. ಯುವ ಸಮುದಾಯದವರಿಗೆ ದೇಶ ಇಂದು ಎತ್ತ ಸಾಗುತ್ತಿದೆ ಎನ್ನುವುದರ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನರೇಂದ್ರ ಮೋದಿ ಯಾಕೆ ಪ್ರಧಾನಿಯಾಗಬೇಕು ಎಂದು ಎಚ್ಚರಿಸುವ ಧ್ಯೇಯೋದ್ದೇಶದಿಂದ ಈ ಸಂಘಟನೆ ಆರಂಭವಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಈ ಸಂಘಟನೆಯನ್ನು ಹುಟ್ಟುಹಾಕಿದ್ದು ನರೇಶ್ ಶೆಣೈ ಎನ್ನುವ ಮಂಗಳೂರು ಮೂಲದ ಯುವಕ. ವೃತ್ತಿಯಲ್ಲಿ ಅಯುರ್ವೇದಿಕ್ ಔಷದಿಗಳ ಡಿಸ್ಟ್ರಿಬ್ಯೂಟರ್ ಆಗಿರುವ ನರೇಶ್ 'ನಮೋ ಬ್ರಿಗೇಡ್ ' ಸಂಘಟನೆ ಹುಟ್ಟಿದ್ದು, ಬೆಳೆದಿದ್ದು ಹೇಗೆ ಎನ್ನುವುದನ್ನು 'ಒನ್ ಇಂಡಿಯಾ' ಜೊತೆ ಹಂಚಿಕೊಂಡಿದ್ದು ಹೀಗೆ.
ನರೇಂದ್ರ ಮೋದಿಯವರ ಭಾವಚಿತ್ರವಿರುವ ಮತ್ತು ' I Want my nation to be MODIfied ' do you ಎನ್ನುವ ಪದ ಬಳಸಿರುವ ಸ್ಟಿಕರ್ ಅನ್ನು ನನ್ನ ಕಾರಿನ ಹಿಂಬಾಗಿಲಿನ ಗ್ಲಾಸಿಗೆ ಅಂಟಿಸಿಕೊಂಡೆ. ನಂತರ ಅದರ ಚಿತ್ರವನ್ನು ಫೇಸ್ ಬುಕ್ ನಲ್ಲಿನ ನನ್ನ ಟೈಂಲೈನ್ ನಲ್ಲಿ ಹಾಕಿದೆ.
ಮೋದಿ ಅಭಿಮಾನಿ ಬಳಗ ಅದನ್ನು ಶೇರ್ ಮಾಡಿಕೊಂಡಿತು. ಫೇಸ್ ಬುಕ್ ನಲ್ಲಿ ಅದು ವೈರಲ್ ಆಗಿ ಸ್ಪ್ರೆಡ್ ಆಯಿತು. ಇದರಿಂದ ಸ್ಟಿಕರಿಗೆ ಇನ್ನಿಲ್ಲದ ಬೇಡಿಕೆ ಬಂತು. ನನ್ನ ಸ್ವಂತ ಖರ್ಚಿನಲ್ಲಿ ಸುಮಾರು ಹತ್ತು ಸಾವಿರ ಸ್ಟಿಕರ್ ಮಾಡಿಸಿ ಬಳ್ಳಾರಿ ಹೊರತಾಗಿ ರಾಜ್ಯದ ಎಲ್ಲಾ ಭಾಗಗಳಿಗೂ ಕಳುಹಿಸಿಕೊಟ್ಟೆ.
ಮೊದಲು ಸಂಘಟನೆಗೆ 'ನಮೋ ಮಿಲಿಟರಿ' ಎನ್ನುವ ಹೆಸರಿಡಲು ಚಿಂತಿಸಿದ್ದೆ, ನಂತರ ನಮೋ ಬ್ರಿಗೇಡ್ ಎನ್ನುವ ಹೆಸರೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದೆ. ಇದು ವ್ಯಾಪಕವಾಗಿ ಜನಪ್ರಿಯ ಪಡೆದುಕೊಳ್ಳುತ್ತಿದ್ದಂತೆ ಹಣಕಾಸು ವ್ಯವಹಾರ ಇಲ್ಲದೇ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭಿಸಿದೆ. ಚಕ್ರವರ್ತಿ ಸೂಲಿಬೆಲೆಯವರನ್ನು ಭೇಟಿ ಮಾಡಿ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಿದೆ. ಅವರೂ ನಮ್ಮ ಜೊತೆ ಕೈಜೋಡಿಸಿದರು.
ಮಂಗಳೂರಿನಲ್ಲಿ ಕೂತು ಸಂಘಟನೆಯನ್ನು ಇನ್ನಷ್ಟು ಬಲಪಡಿಸುವುದು ಕಷ್ಟ ಎಂದು ಬೆಂಗಳೂರಿನಲ್ಲಿ ನಮೋ ಬ್ರಿಗೇಡ್ ಸಂಘಟನೆ ಕಾರ್ಯವನ್ನು ನಾವು ಮತ್ತು ಚಕ್ರವರ್ತಿ ಮುಂದುವರಿಸಿದೆವು. ಸಭೆಗಳನ್ನು, ಬೈಕ್ ರ್ಯಾಲಿಗಳನ್ನು ಆಯೋಜಿಸಿದೆವು.
ಇದಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಇವತ್ತು ನಮೋ ಬ್ರಿಗೇಡ್ ಸಂಘಟನೆಗೆ ಹದಿಮೂರು ಲಕ್ಷ ಜನ ಸದಸ್ಯರಾಗಿದ್ದಾರೆ ಎನ್ನುವುದಕ್ಕೆ ಹೆಮ್ಮೆಯಾಗುತ್ತಿದೆ. ಚಕ್ರವರ್ತಿ ಸೂಲಿಬೆಲೆಯವರ ಭಾಷಣ ಮತ್ತು ಪ್ರಚಾರದ ವೈಖರಿಯೂ ಇದಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ನರೇಶ್ ಶೆಣೈ.
ಪ್ರತೀ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಮ್ಮ ಸಂಘಟನೆಯ ಸದಸ್ಯರು ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಜನರಿಗೆ ದೇಶಕ್ಕೆ ಮೋದಿ ಅವಶ್ಯಕತೆಯ ಬಗ್ಗೆ ವಿವರಿಸುತ್ತಿದ್ದಾರೆ.
ಇನ್ನೆರಡು ದಿನಗಳಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಾವು ಆಯೋಜಿಸಿದ್ದೇವೆ. ಚುನಾವಣೆಯ ದಿನವಾದ ಏಪ್ರಿಲ್ 17ರಂದು ಮತ ಚಲಾಯಿಸುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಂಗಳೂರಿನಲ್ಲಿ ಮಧು ಕಿಶ್ವಾರ್ ಅವರ ಕಾರ್ಯಕ್ರಮ ಇದೇ ಏಪ್ರಿಲ್ ಆರರಂದು ಆಯೋಜಿಸಲಾಗಿದೆ ಎಂದು ಶೆಣೈ ಹೇಳಿದ್ದಾರೆ.
ಸದಸತ್ವ ಪ್ರಕ್ರಿಯೆಯನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ. ಈ ಸಂಘಟನೆಯ ಗುರಿ ಮೋದಿ ಪ್ರಧಾನಿ ಆಗ ಬೇಕೆನ್ನುವುದು. ಮೋದಿ ಪ್ರಧಾನಿಯಾದ ನಂತರ ಸಂಘಟನೆ ಅಸ್ತಿತ್ವದಲ್ಲಿ ಇರಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಇನ್ನೂ ಚರ್ಚಿಸಿಲ್ಲ. ಮೋದಿ ಪ್ರಧಾನಿ ಆದನಂತರ ಸಂಘಟನೆಯ ಅವಶ್ಯಕತೆ ಇರುವುದಿಲ್ಲ ಎನ್ನುವುದು ನರೇಶ್ ಶೆಣೈ ಅವರ ಅಭಿಪ್ರಾಯ.