ಅಂತ್ಯಸಂಸ್ಕಾರದ ವೇಳೆ ಕಣ್ಣು ಬಿಟ್ಟಿದ್ದ ಮೈಸೂರಿನ ಮಹಿಳೆ ಸಾವು
ಮೈಸೂರು, ಮೇ 24 : ಅಂತ್ಯಸಂಸ್ಕಾರದ ವೇಳೆ ಕಣ್ಣು ಬಿಟ್ಟು ಅಚ್ಚರಿ ಮೂಡಿಸಿದ್ದ ಮೈಸೂರಿನ ಪದ್ಮಾ ಲೋಡಾ ಮೃತಪಟ್ಟಿದ್ದಾರೆ. ಮೇ 17ರಂದು ಅಂತ್ಯ ಸಂಸ್ಕಾರದ ಸಂದರ್ಭದಲ್ಲಿ ಕಣ್ಣು ಬಿಟ್ಟಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪದ್ಮಾ ಲೋಡಾ (51) ಅವರು ಸೋಮವಾರ ಮಧ್ಯಾಹ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಸಂಜೆ ಅವರ ಅಂತ್ಯ ಸಂಸ್ಕಾರ ನಡೆಸಲಾಗಿದೆ. [ಪವಾಡ, ಅಂತ್ಯ ಸಂಸ್ಕಾರದ ವೇಳೆ ಕಣ್ಣು ಬಿಟ್ಟ ಮಹಿಳೆ!]
ಉದ್ಯಮಿ ಮಹೇಂದ್ರ ಕುಮಾರ್ ಲೋಡಾ ಅವರ ಪತ್ನಿ ಪದ್ಮಾ ಅವರು ಉಸಿರಾಟದ ಸಮಸ್ಯೆಯಿಂದಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 16ರಂದು ಪದ್ಮಾ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದರು. ಸಂಬಂಧಿಕರಿಗೆ ತಿಳಿಸಿ ಮೇ 17ರಂದು ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಗಿತ್ತು. [ಸಾವಿನಂಚಿನಲ್ಲಿದ್ದ ಅಮ್ಮನಿಗೆ ಮರುಜನ್ಮ ನೀಡಿದ ಮಗು!]
ಮೇ 17ರಂದು ಅಂತ್ಯಸಂಸ್ಕಾರದ ಕಾರ್ಯ ಮಾಡುವಾಗ ಪದ್ಮಾ ಅವರು ಕಣ್ಣುಬಿಟ್ಟು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ಮೃತಪಟ್ಟಿದ್ದಾರೆ. [ಮೈಮೇಲೆ ಮನೆ ಬಿದ್ದಿದ್ರೂ ಮಗುವನ್ನು ಹೊಟ್ಟೆಯಲ್ಲಿ ರಕ್ಷಿಸಿದ ಮಹಾತಾಯಿ!]
ಮಹೇಂದ್ರ ಕುಮಾರ್ ಲೋಡಾ ಮತ್ತು ಪದ್ಮಾ ಅವರು ಮೂಲತಃ ರಾಜಸ್ಥಾನದವರು. ಮೈಸೂರಿನ ಅಗ್ರಹಾರದಲ್ಲಿ ಅವರು ಹಲವು ವರ್ಷಗಳಿಂದ ವಾಸವಾಗಿದ್ದರು. ಪದ್ಮಾ ಅವರು ಮೃತಪಟ್ಟಿದ್ದಾರೆ ಎಂದು ಮೇ 17ರಂದು ರಾಜಸ್ಥಾನದಿಂದ ಸಂಬಂಧಿಕರನ್ನು ಮೈಸೂರಿಗೆ ಕರೆಸಲಾಗಿತ್ತು.