ರಾಮದಾಸ್ ವಿದೇಶಕ್ಕೆ; ಪ್ರೇಮ ಸತ್ಯಾಗ್ರಹಕ್ಕೆ ಸಜ್ಜು
ಮೈಸೂರು, ಫೆ. 15: ಪ್ರೇಮಾ-ರಾಮದಾಸ್ ಕೇಸ್ ಹೊಸ ತಿರುವು ಪಡೆದಿದೆ. ಇತ್ತ ವಿಶ್ರಾಂತಿ ಬಯಸಿ ರಾಮದಾಸ್ ವಿದೇಶಕ್ಕೆ ತೆರಳಲು ಸಜ್ಜಾಗುತ್ತಿದ್ದರೆ ಅತ್ತ ಪ್ರೇಮಕುಮಾರಿ ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ರಾಮದಾಸ್ ವಿರುದ್ಧ ಕೇಸುಗಳು ದಾಖಲಾಗಿವೆ. ಹೀಗಿರುವಾಗ ಅವರು ರಾತ್ರೋರಾತ್ರಿ ನಿನ್ನೆ ಬೆಂಗಳೂರಿಗೆ ತೆರಳಿದ್ದಾರೆ. ಅಲ್ಲಿಂದ ವಿದೇಶಕ್ಕೂ ಹೋಗಲು ಸಜ್ಜಾಗುತ್ತಿದ್ದಾರೆ. ಆದರೆ ಇದನ್ನು ತಾವು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದ್ದಾರೆ.
ತನಿಖೆ ಪೆಂಡಿಂಗ್ ಇರುವಾಗ ಒಂದು ವೇಳೆ ರಾಮದಾಸ್ ವಿದೇಶಕ್ಕೆ ತೆರಳಿದರೆ ಮುಖ್ಯಮಂತ್ರಿಗಳ ಮನೆಯ ಮುಂದೆಯೇ ಸತ್ಯಾಗ್ರಹ ನಡೆಸುವುದಾಗಿ ಪ್ರೇಮಕುಮಾರಿ ಹೇಳಿದ್ದಾರೆ.
ಹಿಂದಿನ ಸುದ್ದಿ: ನಿನ್ನೆ ರಾತ್ರಿ ಮೈಸೂರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಸೀದಾ ಬೆಂಗಳೂರಿಗೆ ಬಂದಿಳಿದಿದ್ದ ರಾಮದಾಸ್, ವಿಶ್ರಾಂತಿಗಾಗಿ ವಿದೇಶಕ್ಕೆ ತೆರಳಲಿದ್ದಾರೆ. ಆದರೆ ಎಲ್ಲಿಗೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. 'ರಾಮದಾಸ್ ಶನಿವಾರ ಸಂಜೆ ವಿದೇಶಕ್ಕೆ ತೆರಳಲಿದ್ದಾರೆ' ಎಂದಷ್ಟೇ ಮೂಲಗಳು ತಿಳಿಸಿವೆ.
ಬೆಳಗಿನ ಸುದ್ದಿ: ಪ್ರೇಮಪೀಡಿತ ರಾಮದಾಸ್ ಮನೆಗೆ ಬಂದಾಯ್ತು, ಮುಂದೇನು? ಎಂದು ಮೈಸೂರು ಜನತೆ ಚಾಮುಂಡೇಶ್ವರಿ ಬೆಟ್ಟದ ಕೆಳಗೆ ಕುಳಿತು ಮಾತನಾಡಿಕೊಳ್ಳುತ್ತಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿ ಅಸ್ಪತ್ರೆ ಪಾಲಾಗಿದ್ದ ಬಿಜೆಪಿ ಮಾಜಿ ಸಚಿವ ಎಸ್ ಎ ರಾಮದಾಸ್ ನಿನ್ನೆ ರಾತ್ರಿ 10.30ರ ಇರುಳಿನಲ್ಲಿ ಬಿಜಿಎಸ್- ಅಪೋಲೊ ಆಸ್ಪತ್ರೆಯ ವಿಶೇಷ ವಾರ್ಡಿನಿಂದ ಗಾಲಿಕುರ್ಚಿಯಲ್ಲಿ ಮನೆಗೆ ತೆರಳಿದ್ದಾರೆ. ಹೋಗುವಾಗ ಮಾಧ್ಯಮಗಳ ಎದುರು ಗದ್ಗದಿರತಾಗಿ ಅತ್ತಿದ್ದಾರೆ. ಸಾಂಸ್ಕೃತಿಕ ನಗರದ ಜನ ಮುಸಿಮುಸಿ ನಕ್ಕಿದ್ದಾರೆ.
ರಾಮದಾಸ್, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವರಾದರೂ ತಮ್ಮ ಮೇಲಿನ ಆರೋಪಗಳಿಂದ ಡಿಸ್ಚಾರ್ಜ್ ಆಗಿಲ್ಲ. ಅದರಿಂದ ಅವರಿಗೆ ಮುಕ್ತಿಯೂ ಇದ್ದಂತಿಲ್ಲ. ಏಕೆಂದರೆ ಪ್ರಕರಣದ ಕಥಾನಾಯಕಿ ಪ್ರೇಮಕುಮಾರಿ ರಾಮದಾಸ್ ವಿರುದ್ಧ ಖಡಕ್ಕಾಗಿಯೇ ಎದ್ದುನಿಂತಿದ್ದಾರೆ.
ರಾಮದಾಸ್ ಮತ್ತು ಆತನ ತಮ್ಮ ಶ್ರೀಕಾಂತದಾಸ್ ವಿರುದ್ಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರೇಮಕುಮಾರಿ ಕೇಸು ದಾಖಲಿಸಿದ್ದಾರೆ. ವಂಚನೆ, ಕೊಲೆ ಬೆದರಿಕೆ, ಕೊಲೆ ಯತ್ನದಂತಯಹ ಜಬರದಸ್ತ್ ಕೇಸುಗಳನ್ನು ಸೋದರರ ವಿರುದ್ಧ ದಾಖಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮಗೆ ಪ್ರಾಣ ಬೆದರಿಕೆಯಿರುವುದರಿಂದ ರಕ್ಷಣೆ ನೀಡಬೇಕು ಎಂದೂ ಪ್ರೇಮಕುಮಾರಿ ಅಲವತ್ತುಕೊಂಡಿದ್ದಾರಾದರೂ ಪೊಲೀಸರು ಅದಕ್ಕೆ ಸೊಪ್ಪು ಹಾಕಿಲ್ಲ.
ಇತ್ತ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಘಳಿಗೆಯಲ್ಲಿ ಅಳುತ್ತಾ ಮಾತನಾಡಿದ ರಾಮದಾಸ್, ಆತ್ಮಹತ್ಯೆ ಯತ್ನ ಮತ್ತು ಇಡೀ ಪ್ರಕರಣದ ಕುರಿತು ಪೊಲೀಸರ ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದ್ದಾರೆ. ಇದೇ ವೇಳೆ ತಮಗೆ ನೈತಿಕ ಬೆಂಬಲ ತುಂಬಿದ ಕಾರ್ಯಕರ್ತರಿಗೆ ಆಭಾರಿಯಾಗಿರುವುದಾಗಿಯೂ ಅವರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ರಾಮದಾಸ್, ಮುಂದಿನ ಚಿಕಿತ್ಸೆಗೆಂದು ಬೆಂಗಳೂರು ಸೇರಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.