ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ಗೊರವಯ್ಯ ನುಡಿದ ಭವಿಷ್ಯವಾಣಿ
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರನ ವಾರ್ಷಿಕ ಜಾತ್ರೆಯಲ್ಲಿ ಗೊರವಯ್ಯ ನುಡಿಯವ ವಾರ್ಷಿಕ ಕಾರ್ಣಿಕ ಭವಿಷ್ಯವಾಣಿಗೆ ಶತಮಾನಗಳ ಇತಿಹಾಸವಿದೆ.
ಮೈಲಾರನ ವಾರ್ಷಿಕ ಜಾತ್ರೆಯ ಕಾರ್ಣಿಕೋತ್ಸವ ಫೆ 14 ರಿಂದ ಪ್ರಾರಂಭವಾಗಿತ್ತು. ಫೆ 22 ರಂದು ಭಾರತ ಹುಣ್ಣಿಮೆ, ಫೆ.23 ಕ್ಕೆ ಧ್ವಜಾರೋಹಣ, ತ್ರಿಶೂಲ ಪೂಜೆ, ಮತ್ತು ಬುಧವಾರ (ಫೆ 24) ದಂದು ಮಲ್ಲಾಸುರನ ಸಂಹಾರಕ್ಕೆ ಡೆಂಕನಮರಡಿಗೆ ಹೋಗುವ ಜೊತೆಗೆ ಸಂಜೆ ಕಾರ್ಣಿಕೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಬುಧವಾರ ಸಂಪನ್ನವಾಯಿತು. (2016 ವರ್ಷ ಭವಿಷ್ಯ)
ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿಯನ್ನು ನೂತನವಾಗಿ ಆಯ್ಕೆಯಾದ 'ಗೊರವಯ್ಯ' ರಾಮಪ್ಪಜ್ಜ ಈ ಬಾರಿ ನುಡಿದಿದ್ದು ವಿಶೇಷ. 'ಸದ್ದಲೇ...ಮುತ್ತಿನ ರಾಶಿ ಮೂರಾ ದೀತಲೇ ಪರಾಕ್' ಎಂದು ಗೊರವಯ್ಯ ಭವಿಷ್ಯ ನುಡಿದಿದ್ದಾನೆ.
ಮೈಲಾರ ದೇವಸ್ಥಾನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ಅಶ್ವರೂಢರಾಗಿ ಡೆಂಕನ ಮರಡಿಗೆ ಆಗಮಿಸಿ ಕಾರ್ಣಿಕ ನುಡಿಯುವ ಗೊರವಪ್ಪನಿಗೆ ಭಂಡಾರ ಹಚ್ಚಿ ಆಶೀರ್ವಾದ ಮಾಡಿದ ನಂತರ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಈ ಕಾರ್ಣಿಕೋತ್ಸವ ಅಂತಿಮ ಹಂತ ತಲುಪಿತು. (ಹೊಸವರ್ಷದಲ್ಲಿ ಕೋಡಿಶ್ರೀಗಳ ಭವಿಷ್ಯ)
ಗೊರವಯ್ಯನ ಭವಿಷ್ಯವನ್ನು ಭಕ್ತರು ತಾಳೆ ಹಾಕುತ್ತಿದ್ದದ್ದು ಹೀಗೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಲಕ್ಷಾಂತರ ಭಕ್ತರು
ಧರ್ಮದರ್ಶಿಗಳ ಆಶೀರ್ವಾದದ ನಂತರ, ಗೊರವಪ್ಪ ತಂದು ನಿಲ್ಲಿಸಿದ ಬಿಲ್ಲನ್ನು ಏರಿ ಕಾರ್ಣಿಕ ನುಡಿಯನ್ನು ನುಡಿದ ಕೂಡಲೇ, ಕಿಕ್ಕಿರಿದು ತುಂಬಿದ್ದ ಭಕ್ತರ ಜೈಕಾರ, ಭಕ್ತಿಯ ಪರಾಕಾಷ್ಠೆ ಮುಗಿಲು ಮುಟ್ಟಿತ್ತು. 'ಏಳು ಕೋಟಿ, ಏಳು ಕೋಟಿ.. ಚಾಂಗಮಲೋ' ಎನ್ನುವ ಭಕ್ತರ ಉದ್ಘೋಷ ತಾರಕಕ್ಕೇರಿತ್ತು. ಬೇರೆ ರಾಜ್ಯಗಳಿಂದಲೂ ಲಕ್ಷಾಂತರ ಜನ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.
ಜನವೋ ಜನ
ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ಮೈಲಾರನ ಜಾತ್ರೆಗೆ ಈ ಬಾರಿ ಸುಮಾರು ನಾಲ್ಕು ಲಕ್ಷ ಜನ ಜಮಾಯಿಸಿದ್ದರು. ಕಾರ್ಣಿಕೋತ್ಸವ ನಡೆಯುವ ಸ್ಥಳ ಜನಸಂದಣಿಯಿಂದ ತುಂಬಿಹೋಗಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
ಗೊರವಯ್ಯನ ಕಾರ್ಣಿಕ
'ಮುತ್ತಿನ ರಾಶಿ ಮೂರಾ ದೀತಲೇ ಪರಾಕ್' ಎಂದು ಗೊರವಯ್ಯ ಭವಿಷ್ಯ ನುಡಿದ ಕೂಡಲೇ, ಭಕ್ತರು ಅದನ್ನು ತಮ್ಮದೇ ರೀತಿಯಲ್ಲಿ ತಾಳೆ ಹಾಕಲಾರಂಭಿಸಿದರು. ಕೆಲವರು ಭವಿಷ್ಯವನ್ನು ರಾಜಕೀಯಕ್ಕೆ ತಾಳೆಹಾಕಿ, ಪ್ರಮುಖ ಪಕ್ಷವೊಂದು ಮೂರು ಭಾಗವಾಗಲಿದೆ, ರಾಜಕೀಯ ಪರಿಸ್ಥಿತಿ ಹದೆಗೆಡಲಿದೆ ಎನ್ನುತ್ತಿದ್ದದ್ದು ಕೇಳಿಬರುತ್ತಿತ್ತು.
ಜನರು ಮಾತನಾಡಿಕೊಳ್ಳುತ್ತಿದ್ದದ್ದು
'ಮುತ್ತಿನ ರಾಶಿ ಮೂರಾ ದೀತಲೇ ಪರಾಕ್' ಎಂದರೆ, ಬೇಸಿಗೆ, ಚಳಿ ಮತ್ತು ಮಳೆಗಾಲ ಸಮಾನವಾಗಿ ಬರಲಿದ್ದು, ಮೂರೂ ಕಾಲದಲ್ಲಿ ಈ ಬಾರಿ ಉತ್ತಮ ಬೆಳೆ ಬರಲಿದೆ ಎಂದು ಕಾರ್ಣಿಕವನ್ನು ಜನರು ತಮ್ಮದೇ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ದರು.
ಸ್ವಾಮೀಜಿ, ರಾಜಕೀಯ ಮುಖಂಡರು ಭಾಗಿ
ಹಾವನೂರು, ಹೊಸರಿತ್ತಿ ಮಠಾಧೀಶರು ಸೇರಿದಂತೆ, ಸಚಿವ ಮತ್ತು ಉಸ್ತುವಾರಿ ಸಚಿವ ಪಿ. ಟಿ ಪರಮೇಶ್ವರನಾಯ್ಕ, ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಮುಂತಾದ ಗಣ್ಯರು ಕಾರ್ಣಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.