ಎಲ್ ಪಿಜಿ ಸಬ್ಸಿಡಿಗೆ ಬ್ಯಾಂಕ್ ಖಾತೆ ಲಿಂಕ್ ಕಡ್ಡಾಯ
ಬೆಂಗಳೂರು, ಜ. 16 : ಎಲ್ ಪಿಜಿ ಸಂಪರ್ಕ ಹೊಂದಿರುವವರು ಮಾರ್ಚ್ ಅಂತ್ಯದೊಳಗೆ ಬ್ಯಾಂಕ್ ಖಾತೆ ಸಂಖ್ಯೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಸಹಾಯಧನದಿಂದ ವಂಚಿತರಾಗುತ್ತಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬ್ಯಾಂಕ್ ಖಾತೆ ಹೊಂದಾಣಿಕೆ ಮಾಡದವರಿಗೆ ಏಪ್ರಿಲ್ 1ರಿಂದ ಸಹಾಯ ಧನಸಿಗುವುದಿಲ್ಲ. ಬ್ಯಾಂಕ್ ಖಾತೆ ಸಂಖ್ಯೆ ಹೊಂದಾಣಿಕೆ ಮಾಡುವುದು ಕಡ್ಡಾಯ. ಇದರ ಜತೆಗೆ ಆಧಾರ್ ಸಂಖ್ಯೆ ಹೊಂದಾಣಿಕೆ ಮಾಡಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.[ಬ್ಯಾಂಕ್ ಖಾತೆಗೆ ನೇರವಾಗಿ ಎಲ್ ಪಿಜಿ ಸಬ್ಸಿಡಿ ಪಾವತಿ]
ಕೇಂದ್ರ ಸರ್ಕಾರ ಗ್ರಾಮೀಣ ಭಾಗದಲ್ಲಿ ಸೀಮೆಎಣ್ಣೆ ಹಂಚಿಕೆ ಕಡಿಮೆ ಮಾಡಿತ್ತು. ಆದರೆ ರಾಜ್ಯ ಸರ್ಕಾರ ಮೊದಲಿನ ಸ್ಥಿತಿಯನ್ನೇ ಕಾಯ್ದುಕೊಳ್ಳಲಿದೆ. ಹಿಂದಿನಂತೆ ಬಿಪಿಎಲ್ ಕಾರ್ಡ್ ದಾರರಿಗೆ 5 ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕೆಲ ತೈಲ ಕಂಪನಿ ಬಿಪಿಎಲ್ ಕಾರ್ಡ್ ದಾರರಿಗೆ ಗ್ಯಾಸ್ ಸಂಪರ್ಕ ಹೊಂದಲು ಬಂಡವಾಳ ಹೂಡಲು ಸಿದ್ಧವಾಗಿವೆ. ನಗರದ 15 ಸಾವಿರ ಬಿಪಿಎಲ್ ಪಡಿತರ ಚೀಟಿದಾರರಿಗೆ ಈ ಸೌಲಭ್ಯ ಸಿಗಲಿದೆ. ಹೊಸದಾಗಿ ಅನಿಲ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುವ ಬಿಪಿಎಲ್ ಕುಟುಂಬಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.