ಔರಾದ್ ನಲ್ಲಿ ಜಮೀನು ಜಗಳಕ್ಕೆ ತಮ್ಮನನ್ನೇ ಕೊಂದ ಅಣ್ಣ
ಬೀದರ್, ಮೇ 22: ಇಲ್ಲಿನ ಔರಾದ್ ತಾಲೂಕಿನ ನಾರಾಯಣಪುರದಲ್ಲಿ ಜಮೀನು ಹಂಚಿಕೆ ವಿಚಾರದ ಅಸಮಾಧಾನ ಕೊಲೆಯಲ್ಲಿ ಅಂತ್ಯವಾಗಿದೆ. ಅಣ್ಣ್-ತಮ್ಮನ ಮಧ್ಯದ ಜಗಳದಲ್ಲಿ ತಮ್ಮನ ಕೊಲೆಯಾಗಿದೆ. ನಾರಾಯಣಾಪುರದ ಕಾಮಶೆಟ್ಟಿ ಬಿರಾದಾರ ಕೊಲೆಯಾದ ವ್ಯಕ್ತಿ.
ಹೊಲದಲ್ಲಿ ಕಾಮಶೆಟ್ಟಿ ಕೆಲಸ ಮಾಡುತ್ತಿದ್ದರು. ಆ ಸಮಯಕ್ಕೆ ಸ್ಥಳಕ್ಕೆ ಆತನ ಅಣ್ಣ ಅಮರೇಶ, ಅವರ ಮಕ್ಕಳಾದ ರೆವಣಪ್ಪ, ಸುರೇಶ ಬಂದಿದ್ದಾರೆ. ಆ ನಂತರ ಕಾಮಶೆಟ್ಟಿ ಅವರೊಂದಿಗೆ ಜಗಳ ತೆಗೆದು, ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.
ಅಮರೇಶ ಅವರಿಗೆ ಹಂಚಿಕೆಯಾಗಿದ್ದ ಜಮೀನಿನಲ್ಲಿ ಕಾಮಶೆಟ್ಟಿ ಉಳುಮೆ ಮಾಡುತ್ತಿದ್ದರಂತೆ ಆ ಕಾರಣಕ್ಕೆ ಆಮರೇಶ ಹಾಗೂ ಆತನ ಮಕ್ಕಳು ಹಲ್ಲೆ ನಡೆಸಿದ್ದಾರೆ. "ಸ್ಥಳಕ್ಕೆ ನಾನು, ಮಗ ರಜನಿಕಾಂತ ಬರುವಷ್ಟರಲ್ಲಿ ಮೂವರು ಆರೋಪಿಗಳು ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನನ್ನ ಪತಿ ಕಾಮಶೆಟ್ಟಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಮೃತರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಅಣ್ಣ-ತಮ್ಮಂದಿರು ಇಪ್ಪತ್ತು ವರ್ಷಗಳ ಹಿಂದೆಯೇ ಜಮೀನು ಹಂಚಿಕೊಂಡಿದ್ದರು. ಆದರೆ ಆ ಪ್ರಕಾರವಾಗಿ ಖಾತೆ ಮಾಡಿಕೊಂಡಿರಲಿಲ್ಲ. ಇದೇ ವಿಚಾರವಾಗಿ ಹತ್ತು ದಿನಗಳಿಂದ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು ಎಂದು ತಿಳಿಸಲಾಗಿದೆ.
{promotion-urls}