ಉಡುಪಿ : ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯನ ಕೊಲೆ ಯತ್ನ
ಉಡುಪಿ, ಜೂನ್ 16 : ಉಡುಪಿ ಜಿಲ್ಲಾ ಪಂಚಾಯಿತಿಯ ಬಿಜೆಪಿ ಸದಸ್ಯ ಸುಮಿತ್ ಶೆಟ್ಟಿ ಕೊಲೆ ಯತ್ನ ನಡೆದಿದೆ. ಕಾರ್ಕಳ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಬುಧವಾರ ತಡರಾತ್ರಿ ಸುಮಿತ್ ಶೆಟ್ಟಿ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ನಡೆದಿದೆ. ವರಬಾಡಿ ಪ್ರವೀಣ್ ತಂಡದವರು ಈ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. [ಧಾರವಾಡದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನ ಹತ್ಯೆ]
ಹಲ್ಲೆಯಿಂದ ಗಾಯಗೊಂಡಿರುವ ಸುಮಿತ್ ಶೆಟ್ಟಿ ಮತ್ತು ಅವರ ಸ್ನೇಹಿತರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವರಬಾಡಿ ಪ್ರವೀಣ್ ತಂಡದವರು ಸುಮಿತ್ಗೆ ಹಣ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. [ಧಾರವಾಡ: ಯೋಗೇಶಗೌಡ ಕೊಲೆ ಹಿಂದೆ ಕಾಣದ ಕೈ ಕೈವಾಡ]
ಹಣ ನೀಡಿದ ಹಿನ್ನಲೆಯಲ್ಲಿ ಅವರನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ. ಸುಮಿತ್ ಶೆಟ್ಟಿ ಅವರು ಈ ಕುರಿತು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ : 2 ದಿನಗಳ ಹಿಂದೆ ವಿಶ್ವ ಪೂಜಾರಿ ಕೊಡಿಕಲ್ ಎಂಬುವವರು ಸುಮಿತ್ ಶೆಟ್ಟಿ ಅವರಿಗೆ ಕರೆ ಮಾಡಿ ಹಣ ನೀಡುವಂತೆ ಪೀಡಿಸಿದ್ದರು. ಬುಧವಾರ ಪ್ರವೀಣ್ ಕುಲಾಲ್ ಎಂಬುವವರು ಕರೆ ಮಾಡಿ, ಸುಮಿತ್ ಅವರನ್ನು ಭೇಟಿ ಮಾಡಿದ್ದರು. ಹಿರಿಯಡ್ಕದಲ್ಲಿ ಭೇಟಿ ಮಾಡಿದಾಗ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಸುಮಿತ್ ಹಣ ನೀಡಲು ನಿರಾಕರಿಸಿದ್ದರು.
ಬುಧವಾರ ರಾತ್ರಿ ರೌಡಿಶೀಟರ್ ತೆಳ್ಳಾರು ಸೋಮು ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ್ದ. ರಾತ್ರಿ ಹಣ ಪಡೆಯಲು ಬಂದಾಗ ಸುಮಿತ್ ಶೆಟ್ಟಿ ಸ್ನೇಹಿತರು ಆತನನ್ನು ಹಿಡಿದಿಟ್ಟುಕೊಂಡಿದ್ದರು. ಆಗ ಸೋಮು ಪ್ರವೀನ್ಗೆ ಫೋನ್ ಮಾಡಿದ್ದರು.
ರಾತ್ರಿ 10.30ರ ಸುಮಾರಿಗೆ ಬಂದ ಪ್ರವೀಣ್ ಮತ್ತು ಆತನ ಸಹಚರರು ಸ್ಥಳಕ್ಕೆ ಬಂದಾಗ ಪಿಸ್ತೂಲ್ನಿಂದ ನೆಲಕ್ಕೆ ಗುಂಡು ಹಾರಿಸಿದ್ದಾರೆ. ನಂತರ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿ, ಸೋಮುವನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.