ಹೆತ್ತ ಮಗುವನ್ನೇ ಚರಂಡಿಗೆ ಎಸೆದ ನಿರ್ದಯಿ ತಾಯಿ!
ಮಂಡ್ಯ, ಮೇ 22 : ಹೆತ್ತ ಮಗುವನ್ನೇ ಚರಂಡಿಗೆ ಎಸೆದು ಪರಾರಿಯಾಗುತ್ತಿದ್ದ ನಿರ್ದಯಿ ತಾಯಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಕನಕಪುರ ತಾಲೂಕು ಬುವಳ್ಳಿ ಗ್ರಾಮದ ಮಹದೇವನ ಪತ್ನಿ ಸವಿತಾ ಎಂಬಾಕೆಯೇ ಮಗುವನ್ನು ಚರಂಡಿಗೆ ಎಸೆದ 'ಮಹಾ'ತಾಯಿ. ಈಕೆ ಶನಿವಾರ ಮಧ್ಯಾಹ್ನ 3.30ಕ್ಕೆ ಪಟ್ಟಣದ ಆಸ್ಪತ್ರೆಗೆ ಧಾವಿಸಿ ವೈದ್ಯರ ಬಳಿ ಪರೀಕ್ಷಿಸಿದ್ದಾಳೆ. ನಂತರ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನನವಾಗಿದೆ.
ಜನನವಾದ ನಂತರ ಮಗುವನ್ನು ಎಸೆದು ಪರಾರಿಯಾಗಲು ಯತ್ನಿಸಿದ್ದಾಳೆ. ಇದನ್ನು ಗಮನಿಸಿದ ಆಸ್ಪತ್ರೆಯ ದಾದಿಯರು ಮಗುವನ್ನು ಎತ್ತಿಕೊಂಡು, ಆಕೆಯನ್ನು ಸಾರ್ವಜನಿಕರ ಸಹಾಯದಿಂದ ಹಿಡಿದು, ಪೊಲೀಸರು ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. [ಅಕ್ಷರದಿಂದ ಅಮ್ಮಂದಿರ ವರ್ಣಿಸಲು ಸಾಧ್ಯವಿಲ್ಲ]
ನಂತರ ಆಕೆಗೆ ಆಸ್ಪತ್ರೆಯಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಗುವನ್ನು ಯಾಕೆ ಎಸೆದಿದ್ದು, ಅಂತಹ ಸಂದರ್ಭವಾದರೂ ಏಕೆ ಬಂದಿತು ಎಂಬುದು ವಿಚಾರಣೆಯಿಂದ ತಿಳಿದುಬರಬೇಕಿದೆ.
ಜಿಂಕೆ ಬೇಟೆಯಾಡಿದ ಬೇಟೆಗಾರರ ಬಂಧನ
ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಜಿಂಕೆ ಬೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುತ್ತಿದ್ದ ಐದು ಮಂದಿ ಬೇಟೆಗಾರರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. [ಸಂತೇಮರಹಳ್ಳಿ ಬಳಿ ವಾಹನ ಡಿಕ್ಕಿಯಾಗಿ ಜಿಂಕೆ ಸಾವು]
ನಂಜಯ್ಯ, ಶಿವಯ್ಯ, ಬೋರಯ್ಯ, ಶಿವನಂಜಯ್ಯ, ಮುನಿವೆಂಕಟಯ್ಯ, ರಾಜು, ವೆಂಕಟೇಶ್, ಚಿಕ್ಕಲಿಂಗಯ್ಯ ಎಂಬುವರು ಕಾಡಿನ ಮಧ್ಯೆ ಇರುವ ತೊಟ್ಟಿಲು ಮಡುವಿನ ಹಳ್ಳದಲ್ಲಿ ಜಿಂಕೆಯೊಂದನ್ನು ಬೇಟೆಯಾಡಿದ್ದಾರೆ. ಬಳಿಕ ಮಾಂಸವನ್ನು ಸಮಪಾಲು ಮಾಡಲು ಮುಂದಾಗಿದ್ದಾರೆ.
ಈ ಸಂದರ್ಭ ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ದಿನೇಶ್ ನೇತೃತ್ವದ ತಂಡ ದಾಳಿ ಮಾಡಿದೆ. ಈ ಸಂದರ್ಭ ಎಂಟು ಮಂದಿ ಪೈಕಿ ರಾಜು, ವೆಂಕಟೇಶ್, ಚಿಕ್ಕಲಿಂಗಯ್ಯ ಎಂಬುವರು ಪರಾರಿಯಾದರೆ. ನಂಜಯ್ಯ, ಶಿವಯ್ಯ, ಬೋರಯ್ಯ, ಶಿವನಂಜಯ್ಯ, ಮುನಿವೆಂಕಟಯ್ಯ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಿ, ಮಾಂಸ ಮತ್ತು ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕಾಡಿನಂಚಿನ ಗ್ರಾಮ ಸೂಲಬದವರು. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ದಿನೇಶ್ ಅವರೊಂದಿಗೆ ಸಿಬ್ಬಂದಿಗಳಾದ ನಂದೀಶ್, ಸಾಜು, ವಿನಾಯಕ್, ಮಲ್ಲಿಕಾನಾಥ್, ತಿಮ್ಮಪ್ಪ, ನಾಗರಾಜು, ಮುನಿಮುತ್ತು ಪಾಲ್ಗೊಂಡಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.