ವ್ಯವಸ್ಥೆಯಿದ್ದರೂ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ಮಡಿಕೇರಿ, ಜೂನ್ 13 : ಮಕ್ಕಳಿಗೆ ಅನುಕೂಲವಾಗುವಂತಹ ಸುಂದರ ಪರಿಸರ, ಸುಸಜ್ಜಿತ ಭವ್ಯ ಕಟ್ಟಡವೂ ಇದೆ. ಆದರೆ ವಿದ್ಯಾರ್ಥಿಗಳಿಗೆ ವಿದ್ಯೆ ಹೇಳಿಕೊಡಲು ಈ ಕಾಲೇಜಿನಲ್ಲಿ ಉಪನ್ಯಾಸಕರೇ ಇಲ್ವೆ? ಹೀಗೂ ಉಂಟೆ ಅಂತ ನಿಮಗೆ ಅಚ್ಚರಿಯಾಗಬಹುದು, ಆದರೆ ಇದು ಸತ್ಯಸ್ಯಸತ್ಯ.
ಸೋಮವಾರಪೇಟೆ ತಾಲೂಕಿಗೆ ಸೇರುವ ಗರಗಂದೂರು ಗ್ರಾಮದಲ್ಲಿರುವ ಮೊರಾಜಿ ದೇಸಾಯಿ ವಸತಿ ಪದವಿಪೂರ್ವ ಕಾಲೇಜೇ ಕುಖ್ಯಾತಿ ಪಡೆದಿರುವ ನತದೃಷ್ಟ ಕಾಲೇಜು. ಇಲ್ಲಿ ಉಪನ್ಯಾಸಕರಿಲ್ಲದ ಕಾರಣ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ಜಾತಿಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗರಗಂದೂರಿನಲ್ಲಿ 2015-16ನೇ ಸಾಲಿನಿಂದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಆಶ್ರಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ನಡೆಸುತ್ತಾ ಬರಲಾಗುತ್ತಿದೆ. ಈ ಕಾಲೇಜು ಈ ಹಿಂದೆ ಮಡಿಕೇರಿಯಲ್ಲಿ ನಡೆಯುತ್ತಿತ್ತು. ತದ ನಂತರ ಗರಗಂದೂರಿಗೆ ವರ್ಗಾಯಿಸಲಾಯಿತು. [ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಮಂಡ್ಯದ ಸರ್ಕಾರಿ ಶಾಲೆ]
ಕಾಲೇಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಪನ್ಯಾಸಕರು ಮಕ್ಕಳಿಗೆ ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದರು. ಹೀಗಾಗಿ 2016ನೇ ಸಾಲಿನಲ್ಲಿ ಗರಗಂದೂರು ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಶೇ.93.3ರಷ್ಟು ಬಂದಿದೆ. ಈ ಪೈಕಿ ಇಬ್ಬರು ಉನ್ನತ ಶ್ರೇಣಿ, ಒಬ್ಬ ದ್ವಿತೀಯ ಶ್ರೇಣಿಯಲ್ಲಿ ಉಳಿದವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಗಮನಸೆಳೆದಿದ್ದಾರೆ.
ಇಂತಹ ಕಾಲೇಜಿನಲ್ಲಿ ಇದೀಗ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ಓದಿಗೆ ಸಂಚಕಾರ ಬಂದಿದೆ. ಇದಕ್ಕೆ ಕಾರಣವೂ ಇದೆ. ಸರ್ಕಾರದ ದ್ವಂದ್ವ ನೀತಿಯಿಂದಾಗಿ ಕಳೆದ ಆರು ವರ್ಷಗಳಿಂದ ಈ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ಏಕಾಏಕಿ ತೆಗೆದು ಹಾಕಲಾಗಿದೆ. ಈ ಕಾರಣದಿಂದಾಗಿ ಇದೀಗ ಕಾಲೇಜು ಆರಂಭವಾದರೂ ವಿದ್ಯಾರ್ಥಿಗಳು ಶಿಕ್ಷಕರಿಲ್ಲದೆ ಕಾಲಹರಣ ಮಾಡಬೇಕಾಗಿದೆ.
ಮತ್ತೊಂದೆಡೆ ಹಂಗಾಮಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕರಿಗೂ ಸಮಸ್ಯೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೂಡಲೇ ಉಪನ್ಯಾಸಕರ ನೇಮಕ ಮಾಡಬೇಕೆಂಬುದು ಪೋಷಕರ ಆಗ್ರಹವಾಗಿದೆ. ಸರಕಾರ ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂಬುದು ಅವರ ಒಕ್ಕೊರಲ ಕೂಗಾಗಿದೆ. [ಕೊಡಗು ಪ್ರವಾಸಿಗರಿಗೆ ಸ್ವರ್ಗ, ವೈದ್ಯರಿಗೆ ಮಾತ್ರ ನರಕ!]
ಈ ಕುರಿತಂತೆ ಪ್ರತಿಕ್ರಿಯಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಕೆ.ಡಿ.ನೀತಾ ಅವರು, ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲಾ ಮೂಲಭೂತ ಸೌಲಭ್ಯವಿದೆ. ಗುತ್ತಿಗೆ ಆಧಾರಿತ ಉಪನ್ಯಾಸಕರನ್ನು ನೇಮಕ ಮಾಡಲು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆ ಹಿರಿಯ ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ. ಸದ್ಯದಲ್ಲೇ ಉಪನ್ಯಾಸಕರ ನೇಮಕ ಆಗಲಿದೆ ಎಂದು ತಿಳಿಸಿದ್ದಾರೆ.
ಸದ್ಯ ವಿದ್ಯಾರ್ಥಿಗಳು ಉಪನ್ಯಾಸಕರಿಲ್ಲದ ಕಾರಣ ಕಾಲೇಜಿನ ಸುತ್ತಮುತ್ತ ಬೆಳೆದಿರುವ ಕಾಡನ್ನು ಕಡಿದು ಸ್ವಚ್ಛಗೊಳಿಸುತ್ತಿದ್ದಾರೆ. ಸಂಬಂಧಿಸಿದವರು ಇತ್ತ ಗಮನಹರಿಸಿ ಕಾಲೇಜಿಗೆ ಉಪನ್ಯಾಸಕರ ನೇಮಕವನ್ನು ಮಾಡಬೇಕಿದೆ. ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಮೂರಾಬಟ್ಟೆಯಾಗುವುದರಲ್ಲಿ ಸಂಶಯವಿಲ್ಲ. ಏನು ಹೇಳ್ತೀರಿ ಎಚ್ ಆಂಜನೇಯ ಅವರೆ? [ಮಳೆಗಾಲದ ಕಲ್ಪವೃಕ್ಷ, ರೈತರಿಗೆ ವರದಾನ ಪಣಂಪುಳಿ]