ಮೋದಿ ಸರಕಾರಕ್ಕೆ 3ವರ್ಷ: ಗೌಡ್ರು, ಕುಮಾರಣ್ಣ ನೀಡಿದ ಸರ್ಟಿಫಿಕೇಟ್
ನರೇಂದ್ರ ಮೋದಿ ಸರಕಾರ 3ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ 'ಮೋದಿ ಸರಕಾರದ ಸಾಧನೆಯ' ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ವಿಜಯಪುರ, ಮೇ 27: ಕೇಂದ್ರದಲ್ಲಿ ಮೋದಿ ಸರಕಾರ ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ 'ಮೋದಿ ಸರಕಾರದ ಸಾಧನೆಯ' ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದಿನ ಪ್ರಧಾನಮಂತ್ರಿಗಳೇನೂ ಮಲಗಿಕೊಂಡಿರಲಿಲ್ಲ ಎಂದು ಗೌಡ್ರು ಅಭಿಪ್ರಾಯ ವ್ಯಕ್ತಪಡಿಸಿದರೆ, ಕಾರ್ಪೋರೇಟ್ ಕಂಪೆನಿಗಳಿಗೆ ಭ್ರಷ್ಟಾಚಾರ ನೀಡಲು ಗುತ್ತಿಗೆ ನೀಡಲಾಗಿದೆ ಎಂದು ಕುಮಾರಸ್ವಾಮಿ, ಮೋದಿ ಮೂರು ವರ್ಷದ ಕಾರ್ಯವೈಖರಿಗೆ ಸರ್ಟಿಫಿಕೇಟ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ (ಮೇ 26) ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ದೇವೇಗೌಡ್ರು, ನಾವು ಹಳ್ಳಿಯವರು ಹಾಗಾಗಿ ನಾವು ಮಾಡಿದ ಕೆಲಸಕ್ಕೆ ಪ್ರಚಾರ ಸಿಗಲಿಲ್ಲ ಎನ್ನುವ ಮೂಲಕ, ಪರೋಕ್ಷವಾಗಿ ಮೋದಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ ಎನ್ನುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.
ಅತ್ತ ವಿಜಯಪುರದಲ್ಲಿ ಮೋದಿ ಮೂರು ವರ್ಷದ ಕಾರ್ಯವೈಖರಿಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಿದ್ದ ಕುಮಾರಸ್ವಾಮಿ, ತಮ್ಮ ಪರಮಾಪ್ತ ಎರಡು ಕಂಪೆನಿಗಳಿಗೆ ಭ್ರಷ್ಟಾಚಾರ ನಡೆಸಲು ಗುತ್ತಿಗೆ ನೀಡಿರುವುದೇ ಮೋದಿ ಸರಕಾರದ ಮೂರು ವರ್ಷದ ಸಾಧನೆಯೆಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ನೋಟು ನಿಷೇಧಗೊಳಿಸಿ ಕೇಂದ್ರ ಸರಕಾರ ಸಾಧಿಸಿದ್ದೇನು, ಇದರಿಂದ ಎಷ್ಟು ಕಪ್ಪುಹಣ ಸರಕಾರದ ವಶಕ್ಕೆ ಬಂದಿದೆ ಎನ್ನುವ ಲೆಕ್ಕಾಚಾರ ಕೇಂದ್ರ ಸರಕಾರವಾಗಲಿ, ರಿಸರ್ವ ಬ್ಯಾಂಕ್ ಇನ್ನೂ ನೀಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಂದೆ ಓದಿ..
ಚುನಾವಣೆಯಲ್ಲಿ ಭರವಸೆ ನೀಡಿದ್ದು ಯಾವುದೂ ಆಗಿಲ್ಲ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಟ್ಟದಷ್ಟು ಭರವಸೆ ನೀಡಿದ್ದ ಮೋದಿ ಸರಕಾರ ಸಾಧಿಸಿದ್ದು ಏನೂ ಇಲ್ಲ. ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಮೊತ್ತ ಎನ್ಫಿಎ (Non performing asset) ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದೇ ರೀತಿ ಮುಂದುವರಿದರೆ ಬ್ಯಾಂಕುಗಳು ದಿವಾಳಿಯಾಗುವ ಸ್ಥಿತಿಗೆ ಬರಬಹುದು - ಕುಮಾರಸ್ವಾಮಿ.
ದೇವೇಗೌಡ ಅಭಿಪ್ರಾಯ
ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, ಮೋದಿ ಚೆನ್ನಾಗಿ ಕೆಲಸ ಮಾಡಿದ್ದಾರೆಂದು ವ್ಯಂಗ್ಯವಾಡಿದ ದೇವೇಗೌಡ, ಅಸ್ಸಾಂನಲ್ಲಿ ಇಂದು ಲೋಕಾರ್ಪಣೆಗೊಂಡ ಸೇತುವೆ ಮೂರು ವರ್ಷದ ಹಿಂದೆ ಶುರುವಾಗಿದ್ದಲ್ಲ, ಇದು ನಾನು ಶಂಕುಸ್ಥಾಪನೆ ನೆರವೇರಿಸಿದ ಯೋಜನೆ ಎಂದು ಗೌಡ್ರು ಹೇಳಿದ್ದಾರೆ.
ನಾವು ಹಳ್ಳಿಜನ, ನಮಗೆ ಪ್ರಚಾರ ಸಿಗುವುದಿಲ್ಲ
ನಾನೂ ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ, ಪ್ರಧಾನಿಯಾದವರು ಎಲ್ಲರೂ ಕೆಲಸ ಮಾಡುತ್ತಾರೆ. ಯಾರೂ ಮಲಗಿಕೊಂಡು ಇರುವುದಿಲ್ಲ. ಆದರೆ ನಾವು ಹಳ್ಳಿಜನಗಳು, ಹಾಗಾಗಿ ನಮಗೆ ನೀವು ಪ್ರಚಾರ ನೀಡುವುದಿಲ್ಲ ಎಂದು ಮಾಧ್ಯಮದವರತ್ತ ನಸುನಕ್ಕು ಗೌಡ್ರು ಕಾರು ಹತ್ತಿದರು.
ಕಾರ್ಪೋರೇಟ್ ಕಂಪೆನಿಯ ಇಬ್ಬರು ಯಾವಾಗಲೂ ಪ್ರಧಾನಿ ಜೊತೆ
ಪ್ರಧಾನಿ ವಿದೇಶ ಪ್ರವಾಸಕ್ಕೆ ಹೋದಾಗಲೆಲ್ಲಾ, ಕಾರ್ಪೋರೇಟ್ ಕಂಪೆನಿಯ ಇಬ್ಬರು ಪ್ರಧಾನಿ ಜೊತೆ ಇರುತ್ತಾರೆ. ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆ ಯಶಸ್ವೀ ಯೋಜನೆಯಲ್ಲ - ಕುಮಾರಸ್ವಾಮಿ.
ಫಸಲ್ ಭೀಮಾ ಯೋಜನೆಗೆ ಖಾಸಗಿಯವರಿಗೆ
ಫಸಲ್ ಭೀಮಾ ಯೋಜನೆಯ ಜವಾಬ್ದಾರಿಯನ್ನು ಖಾಸಗಿ ಕಂಪೆನಿಗೆ ನೀಡಲಾಗಿದೆ. ಹಾಗಾಗಿ ರೈತರಿಗೆ ಇದರಿಂದ ಹೇಗೆ ಉಪಯೋಗವಾಗಲು ಸಾಧ್ಯ? ಖಾಸಗಿ ಕಂಪೆನಿಗಳು ಲಾಭದ ದೃಷ್ಟಿಯಿಂದಲೇ ಕೆಲಸ ಮಾಡುವುದಲ್ಲವೇ ಎಂದು ಕುಮಾರಸ್ವಾಮಿ, ಮೋದಿ ಸರಕಾರವನ್ನು ಪ್ರಶ್ನಿಸಿದ್ದಾರೆ.