ಶಾಸಕ ವಿಜಯಾನಂದ ಕಾಶಪ್ಪನವರಗೆ ಕ್ಲೀನ್ ಚಿಟ್
ಸೋಮವಾರ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪಿ.ಬಾಲಕೃಷ್ಣ ಮಾರಣಾಂತಿಕ ಹಲ್ಲೆ ಪ್ರಕರಣದ ತೀರ್ಪು ಪ್ರಕಟಿಸಿದರು. ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಎಲ್ಲ 13 ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿ, ನಿರ್ದೋಷಿಗಳೆಂದು ತೀರ್ಪಿನಲ್ಲಿ ತಿಳಿಸಿದರು.
ಈ ತೀರ್ಪಿನಿಂದ ಜನಪ್ರತಿನಿಧಿಗಳ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದ ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ನಿರಾಳರಾಗಿದ್ದಾರೆ. ತೀರ್ಪು ಪಕ್ರಟವಾಗುತ್ತಿದ್ದಂತೆ ವಿಜಯಾನಂದ ಕಾಶಪ್ಪನವರ ಬೆಂಬಲಿಗರು ನ್ಯಾಯಾಲಯದ ಮುಂದೆ ವಿಜಯೋತ್ಸವ ಆಚರಿಸಿದರು.
ಪ್ರಕರಣವೇನು : 2009ರ ಫೆಬ್ರವರಿ 6ರಂದು ಗ್ರಾನೈಟ್ ಫ್ಯಾಕ್ಟರಿ ಕೆಲಸ ಮುಗಿಸಿ ವಾಹನದಲ್ಲಿ ಮರಳುತ್ತಿದ್ದಾಗ, ಇಳಕಲ್ ಪಟ್ಟಣದ ಬಸವೇಶ್ವರ ವೃತ್ತದ ಬಳಿ ತಮ್ಮ ಹಾಗೂ ಏಳು ಸಹವರ್ತಿಗಳ ಮೇಲೆ ವಿಜಯಾನಂದ ಕಾಶಪ್ಪನವರ ಹಾಗೂ ಅವರ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹುನಗುಂದ ತಾಲೂಕಿನ ಹೇರೂರ ಗ್ರಾಮದ ಮಲ್ಲಿಕಾರ್ಜುನ ಶಿವನಾಗಪ್ಪ ಕೊಡಗಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಇಳಕಲ್ ಠಾಣೆ ಪೊಲೀಸರು ವಿಜಯಾನಂದ ಕಾಶಪ್ಪನವರ ಸೇರಿದಂತೆ 13 ಆರೋಪಿಗಳ ವಿರುದ್ಧ ಹುನಗುಂದ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ 2009 ಜೂನ್ 15ರಂದು ಚಾರ್ಚ್ ಶೀಟ್ ಸಲ್ಲಿಸಿದ್ದರು. ಪ್ರಕರಣದ ಸ್ವರೂಪ ಆಧರಿಸಿ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಪ್ರಕರಣ ವರ್ಗಾವಣೆ ಮಾಡಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಧೀಶ ಪಿ.ಬಾಲಕೃಷ್ಣ ಅವರು ಅ.22ರಂದು ತೀರ್ಪು ನೀಡಬೇಕಾಗಿತ್ತು. ಆದರೆ, ತೀರ್ಪನ್ನು 24 ಕ್ಕೆ ನಂತರ 28ಕ್ಕೆ ಮುಂದೂಡಿದ್ದರು. ಸೋಮವಾರ ಸಂಜೆ ತೀರ್ಪು ಪ್ರಕಟಗೊಂಡಿದ್ದು, ಆರೋಪಿಗಳನ್ನು ನಿರ್ದೋಷಿಗಳೆಂಬ ತೀರ್ಪು ಹೊರಬಿದ್ದಿದೆ.