ಆನಂದ್ ಸಿಂಗ್ ರಾಜೀನಾಮೆ, ಬಿಜೆಪಿ ನಾಯಕರು ಹೇಳುವುದೇನು?
ಬೆಂಗಳೂರು, ಏ. 15 : ರಾಜೀನಾಮೆ ನೀಡಿರುವ ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಮನವೊಲಿಕೆ ಕಾರ್ಯ ಮುಂದುವರೆದಿದೆ. ರಾಜೀನಾಮೆ ಪತ್ರವಿನ್ನೂ ಸ್ಪೀಕರ್ ಕಚೇರಿ ತಲುಪಿಲ್ಲ, ಆದ್ದರಿಂದ ಅಂಗೀಕಾರವಾಗಿಲ್ಲ. ಬಿಜೆಪಿ ನಾಯಕರು ರಾಜೀನಾಮೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಾಸಕ ಆನಂದ್ ಸಿಂಗ್ ಸೋಮವಾರ ಜೈಲಿನಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪತ್ರವನ್ನು ಎಡಿಜಿಪಿ ಅವರ ಮೂಲಕ ಕಳಿಸಿದ್ದರು. ಆದರೆ, ಮಂಗಳವಾರ ರಜಾ ದಿನವಾದ ಕಾರಣ ರಾಜೀನಾಮೆ ಪತ್ರ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಕಚೇರಿ ತಲುಪಿಲ್ಲ. [ಬಿಜೆಪಿ ಶಾಸಕ ಆನಂದ್ ಸಿಂಗ್ ರಾಜೀನಾಮೆ]
ಮಂಗಳವಾರ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜೂಗೌಡ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ರಾಜೀನಾಮೆ ವಾಪಸ್ ಪಡೆಯುವಂತೆ ಆನಂದ್ ಸಿಂಗ್ ಮನವೊಲಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜೀನಾಮೆ ವಾಪಸ್ ಪಡೆಯಲು ಒತ್ತಾಯಿಸಿ ಕರೆ ನೀಡಿದ್ದ ಹೊಸಪೇಟೆ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇತ್ತ ಬಿಜೆಪಿ ನಾಯಕರು ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಮೌನ ವಹಿಸಿದ್ದಾರೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರಾಜೀನಾಮೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನನ್ನ ಕೈಗೆ ರಾಜೀನಾಮೆ ಪತ್ರ ತಲುಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ನೀಡಿರುವ ಆನಂದ್ ಸಿಂಗ್
ವಿಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಸಿಂಗ್ ಪರಪ್ಪನ ಅಗ್ರಹಾರ ಜೈಲಿನಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ಮನವೊಲಿಕೆ ಕಾರ್ಯ ನಡೆಯುತ್ತಿದೆ. ರಾಜೀನಾಮೆ ಪತ್ರವಿನ್ನೂ ಸ್ಪೀಕರ್ ಕಚೇರಿ ತಲುಪಿಲ್ಲ. ಆದ್ದರಿಂದ ಅಂಗೀಕಾರವಾಗಿಲ್ಲ.
ರಾಜೀನಾಮೆ ಪತ್ರ ಬಂದಿಲ್ಲ
ಆನಂದ್ ಸಿಂಗ್ ರಾಜೀನಾಮೆ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ, ತಮ್ಮ ಕಚೇರಿಗೆ ರಾಜೀನಾಮೆ ಪತ್ರ ತಲುಪಿಲ್ಲ. ಶಾಸಕರು ಖುದ್ದಾಗಿ ಬಂದು ಅಂಗೀಕಾರ ನೀಡುವ ತನಕ ಅಂಗೀಕಾರ ಮಾಡಲು ಬರುವುದಿಲ್ಲ, ಪತ್ರ ಬಂದರೆ ಈ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಅಂತಿಮ ತೀರ್ಪು ಬರುವ ತನಕ ಕಾಯಲಿ
ಶಾಸಕ ಆನಂದ್ ಸಿಂಗ್ ರಾಜೀನಾಮೆ ಪತ್ರ ಅಧಿಕೃತವಾಗಿ ನನ್ನ ಕೈ ಸೇರಿಲ್ಲ. ಸದ್ಯ ಶಾಸಕರು ಜೈಲಿನಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಪು ಬರುವ ತನಕ ಕಾಯುವುದು ಉತ್ತಮ ಎಂಬುದು ನನ್ನ ಭಾವನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ರಾಜೀನಾಮೆ ಬಗ್ಗೆ ಮಾಹಿತಿ ಇಲ್ಲ
ಆನಂದ್ ಸಿಂಗ್ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಶಾಸಕರ ರಾಜೀನಾಮೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜೂಗೌಡ ಭೇಟಿ ಮನವೊಲಿಕೆ
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಸುರಪುರ ಶಾಸಕ ರಾಜೂಗೌಡ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮನವೊಲಿಕೆ ಮಾಡಿದ್ದಾರೆ. ಸಿಂಗ್ ರಾಜೀನಾಮೆ ಅಂಗೀಕಾರವಾಗಲಿದೆಯೇ? ಎಂಬ ಪ್ರಶ್ನೆಗೆ ಬುಧವಾರ ಉತ್ತರ ದೊರೆಯುವ ಸಾಧ್ಯತೆ ಇದೆ.