ಬೆನ್ನಿಹಿನ್ ಬೆಂಗಳೂರಿಗೆ ಬರುತ್ತಿಲ್ಲ: ಇದು ಅಧಿಕೃತ
'ಸ್ವತಃ ಬೆನ್ ಹಿನ್ ತನ್ನ ಬೆಂಗಳೂರು ಭೇಟಿಯನ್ನು ರದ್ದುಪಡಿಸಿದ್ದಾರೆ' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಸುವ್ಯವಸ್ಥೆ) ಕಮಲ್ ಪಂತ್ ಅವರನ್ನು ಉಲ್ಲೇಖಿಸಿ ibnlive ರಾಷ್ಟ್ರೀಯ ಟಿವಿ ಚಾನೆಲ್ ಸ್ಪಷ್ಟಪಡಿಸಿದೆ.
ಆದಾಗ್ಯೂ, ನಾಳೆ ಬುಧವಾರದಿಂದ ನಡೆಯುವ ಸಾಮೂಹಿಕ ಪ್ರಾರ್ಥನೆ ಸಮಾರಂಭ ಅಬಾಧಿತವಾಗಿ ನಡೆಯಲಿದೆ. ಆದರೆ ಬೆನ್ ಹಿನ್ ಅನುಪಸ್ಥಿತಿ ಎದ್ದುಕಾಣಲಿದೆ ಎಂದು ವರದಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಇದೇ ನಾಳೆ ಬುಧವಾರ 15 ರಿಂದ 19ರವರಿಗೆ ನಗರದ ಯಲಹಂಕ ಸಮೀಪದಲ್ಲಿ ಕ್ರೈಸ್ತ ಧರ್ಮಗುರು ಬೆನ್ ಹಿನ್ ಸಾಮೂಹಿಕ ಚಿಕಿತ್ಸೆ/ಪ್ರಾರ್ಥನೆ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಈ ಸಮಾರಂಭವನ್ನು ಕ್ರೈಸ್ತ ಧರ್ಮದ ಪ್ರಚಾರ ಹಾಗೂ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವುದಕ್ಕಾಗಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ತಡೆ ನೀಡಬೇಕು ಎಂದು ಅನೇಕ ಸಂಘಟನೆಗಳು ಒತ್ತಾಯ ಮಾಡಿದ್ದವು.
ಭಾರತೀಯ ಜನತಾ ಪಾರ್ಟಿ ಸೇರಿದಂತೆ ಅನೇಕ ಬಲಪಂಥೀಯ ಸಂಘಟನೆಗಳು ಸ್ವಯಂಘೋಷಿತ ಪವಾಡಪುರುಷನು ಸಾಮೂಹಿಕ ಚಿಕಿತ್ಸೆ/ಪ್ರಾರ್ಥನೆ ಸಮಾರಂಭವನ್ನು ಮತಾಂತರಕ್ಕೆ ರಹದಾರಿಯಾಗಿ ಬಳಸಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಿ, ಬೆನ್ ಹಿನ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದವು.