ಕುಡಿಯುವ ನೀರು ಸಮಸ್ಯೆಗೆ ಕಿವಿಗೊಟ್ಟ ವಿನಯ್ ಸೊರಕೆ
ಉಡುಪಿ,ಮಾರ್ಚ್,11: ಕುಡಿಯುವ ನೀರು ಸರಬರಾಜು ಮಾಡಲು ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಮುಗಿಸಿ, ನೀರಿನ ಸಮಸ್ಯೆ ಕಂಡುಬರದಂತೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶುಕ್ರವಾರ ಉಡುಪಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಹಾಗೂ ನಿವೇಶನ ಹಂಚಿಕೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ ಅವರು, 'ಕುಡಿಯುವ ನೀರು ಸಮಸ್ಯೆ ಇರುವ 29 ಪ್ರದೇಶಗಳಲ್ಲಿ ಕೈಗೊಂಡ ಕಾಮಗಾರಿಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು ಹಾಗೂ ಅಗತ್ಯಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು' ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.[ಶುದ್ಧ ಕುಡಿಯುವ ನೀರು ನೀಡಿದವರಿಗೆ ಅನಂತ ಧನ್ಯವಾದ]
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ವರ್ ಮಾತನಾಡಿ, 'ರಾಜ್ಯದಲ್ಲೇ ಪ್ರಥಮ ಬಾರಿಗೆ ಪಾಯಿಂಟ್ ಆಫ್ ಸೇಲ್ ಮೆಷಿನ್ ಅಳವಡಿಸಿ ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ತರಲಾಗುತ್ತಿದೆ. 9242 ಹೊಸ ಪಡಿತರ ಚೀಟಿಗಳು ಆನ್ ಲೈನ್ ನಲ್ಲಿ ಬಾಕಿ ಇದ್ದು ಶೀಘ್ರದಲ್ಲಿ ವಿತರಿಸಲಾಗುವುದು ಎಂದು ಭರವಸೆ ನೀಡಿದರು.[ಬಂಗಾರಪೇಟೆಯ 4 ಗ್ರಾಮಗಳಿಗೆ ನೀರಿನ ತಲೆಬಿಸಿ ಇಲ್ಲ]
ಜಿಲ್ಲೆಯಲ್ಲಿ ವಸತಿ ಯೋಜನೆಗಳಿಗೆ ಸಂಬಂಧಪಟ್ಟಂತೆ 'ಏಕ ಗವಾಕ್ಷಿ ಯೋಜನೆ' ಮೂಲಕ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ನೀಡಿ, ವಸತಿ ರಹಿತರಿಗೆ ಶೀಘ್ರದಲ್ಲಿ ನಿವೇಶನಗಳನ್ನು ಹಂಚಬೇಕು. ಕರಾವಳಿ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನ ನೀಡಲು ಸ್ಥಳಾವಕಾಶ ಇಲ್ಲದಿದ್ದಲ್ಲಿ ಸಮೀಪದ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗ, ನಿವೇಶನ ಕೋರಿ ಹೊಸ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ತಿಳಿಸಿದರು.[ಕುಡಿಯುವ ನೀರಿಗಾಗಿ ದೇಶಪಾಂಡೆ ಫೌಂಡೇಶನ್ ನಿಂದ ಸಹಾಯವಾಣಿ]
ಪಡುಬಿದ್ರೆಯಲ್ಲಿ ಕೊರಗ ಜನಾಂಗದವರಿಗೆ ಮಂಜೂರಾಗಿರುವ ನಿವೇಶನಗಳನ್ನು ಆದಷ್ಟು ಶೀಘ್ರದಲ್ಲಿ ಅವರಿಗೆ ಒದಗಿಸುವಂತೆ ಹಾಗೂ ವಸತಿ ಯೋಜನೆಗಳ ಅನುಷ್ಠಾನದಲ್ಲಿ ಎಲ್ಲಾ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕೆಲಸ ನಿರ್ವಹಿಸುವಂತೆ ಸೂಚಿಸಿದರು.[ಏರಿದ ಬಿಸಿಲ ಧಗೆ, ಮಡಿಕೆ ವ್ಯಾಪಾರ ಬಲು ಜೋರು]
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಜನಾರ್ಧನ ಉಪಸ್ಥಿತರಿದ್ದರು.