ರಾಜಕೀಯ ಸನ್ಯಾಸದ ಬಗ್ಗೆ ಮಾತನಾಡಿದ ಎಚ್ಡಿಕೆಗೆ ಡಿಕೆಶಿ ಕಿವಿಮಾತು
ಗೌಡ್ರ ಮತ್ತು ಡಿ ಕೆ ಶಿವಕುಮಾರ್ ಕುಟುಂಬಗಳ ನಡುವಿನ ಜಿದ್ದಾಜಿದ್ದಿಗೆ ದಶಕಗಳ ಇತಿಹಾಸವಿದೆ. ವಾರಕ್ಕೊಮ್ಮೆಯಾದರೂ ಎರಡು ಕುಟುಂಬಗಳ ನಡುವೆ ಆರೋಪ, ಪ್ರತ್ಯಾರೋಪ ನಡೆಯದೇ ಇರುವ ಉದಾಹರಣೆಗಳೇ ಅಪರೂಪ.
ರಾಜಕೀಯ ಸನ್ಯಾಸದ ಬಗ್ಗೆ ಮಾತನಾಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಗೆ, ನೀವು ರಾಜಕೀಯ ಬಿಡಬಾರದು, ಚುನಾವಣೆಯಲ್ಲಿ ಸೋಲು ಗೆಲುವು ಇದ್ದಿದ್ದೇ ಎಂದು ಡಿ ಕೆ ಶಿವಕುಮಾರ್ ತಲೆಸವರಿದ್ದಾರೆ. (ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು)
ಮುಂಬರುವ ಅಂದರೆ 2018ರಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರದಿದ್ದಲ್ಲಿ, ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆಂದು ಕುಮಾರಸ್ವಾಮಿ ಹೇಳಿದ್ದರು.
ಕುಮಾರಸ್ವಾಮಿ ಹೇಳಿಕೆಗೆ ವ್ಯಂಗ್ಯ ಮಿಶ್ರಿತ ದಾಟಿಯಲ್ಲಿ ತಿರುಗೇಟು ನೀಡಿದ ಡಿಕೆಶಿ, ಕುಮಾರಸ್ವಾಮಿ ರಾಜಕೀಯ ಬಿಡಬಾರದು, ಜೊತೆಗೆ ಸಿನಿಮಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. (ಎಚ್ಡಿಕೆ ಆರೋಪಕ್ಕೆ ಚುಟುಕು ಉತ್ತರ ಕೊಟ್ಟ ಸಿದ್ದು)
ವಿದ್ಯುತ್ ಖರೀದಿ ವಿಚಾರದಲ್ಲಿ ದೇವೇಗೌಡರ ಆರೋಪದ ಬಗ್ಗೆ ಮಾತನಾಡಿದ ಶಿವಕುಮಾರ್, ಇಂಧನ ಖಾತೆಯ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದೆ ಎಂದು ಗೌಡ್ರ ಟೀಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.
ಕುಮಾರಸ್ವಾಮಿಯವರ ತಪ್ಪು ಗ್ರಹಿಕೆ
ಕುಮಾರಸ್ವಾಮಿ ರಾಜಕೀಯ ಸನ್ಯಾಸ ತೆಗೆದುಕೊಂಡರೆ ಕಾರ್ಯಕರ್ತರ ಪಾಡೇನು. ಜನಸೇವೆ ಮಾಡಲು ಅಧಿಕಾರದಲ್ಲೇ ಇರಬೇಕು ಎಂದೇನಿಲ್ಲ. ಅಧಿಕಾರ ಇದ್ದರೆ ಮಾತ್ರ ಈ ಕೆಲಸ ಸಾಧ್ಯ ಎನ್ನುವುದು ಕುಮಾರಸ್ವಾಮಿಯವರ ತಪ್ಪು ಗ್ರಹಿಕೆ - ಡಿ ಕೆ ಶಿವಕುಮಾರ್.
ಹಳೇ ಮೈಸೂರು ಭಾಗ
ಹಳೇ ಮೈಸೂರು ಭಾಗದಲ್ಲಿ ನಮಗೆ ಸಾಕಷ್ಟು ಪೈಪೋಟಿ ನೀಡುವ ಪಕ್ಷವೆಂದರೆ ಅದು ಜೆಡಿಎಸ್. ಒಂದು ಚುನಾವಣೆಯಲ್ಲಿ ಯಶಸ್ಸು ಸಿಗಲಿಲ್ಲ ಎಂದು ನಿವೃತ್ತಿಯ ವಿಚಾರ ಮಾತನಾಡುವುದು ಸರಿಯಲ್ಲ - ಡಿ ಕೆ ಶಿವಕುಮಾರ್.
ನಿವೃತ್ತಿ ನಿರ್ಧಾರ ವಾಪಸ್ ತೆಗೆದುಕೊಳ್ಳಲಿ
ಪಕ್ಷದ ಪ್ರಮುಖನೇ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದರೆ ಕಾರ್ಯಕರ್ತರ ಗತಿಯೇನು? ನಿವೃತ್ತಿಯ ನಿರ್ಧಾರವನ್ನು ಕುಮಾರಸ್ವಾಮಿ ವಾಪಸ್ ತೆಗೆದುಕೊಳ್ಳಬೇಕು ಇದು ಜೆಡಿಎಸ್ ಕಾರ್ಯಕರ್ತರ ಪರವಾಗಿ ನನ್ನ ಮನವಿ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ನಾನು ಸದ್ಯ ಇಂಧನ ಖಾತೆಯನ್ನು ಸಂತೋಷದಿಂದ ನಿಭಾಯಿಸುತ್ತಿದ್ದೇನೆ. ರಾಜ್ಯದ ಇಂಧನ ಖಾತೆಯಲ್ಲಿ ತುಂಬಾ ಸುಧಾರಣೆ ತರಬೇಕಿದೆ, ಅದು ನನಗೆ ಮೊದಲ ಆದ್ಯತೆ - ಡಿ ಕೆ ಶಿವಕುಮಾರ್.
ದೇವೇಗೌಡ್ರ ಆರೋಪ
ನನ್ನ ಮೇಲೆ ದೇವೇಗೌಡ್ರ ಆರೋಪ ಇಂದು ನಿನ್ನೆಯದಲ್ಲ, ಅವರು ಹೇಳಿದಂತೆ ಇಂಧನ ಸಚಿವಾಲಯದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಕೆಲವರಿಗೆ ನನ್ನ ಮೇಲೆ ಆರೋಪ ಮಾಡಿದರೆ ಅದೇನೋ ಖುಷಿ ಸಿಗುತ್ತೆ ಡಿ ಕೆ ಶಿವಕುಮಾರ್.
ವ್ಯವಹಾರ ಅಲ್ಲದೇ ಮತ್ತಿನ್ನೇನು
ಕೇಂದ್ರ ಸರಕಾರ ವಿದ್ಯುತ್ ನೀಡಲು ಮುಂದಾದರೂ, ರಾಜ್ಯ ಸರಕಾರ ಅದನ್ನು ತೆಗೆದುಕೊಳ್ಳಲು ಉತ್ಸುಕತೆ ತೋರುತ್ತಿಲ್ಲ. ಖಾಸಗಿ ಗ್ರಿಡ್ ಗಳಿಂದ ದುಬಾರಿ ಹಣ ಪಾವತಿಸಿ ವಿದ್ಯುತ್ ಖರೀದಿಸಲು ಸರಕಾರ ನಿರ್ಧರಿಸಿದೆ. ಇದು 'ವ್ಯವಹಾರ'ಅಲ್ಲದೇ ಮತ್ತಿನ್ನೇನು ಎಂದು ದೇವೇಗೌಡ್ರು ಇತ್ತೀಚೆಗೆ ಹೇಳಿಕೆ ನೀಡಿದ್ದರು.