ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಶಿವಕುಮಾರ್
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಕೆಲ ಮಾಧ್ಯಮ, ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಸುದ್ದಿ ಹರಡಿದ್ದು, ಇದೆಲ್ಲ ಸತ್ಯಕ್ಕೆ ದೂರವಾಗಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು, ಮಾರ್ಚ್ 14: ಕೆಪಿಸಿಸಿ ನೂತನ ಸಾರಥಿಯಾಗಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲು ಸಿದ್ಧರಾಗುವ ಕಾಲ ಕೂಡಿ ಬಂದಿದೆ. ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿ ಉಳಿದಿದೆ. ಈ ಸಂಬಂಧ ಹೈಕಮಾಂಡ್ ಜತೆ ಅಂತಿಮ ಮಾತುಕತೆ ನಡೆಸಲು ಡಿಕೆ ಶಿವಕುಮಾರ್ ಅವರು ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂಬ ಸುದ್ದಿಗೆ ಈಗ ಖುದ್ದು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಈ ತೀರ್ಮಾನ ತೆಗೆದುಕೊಂಡಿದೆ. ಡಿ.ಕೆ.ಶಿವಕುಮಾರ್ ಅವರು ಬಹುತೇಕ ಈ ತಿಂಗಳ ಅಂತ್ಯಕ್ಕೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಡಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಡಿಕೆ ಶಿವಕುಮಾರ್ ಅವರು, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಲಾಬಿ ನಡೆಸಲು ದೆಹಲಿಗೆ ತೆರಳಿಲ್ಲ ಎಂದಿದ್ದಾರೆ. ಇಂಧನ ಸಚಿವರು ನೀಡಿರುವ ಸ್ಪಷ್ಟನೆಯ ಯಥಾವತ್ತು ಕಾಪಿ ಈ ಕೆಳಗಿನಂತಿದೆ:
ನನ್ನೆಲ್ಲ ಪ್ರೀತಿಪಾತ್ರರೆ,
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳು ಹರಿದಾಡುತ್ತಿವೆ. ನಾನು ಸರ್ಕಾರದ ಕೆಲಸದ ನಿಮಿತ್ತ ದೆಹಲಿಯಲ್ಲಿ ಉಳಿದಿರುವೆನೇ ಹೊರತು ಇನ್ನಾವುದೇ ಕಾರಣಕ್ಕೂ ಇಲ್ಲಿಗೆ ಬಂದಿಲ್ಲವೆಂಬ ಸಂಗತಿಯನ್ನು ತಿಳಿಸಬಯಸುತ್ತೇನೆ.
ಪಕ್ಷದ ಓರ್ವ ನಿಷ್ಠಾವಂತ ಕಾರ್ಯಕರ್ತನಾಗಿ, ಹೈ ಕಮ್ಯಾಂಡ್ ಕೈಗೊಳ್ಳುವ ಯಾವುದೇ ತೀರ್ಮಾನಕ್ಕಾದರೂ ನಾನು ಬದ್ಧನಾಗಿರುತ್ತೇನೆ. ಅಧ್ಯಕ್ಷೀಯ ಸ್ಥಾನ ಕುರಿತಂತೆ ಅವರು ನನ್ನೊಂದಿಗೆ ಯಾವುದೇ ಮಾತುಕಥೆ ನಡೆಸಿಲ್ಲ ಹಾಗೂ ನಾನು ಆ ಸ್ಥಾನದ ಆಕಾಂಕ್ಷಿಯೂ ಅಲ್ಲ.
ಈ ತಪ್ಪು ಮಾಹಿತಿಯನ್ನು ಪ್ರಚಾರ ಮಾಡದಂತೆ ಪಕ್ಷದ ಕಾರ್ಯಕರ್ತರು ಹಾಗೂ ಹಿತೈಷಿಗಳಲ್ಲಿ ಮನವಿ ಮಾಡುತ್ತೇನೆ. ಇಂಧನ ಸಚಿವನಾಗಿ ಪಕ್ಷ ನನಗೆ ವಹಿಸಿರುವ ಜವಾಬ್ದಾರಿಯತ್ತ ಮಾತ್ರವೇ ನನ್ನ ಸಂಪೂರ್ಣ ಗಮನವಿದ್ದು, ಕರ್ನಾಟಕದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಉದ್ದೇಶ ಮಾತ್ರ ನನ್ನದಾಗಿದೆ.
ಧನ್ಯವಾದಗಳೊಂದಿಗೆ
(ಡಿ.ಕೆ. ಶಿವಕುಮಾರ್)