ಬಾಗಲಕೋಟೆ: ಡಿ. 12ರಿಂದ ಬೃಹತ್ 'ತೋಟಗಾರಿಕೆ ಮೇಳ'
ಬಾಗಲಕೋಟೆ, ನ. 26: ಗ್ರಾಮಗಳಲ್ಲಿ ಕಂಡುಬರುತ್ತಿರುವ ಕೂಲಿಕಾರರ ಕೊರತೆಗೆ ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಪರ್ಯಾಯ ಮಾರ್ಗವಾಗಿದೆ. ಈ ಕುರಿತು ರೈತರಿಗೆ ತಿಳಿಸುವ ಉದ್ದೇಶದಿಂದ ಬಾಗಲಕೋಟೆ ನಗರದಲ್ಲಿ ಡಿಸೆಂಬರ್ 12ರಿಂದ ನಾಲ್ಕು ದಿನಗಳ 'ತೋಟಗಾರಿಕೆ ಮೇಳ' ಆಯೋಜಿಸಲಾಗಿದೆ ಎಂದು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ. ಡಿ.ಎಲ್. ಮಹೇಶ್ವರ್ ತಿಳಿಸಿದ್ದಾರೆ. [ಭತ್ತದ ಕಣಜದಲ್ಲಿ ದ್ರಾಕ್ಷಿ ಬೆಳೆದ ಛಲಗಾರ]
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. 'ಸಮೃದ್ಧಿಗಾಗಿ ಯಾಂತ್ರೀಕರಣ' ಮೇಳದ ಪ್ರಮುಖ ವಿಷಯವಾಗಿರಲಿದೆ. ರೈತರಿಗೆ ವಿವಿಧ ಯಂತ್ರೋಪಕರಣಗಳ ಪರಿಚಯ ಹಾಗೂ ಬಳಕೆ ಕುರಿತು ಮಾಹಿತಿ ನೀಡಲಾಗುವುದು. ಇದಕ್ಕಾಗಿ 450 ವ್ಯಾಪಾರಿಗಳಿಗೆ ಅಂಗಡಿ ಸ್ಥಾಪಿಸಲು ಆಹ್ವಾನ ನೀಡಲಾಗಿದೆ. ತೋಟಗಾರಿಕೆ ಸಚಿವಾಲಯದ ಸಹಯೋಗದೊಂದಿಗೆ ಈ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೇಳದಲ್ಲಿ ಗುಣಮಟ್ಟದ ಬೀಜ ಹಾಗೂ ಸಸ್ಯಗಳನ್ನು ಮಾರಲಾಗುವುದು. ಹಣ್ಣು, ಹೂವು, ತರಕಾರಿ, ಔಷಧಿ ಸಸ್ಯಗಳು, ಸುಗ್ಗಿ ನಂತರದ ತಂತ್ರಜ್ಞಾನಗಳು ಹಾಗೂ ಮಸಾಲೆ ಪದಾರ್ಥಗಳ ಕುರಿತು ವಿವರಣೆ ನೀಡಲಾಗುವುದು. ರೈತರಿಗೆ ಲಭ್ಯವಿರುವ ವಿವಿಧ ಬ್ಯಾಂಕಿಂಗ್ ಸೌಲಭ್ಯವನ್ನು ತಿಳಿಸಲಾಗುವುದು. ನಿಖರ ಕೃಷಿ ಮತ್ತು ಕಿರು ನೀರಾವರಿ ಕುರಿತು ಪ್ರದರ್ಶನ ಆಯೋಜಿಸಲಾಗಿದೆ. [ಜಮೀನಲ್ಲಿ ಹನಿ ಹನಿಯಾಗಿ ಬೀಳಲಿದೆ ನೀರು]
ಸಾಧಕರಿಗೆ ಪ್ರಶಸ್ತಿ: ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಮೇಳದಲ್ಲಿ ಪ್ರಶಸ್ತಿ ನೀಡಲಾಗುವುದು. 23 ಜಿಲ್ಲೆಗಳ ರೈತರಿಗೆ ಉತ್ತಮ ರೈತ ಹಾಗೂ ಉತ್ತಮ ಮಹಿಳಾ ರೈತ ಪ್ರಶಸ್ತಿ, ಯಾಂತ್ರಿಕ ಸಂಶೋಧನೆ ಕೈಗೊಂಡ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಜಾನುವಾರು ತಳಿಗೆ ಪ್ರಶಸ್ತಿ ನೀಡಲಾಗುವುದು ಎಂದು ಡಾ. ಮಹೇಶ್ವರ್ ತಿಳಿಸಿದ್ದಾರೆ.
ರೈತರು, ಸಂಶೋಧಕರು, ಸ್ವ ಸಹಾಯ ಸಂಘಗಳು ಹಾಗೂ ಕೃಷಿ ಸಾಮಗ್ರಿ ಮತ್ತು ಯಂತ್ರೋಪಕರಣಗಳ ವಿತರಕರು, ವ್ಯಾಪಾರಿಗಳು ಸೇರಿ 5 ಲಕ್ಷಕ್ಕೂ ಅಧಿಕ ಜನ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹೇಳಿದರು. [ಎತ್ತಿನ ಹೊಳೆ ಯೋಜನೆ ಕುಡಿಯುವ ನೀರಿಗೆ ಮಾತ್ರ]
ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ತೋಟಗಾರಿಕೆ ಸಚಿವಾಲಯದ ಈ ಪ್ರಯತ್ನಕ್ಕೆ ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ರಾಷ್ಟ್ರೀಯ ತೋಟಗಾರಿಕೆ ಮಿಶನ್, ನಬಾರ್ಡ್, ಕರ್ನಾಟಕ ರೈತ ಸಂಪನ್ಮೂಲ ಕೇಂದ್ರ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಕೃಷಿ ಸಂಶೋಧನೆಯ ಭಾರತೀಯ ಸಮಿತಿ ಮತ್ತು ಅವರ ಸಂಶೋಧನಾ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜೈನ್ ಇರಿಗೇಶನ್ ಸಿಸ್ಟಮ್ಸ್ ಲಿ. ಮತ್ತಿತರರು ಕೈಜೋಡಿಸಿದ್ದಾರೆಂದು ಡಾ. ಮಹೇಶ್ವರ್ ತಿಳಿಸಿದ್ದಾರೆ. [ರೈತರ ಬದುಕಿಗೆ ಆಸರೆಯಾಯ್ತು ಎರೆಹುಳ ಗೊಬ್ಬರ]