ಪ್ರಧಾನಿಗೆ ನೆತ್ತರಿನಲ್ಲಿ ಪತ್ರ ಬರೆದ ನರಗುಂದದ ರೈತರು
ಹುಬ್ಬಳ್ಳಿ, ನವೆಂಬರ್, 09: ಕಳಸಾ ಬಂಡೂರಿ ಯೋಜನೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟವನ್ನು ಇನ್ನೂ ಪರಿಣಾಮಕಾರಿಗೊಳಿಸಲು ಹುಬ್ಬಳ್ಳಿಯ ಪ್ರವಾಸಿ ಬಂಗಲೆಯಲ್ಲಿ ಸೋಮವಾರ ಸಭೆ ನಡೆಸಲಾಗುವುದು. ಈ ವೇಳೆ ಪತ್ರ ಚಳವಳಿ ಮತ್ತು ಬೆಂಗಳೂರು ಅಥವಾ ದೆಹಲಿ ಚಲೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚರ್ಚಿಸಲಾಗುವುದು ಎಂದು ವಿಕಾಸ ಸೊಪ್ಪಿನ್ ತಿಳಿಸಿದ್ದಾರೆ.
ಈಗಾಗಲೇ ರೈತ ಹೋರಾಟ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಆ ಸಂದರ್ಭದಲ್ಲಿ ದೀಪಾವಳಿ ಹಬ್ಬಕ್ಕಿಂತ ಮುನ್ನವೇ ಮಧ್ಯಂತರ ನ್ಯಾಯಾಧೀಕರಣದಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದರು. ಜೊತೆಗೆ ಗೋವಾ ಮುಖ್ಯಮಂತ್ರಿಯನ್ನು ಭೇಟಿ ಮಾಡುವ ನಿರ್ಧಾರ ಪ್ರಕಟಿಸಿದ್ದರು. ಆದರೆ ಇದುವರೆಗೂ ನೀಡಿದ ಭರವಸೆಗಳನ್ನು ಮುಖ್ಯಮಂತ್ರಿ ಅವರು ಈಡೇರಿಸಿಲ್ಲ. ಸಮಸ್ಯೆ ಪರಿಹಾರಕ್ಕೆ ಸರ್ಕಾರ ಗಂಭೀರವಾಗಿ ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿದರು.[ಅಮ್ಮಾ,, ನಮ್ಮೂರಲ್ಲಿ 15 ದಿನಕ್ಕೊಮ್ಮೆ ಯಾಕೆ ನೀರು ಬಿಡ್ತಾರೆ?]
ನೀರಿಗಾಗಿ ಉಪವಾಸ ನಿರತರಾದರು ನರಗುಂದ ರೈತರು
ನರಗುಂದ : ಕಳಸಾ ಬಂಡೂರಿ ನೀರಿಗಾಗಿ ಆಗ್ರಹಿಸಿ ನಗರದಲ್ಲಿ ನಡೆದಿರುವ ಉಪವಾಸ ಸತ್ಯಾಗ್ರಹ 16 ನೇ ದಿನಕ್ಕೆ ಕಾಲಿಟ್ಟಿದೆ. ನೀರಿಗಾಗಿ ನಾವು ಪ್ರಾಣ ಕೊಡಲು ಸಿದ್ಧರಿದ್ದೇವೆ. ನೀರು ಬರುವವರೆಗೂ ನಮ್ಮ ಉಪವಾಸ ಸತ್ಯಾಗ್ರಹ ನಿಲ್ಲುವುದಿಲ್ಲ ಎಂದು ಉಪವಾಸ ನಿರತ ರೈತರು ಶಪಥಗೈದಿದ್ದಾರೆ.
ಮಳೆಯ ಕೊರತೆಯಿಂದಾಗಿ ಬೆಳೆ ನಷ್ಟವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ರೈತರ ಜೀವನ ಸುಧಾರಣೆ ಕಳಸಾ-ಬಂಡೂರಿ ಯೋಜನೆಯಿಂದ ಮಾತ್ರ ಸಾಧ್ಯ ಎಂದು ರೈತರು ದೂರಿದ್ದಾರೆ.
ಸತ್ಯಾಗ್ರಹದಲ್ಲಿ ಶೇಖರಗೌಡ ಕೊಪ್ಪನಗೌಡ್ರ, ಇಮಾಮಸಾಬ ಧಾರವಾಡ, ಜಮಾಲಸಾಬ ಕುಕನೂರ, ಚಂದ್ರಶೇಖರ ಸಂಕನಗೌಡ್ರ, ಸಂಭಾಜಿ ಜಾಧವ ಮತ್ತಿತರ ರೈತರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ?]
"ರಕ್ತ ಕೊಟ್ಟೇವು, ನೀರು ಬೇಕು, ರಕ್ತ ಕೊಟ್ಟೇವು, ನೀರು ಬಿಡುವುದಿಲ್ಲ'
ಜಕ್ಕಲಿ : ರೋಣ ತಾಲೂಕಿನ ಜಕ್ಕಲಿ ಗ್ರಾಮದ ನೂರಾರು ಯುವಕರು ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಭಾನುವಾರ ಬೈಕ್ ರ್ಯಾಲಿ ಕೈಗೊಂಡಿದ್ದು, ಕಳಸಾ ಹೋರಾಟ ವೇದಿಕೆ ಎದುರು ರಸ್ತೆ ತಡೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ "ರಕ್ತ ಕೊಟ್ಟೇವು ಆದರೆ ನೀರು ಬೇಕು" ,"ರಕ್ತ ಕೊಟ್ಟೇವು, ನೀರು ಬಿಡುವುದಿಲ್ಲ" ಎಂದು ಯುವರೈತರು ಘೋಷಣೆ ಕೂಗಿದರು.[ಕಳಸಾ-ಬಂಡೂರಿ : ನ್ಯಾಯಾಧೀಕರಣದ ಮುಂದೆ ಮಧ್ಯಂತರ ಅರ್ಜಿ]
ರಕ್ತದಿಂದ ಪತ್ರ: ಮಲಪ್ರಭಾ ನದಿಗೆ ಮಹಾದಾಯಿ ಮತ್ತು ಕಳಸಾ-ಬಂಡೂರಿ ನಾಲಾ ಜೋಡಣೆಗೆ ಒತ್ತಾಯಿಸಿ ನರಗುಂದ ರೈತರು ಪ್ರಧಾನಿ ನರೇಂದ್ರ ಮೋದಿಗೆ ರಕ್ತದಿಂದ ಪತ್ರ ಬರೆದಿದ್ದು, ತಹಶೀಲ್ಧಾರ್ ಗೆ ರಕ್ತದಲ್ಲಿ ಬರೆದ ಮನವಿ ಪತ್ರ ಸಲ್ಲಿಸಿದ್ದಾರೆ.
ನರಗುಂದ ರೈತ ಮುಖಂಡ ಚೆನ್ನು ನಂದಿ ಮಾತನಾಡಿ, ಮುಂಗಾರು ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ ಅಭಾವದಿಂದ ಬರದ ಬೇಗೆಯಲ್ಲಿ ಬೇಯುತ್ತಿದ್ದೇವೆ. ಹಿಂಗಾರು ಮಳೆ ಕೂಡ ಆಗದೇ ಭೂಮಿಗೆ ಹಾಕಿದ ಹಣ ಮತ್ತು ಶ್ರಮ ವ್ಯರ್ಥವಾಗಿದೆ ಎಂದರು.
ಹಾಗಾಗಿ ಬೆಳೆ ಹಾನಿಗಾಗಿ ಎಕರೆಗೆ 5 ಲಕ್ಷ ರೂ. ಪರಿಹಾರ, ರೈತರಿಗೆ ಬಡ್ಡಿ ರಹಿತ ಸಾಲ, ಜಾನುವಾರುಗಳ ಆಹಾರಕ್ಕೆ ಗೋಶಾಲೆ ನೀಡಬೇಕು ಕೂಡಲೇ ಮುಖ್ಯಮಂತ್ರಿಗಳು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.[ಉತ್ತರ ಕರ್ನಾಟಕದ ಸಮಸ್ಯೆ ತಿಳಿಸಲಿದೆ 'ಮಹಾಮರಣ' ಸಾಕ್ಷ್ಯಚಿತ್ರ]
ನವೆಂಬರ್ 24ರಂದು ಬೆಂಗಳೂರಲ್ಲಿ ಪ್ರತಿಭಟನೆ
ಮುನವಳ್ಳಿ: ಕಳಸಾ-ಬಂಡೂರಿ ಹೋರಾಟ ಯೋಜನೆ ಜಾರಿಗೆ ಒತ್ತಾಯಿಸಿ ರೈತ ಮುಖಂಡರು ನವೆಂಬರ್ 24 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಲು ರಾಜ್ಯ ರೈತ ಸೇನಾ ನಿರ್ಧರಿಸಿದೆ. ನಾಲ್ಕು ಜಿಲ್ಲೆಗಳ ಒಂಬತ್ತು ತಾಲೂಕಿನ ರೈತರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊರಬದಮಠ ಹೇಳಿದ್ದಾರೆ.