ಮಂತ್ರಾಲಯ ಮಠದಲ್ಲಿ ಅತೃಪ್ತಿಯ ಕಿಡಿ, ರಾಘವೇಂದ್ರ!
ಮಂತ್ರಾಲಯ/ ರಾಯಚೂರು, ಏ 29: ಅಸಮಾಧಾನ, ಭಿನ್ನಮತ, ರಾಜಕೀಯ ಎನ್ನುವುದು ಧಾರ್ಮಿಕ ಕ್ಷೇತ್ರವನ್ನೂ ಕಾಡುತ್ತಿರುವುದು ಇದೇನು ಹೊಸತಲ್ಲ. ಆ ಪಟ್ಟಿಗೆ ಗುರುರಾಯರ ನೆಲೆಬೀಡು ಮಂತ್ರಾಲಯವೂ ಸೇರಿರುವುದು ಲಕ್ಷಾಂತರ ರಾಯರ ಭಕ್ತರನ್ನು ಕಂಗೆಡಿಸಿದೆ.
ಮಂತ್ರಾಲಯ ಮಠದ ಹಿರಿಯ ಯತಿಗಳಾದ ಶ್ರೀ ಸುಯತೀಂದ್ರ ತೀರ್ಥರು ವೃಂದಾವನಸ್ಥರಾದ ನಂತರ ಅವರ ಉತ್ತರಾಧಿಕಾರಿಯಾಗಿ ಶ್ರೀ ಸುಬುದೇಂದ್ರ ತೀರ್ಥರು ಶ್ರೀಮಠದ ಅಧಿಕಾರ ವಹಿಸಿಕೊಂಡರು. ಆನಂತರ ಮಠದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಅತೃಪ್ತಿಯ ಕಿಡಿ ಇತ್ತೀಚಿನ ದಿನಗಳಲ್ಲಿ ಜ್ವಾಲೆಯಾಗಿ ಪರಿಣಮಿಸುತ್ತಿದೆ. (ಸುಯತೀಂದ್ರತೀರ್ಥರ ದೇಹಾಂತ್ಯ)
2009ರಲ್ಲಿ ತುಂಗಭದ್ರಾ ಜಲಪ್ರಳಯದ ನಂತರ ಮಂತ್ರಾಲಯ ಕ್ಷೇತ್ರವನ್ನು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಮತ್ತು ಅತ್ಯಂತ ಕಡಿಮೆ ಅವಧಿಯಲ್ಲಿ ಪುನರ್ನಿಮಾಣ ಮಾಡಲು ಮಠದ ಹಿರಿಯ ಯತಿಗಳ ಬೆನ್ನಿಗೆ ನಿಂತು ಕೆಲಸ ಮಾಡಿದವರು ಶ್ರೀಗಳ ಆಪ್ತ ಕಾರ್ಯದರ್ಶಿ ಸುಯಮೀಂದ್ರಾಚಾರ್ಯರು.
ಹರಿಪಾದ ಸೇರಿದ ಹಿರಿಯ ಶ್ರೀಗಳು ತಮ್ಮ ಪೂರ್ವಾಶ್ರಮದ ಪುತ್ರ ಸುಯಮೀಂದ್ರಾಚಾರ್ಯರನ್ನು ಆಯಕಟ್ಟಿನ ಆಪ್ತಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿದ್ದರು. ಹಾಗೆಯೇ, ಆಪ್ತಕಾರ್ಯದರ್ಶಿಯಾಗಿದ್ದ ರಾಜಗೋಪಲಾಚಾರ್ಯರ ಅಧಿಕಾರವನ್ನು ಮೊಟಕುಗೊಳಿಸಿದ್ದರು. (ಮಂತ್ರಾಲಯ ಪ್ರವಾಹ, ಮಂಚಾಲಮ್ಮನ ಶಾಪ)
ಮಂತ್ರಾಲಯ ಮಠದಲ್ಲಿ ಕನ್ನಡ ದಿನಪತ್ರಿಕೆಗಳಿಗೂ ನಿರ್ಬಂಧ ಹೇರಲಾಗಿದೆ ಎನ್ನುವ ಸುದ್ದಿಯಿದೆ. ಇದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
ಏನಿದು ಮಂತ್ರಾಲಯದಲ್ಲಿ ವಿವಾದ?
(Photo courtesy: http://www.raghavendramutt.org/)
ಗಿರಿಯಾಚಾರ್ಯರು
ಸುಯಮೀಂದ್ರಾಚಾರ್ಯರ ನೇಮಕದ ನಂತರ ಮಠದ ಆಡಳಿತಾತ್ಮಕ ವಿಚಾರಗಳಲ್ಲಿ ರಾಜಗೋಪಾಲಾಚಾರ್ಯ ಮೂಗು ತೂರಿಸದೇ ಸುಮ್ಮನಿದ್ದರು. ಆದರೆ ಈಗ ಹಾಲಿ ಮಠಾಧೀಶರು ಮತ್ತು ಅವರ ಪೂರ್ವಾಶ್ರಮದ ತಂದೆ ಗಿರಿಯಾಚಾರ್ಯರು ಮಠದ ದೈನಂದಿನ ಆಡಳಿತದ ಮೇಲೆ ಹಿಡಿತ ಸಾಧಿಸುತ್ತಿರುವುದೇ ಸುಯಮೀಂದ್ರಾಚಾರ್ಯರ ಅಸಮಾಧಾನಕ್ಕೆ ಪ್ರಮುಖ ಕಾರಣ.
ಸುಯಮೀಂದ್ರಾಚಾರ್ಯರು
ಮಂತ್ರಾಲಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದ ಸುಯಮೀಂದ್ರಾಚಾರ್ಯರು ಈಗಿನ ಪೀಠಾಧಿಪತಿ ಮತ್ತು ಗಿರಿಯಾಚಾರ್ಯರ ನಡುವಣ ಮನಸ್ತಾಪದಿಂದ ಮಠದ ಉಸಾಬಾರಿ ಬೇಡವೆಂದು ಬೆಂಗಳೂರಿಗೆ ವಾಪಸ್ ಆಗಿರುವುದು ಮಂತ್ರಾಲಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಾಕ್ಷಿ.
ಆಪ್ತಕಾರ್ಯದರ್ಶಿ ಹುದ್ದೆ
ಅಸಲಿಗೆ ಹಿರಿಯ ಶ್ರೀಗಳು ಕಾಲವಾದ ನಂತರ ಶ್ರೀ ಸುಬುದೇಂದ್ರ ತೀರ್ಥರು, ಸುಯಮೀಂದ್ರಾಚಾರ್ಯರ ಅವರನ್ನೇ ಮತ್ತೆ ಆಪ್ತ ಕಾರ್ಯದರ್ಶಿ ಹುದ್ದೆಗೆ ಮರುನಾಮಕರಣ ಮಾಡಿದ್ದರು. ಆದರೆ ಮಠದ ಕೆಲವು ಹಿರಿಯರು ಆಪ್ತ ಕಾರ್ಯದರ್ಶಿಗಳ ಗಮನಕ್ಕೆ ತರದೇ ತಮ್ಮಿಷ್ಟದಂತೆ ಕಾರ್ಯ ನಿರ್ವಹಿಸುತ್ತಿರುವುದು ಮತ್ತು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿರುವುದು ಇವರ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ವರ್ಗಾವಣೆ
ಇದಲ್ಲದೇ, ಸುಯಮೀಂದ್ರಾಚಾರ್ಯರಿಗೆ ಆಪ್ತರಾಗಿದ್ದವರನ್ನು ಮಂತ್ರಾಲಯದ ಹೊರ ಭಾಗದಲ್ಲಿರುವ ಶ್ರೀಮಠದ ಶಾಖಾಮಠಗಳಿಗೆ ವರ್ಗಾವಣೆ ಮಾಡಿರುವುದೂ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಮಠದ ಎಲ್ಲಾ ನಿರ್ಧಾರವನ್ನು ಗಿರಿಯಾಚಾರ್ಯರು ತೆಗೆದುಕೊಳ್ಳುತ್ತಿರುವುದು ಶ್ರೀಮಠದ ಆಡಳಿತದಲ್ಲಿ ಒಡಕು ಮೂಡಿಸಿದೆ.
ಹಿರಿಯ ಶ್ರೀಗಳ ಧಾರ್ಮಿಕ ಕಾರ್ಯಕ್ರಮ
ಬರುವ ಮೇ ತಿಂಗಳಿನಲ್ಲಿ ವೃಂದಾವನಸ್ಥರಾದ ಶ್ರೀ ಸುಯತೀಂದ್ರ ತೀರ್ಥರ ಬೃಂದಾವನ ನಿರ್ಮಾಣ ಸಂಬಂಧ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆಂದು ಸುಯಮೀಂದ್ರಾಚಾರ್ಯರು ಮಂತ್ರಾಲಯ ಮಠ ನೀಡಿದ್ದ ಕಾರನ್ನು ಹಿಂದಿರುಗಿಸಿ ಬೆಂಗಳೂರಿಗೆ ಬಂದಿದ್ದಾರೆ ಎನ್ನುವುದು ಸುದ್ದಿ.