ಕನಕ ಭಕ್ತರಿಗಾಗಿ ತೆರೆದಿದೆ 'ಕನಕ ಕಿಂಡಿ' ವೆಬ್ಬಾಗಿಲು
ಕೊಣಾಜೆ, ನ.22: ದಾಸ ಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರ ಅಧ್ಯಯನ ಕುರಿತಾಗಿ ಎಲ್ಲರಿಗೂ ಪ್ರಯೋಜನವಾಗಲಿ ಎಂದು ಮಂಗಳೂರು ವಿಶ್ವವಿದ್ಯಾಲಯವು 'ಕನಕನಕಿಂಡಿ' ಎಂಬ ಹೆಸರಿನಲ್ಲಿ ವೆಬ್ ಸೈಟ್ ಚಾಲ್ತಿಗೆ ಬಂದಿದೆ. ಮಂಗಳೂರು ವಿವಿ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಕನಕದಾಸ ಅಧ್ಯಯನ ಪೀಠದ ಹತ್ತರ ಸಂಭ್ರಮಾಚರಣೆ ಸಮಾರಂಭದಲ್ಲಿ ವಿವಿಯ ಉಪ ಕುಲಪತಿ ಪ್ರೊ.ಟಿ.ಸಿ. ಶಿವಶಂಕರ ಮೂರ್ತಿ ಈ ವಿಷಯ ತಿಳಿಸಿದ್ದಾರೆ.
'ಕನಕಕಿಂಡಿ' ವೆಬ್ಬಾಗಿಲು ದರ್ಶನಕ್ಕೆ ಇಲ್ಲಿ ಭೇಟಿ ನೀಡಿ.
ಮಂಗಳೂರು ವಿವಿಯ ವತಿಯಿಂದ 'ಕನಕ ಚಿಂತನ' ಪ್ರಚಾರೋಪನ್ಯಾಸ ಹಾಗೂ 'ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ' ಕಾರ್ಯಕ್ರಮ 'ಕುಲಕುಲವೆಂದು ಹೊಡೆದಾಡದಿರಿ' - ಸಮಕಾಲೀನ ಸಂವಾದ ಕಾರ್ಯಕ್ರಮವನ್ನು ಗುರುವಾರ ವಿವಿಯ ಹಳೆಯ ಸೆನೆಟ್ ಸಭಾಂಗಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರ, ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಉದ್ಘಾಟಿಸಿದರು.
'ಜಾತಿ ವ್ಯವಸ್ಥೆ ಇಂದು ಅಗೋಚರವಾಗಿ ಹಿಂದೆಂದಿಗಿಂತಲೂ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿದೆ. ಸಮಕಾಲೀನ ವಿದ್ಯಮಾನಗಳತ್ತ ಗಮನ ಹರಿಸಿದಾಗ ಜಾತಿ ವ್ಯವಸ್ಥೆಯನ್ನು ಯಥಾ ಸ್ಥಿತಿಯಲ್ಲಿ ಮುಂದುವರಿಸಿಕೊಂಡು ಹೋಗುವ ಹುನ್ನಾರ ಈಗ ನಡೆಯುತ್ತಿದೆ. ಇದರೊಂದಿಗೆ ಅನಿಯಂತ್ರಿತ ಖಾಸಗೀಕರಣ, ಕೋಮುವಾದ ಮತ್ತು ಸರ್ವಾಧಿಕಾರ ಧೋರಣೆ ಸಮಾಜವನ್ನು ದಿಕ್ಕು ತಪ್ಪಿಸುತ್ತಿದೆ ಎಂದು ಅಮೀನ್ ಮಟ್ಟು ಅಭಿಪ್ರಾಯಪಟ್ಟರು.
ಮಡೆಸ್ನಾನ, ಬೆತ್ತಲೆಸೇವೆ ಹಾಗೂ ಮೂಢನಂಬಿಕೆಗಳಂತಹ ವೌಢ್ಯಗಳು ತೊಲಗದೆ ಸಮಾಜ ಎಂದಿಗೂ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ. ಇದನ್ನು ನಿಯಂತ್ರಿಸಲು ಸರಕಾರ ಕಾನೂನು ರಚಿಸಲು ಮುಂದಾದಾಗ ಇದಕ್ಕೂ ಅಪಸ್ವರ ಕೇಳಿ ಬರುತ್ತಿದೆ.
ಹಿಂದೂ ಸಮಾಜವನ್ನು ರಕ್ಷಿಸುತ್ತೇವೆ ಎಂದು ಪ್ರೋತ್ಸಾಹ ಕೊಡುವ ಹಿಂದೂ ಸಂಘಟನೆಗಳ ಹೋರಾಟ ಪ್ರಾಮಾಣಿಕವಾಗಿದ್ದರೆ ಅವರಿಗೆ ಕನಕದಾಸರು, ಬಸವಣ್ಣ ಮುಂತಾದವರು ಮಾದರಿಯಾಗಬೇಕಿತ್ತು. ಅಂಥವರ ತತ್ವಗಳನ್ನು ಹಿಂದೂ ಮುಖಂಡರು ಅನುಸರಿಸಿಕೊಂಡು ಬಂದಿದ್ದರೆ ಇವತ್ತು ಹಿಂದೂ ಧರ್ಮವು ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದಂತೆ ವಿಶ್ವವ್ಯಾಪಿಯಾಗಬಹುದಿತ್ತು ಎಂದರು.
ಕನಕದಾಸರು ಕೇವಲ ದಾಸ ಶ್ರೇಷ್ಠರಲ್ಲ. ಅವರಲೊಬ್ಬ ಸಮಾಜ ಸುಧಾರಕನೂ ಇದ್ದ. ಮನುಜನ ಸರ್ವಾಂಗೀಣ ಅಭಿವೃದ್ಧಿಗೆ ಜಾತಿ ಒಂದು ತೊಡಕು ಎಂಬುದನ್ನು ಅವರು ಅಂದಿನ ಕಾಲದಲ್ಲೇ ಕಂಡುಕೊಂಡಿದ್ದರು. ಇದಕ್ಕಾಗಿ ಜಾತಿ ಪಿಡುಗನ್ನು ತೊಲಗಿಸಲು ಅವರು ಮಾಡಿರುವ ಹೋರಾಟಗಳು ಇಂದಿಗೂ ಪ್ರಸ್ತುತ ಎಂದು ಅಮೀನ್ ಮಟ್ಟು ನುಡಿದರು.