'ಕಾಂಗ್ರೆಸ್ ಹೈಕಮಾಂಡ್ ರಮ್ಯಾಗೆ ಬುದ್ಧಿ ಹೇಳಲಿ'
ಮಂಡ್ಯ, ಫೆಬ್ರವರಿ 17 : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಸಂಸದೆ ರಮ್ಯಾ ಅವರ ನಡುವಿನ ಮಾತಿನ ಸಮರಕ್ಕೆ ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜಯ ಅವರು ಧ್ವನಿಗೂಡಿಸಿದ್ದಾರೆ. 'ಕಾಂಗ್ರೆಸ್ ಹೈಕಮಾಂಡ್ ರಮ್ಯಾ ಅವರಿಗೆ ಬುದ್ಧಿ ಹೇಳಲಿ' ಎಂದು ಪುಟ್ಟರಾಜು ಸಲಹೆ ನೀಡಿದ್ದಾರೆ.
ಮಂಡ್ಯದಲ್ಲಿ ಬುಧವಾರ ಮಾತನಾಡಿದ ಸಿ.ಎಸ್.ಪುಟ್ಟರಾಜು ಅವರು, 'ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ರಮ್ಯಾ ಅವರಿಗಿಲ್ಲ. ಜಿಲ್ಲೆಗೆ ಓಟು ಕೇಳಲಿಕ್ಕೆ ಬಂದ ಅವರು ಆ ಕೆಲಸವನ್ನು ಮುಗಿಸಿಕೊಂಡು ಹೋಗಲಿ' ಎಂದು ಸಲಹೆ ನೀಡಿದರು. ['ಕುಮಾರಸ್ವಾಮಿ ಪತ್ನಿ ನಟಿಯಲ್ಲವೇ, ಮಗ ಹೀರೋ ಅಲ್ಲವೇ?']
ಅತ್ತ ಮೈಸೂರಿನಲ್ಲಿ ಮಾತನಾಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, 'ರಮ್ಯಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಅವರ ಮಟ್ಟಕ್ಕೆ ಇಳಿದು ಪ್ರತಿಕ್ರಿಯೆ ನೀಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. [ರಮ್ಯಾ ವಿರುದ್ದ ಕುಮಾರಸ್ವಾಮಿ ಗಂಭೀರ ಆರೋಪ]
ಮಂಡ್ಯದಲ್ಲಿ ಬುಧವಾರ ಮಾತನಾಡಿರುವ ರಮ್ಯಾ ಅವರು, 'ನಾನು ಪ್ರಾಮಾಣಿಕವಾಗಿ ರೈತರ ಸಮಸ್ಯೆಗಳನ್ನು ಪರಿಹಾರ ಮಾಡಲು ಕೆಲಸ ಮಾಡಿದ್ದೇನೆ. ತಮ್ಮ ಕೆಲಸವನ್ನು ಪುಟ್ಟರಾಜು ಅವರು ಆಗ ಅಭಿನಂದಿಸಿದ್ದರು. ಈಗ ಟೀಕಿಸುತ್ತಿದ್ದಾರೆ. ಕುಮಾರಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದರೆ ನೋವಾಗುತ್ತದೆ. ಬೇರೆ ಹೆಣ್ಣುಮಕ್ಕಳ ಕುರಿತು ಮಾತನಾಡಿದರೆ ನೋವಾಗುವುದಿಲ್ಲವೇ?' ಎಂದು ರಮ್ಯಾ ಪ್ರಶ್ನಿಸಿದರು....
ರಮ್ಯಾಗೆ ತಿರುಗೇಟು ಕೊಟ್ಟ ಪುಟ್ಟರಾಜು
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರ ನಡುವಿನ ಮಾತಿನ ಸಮರಕ್ಕೆ ಮಂಡ್ಯ ಸಂಸದ ಸಿ.ಎಸ್.ಪುಟ್ಟರಾಜು ಅವರು ಧ್ವನಿಗೂಡಿಸಿದ್ದಾರೆ. 'ರಮ್ಯಾ ಅವರು ಮಂಡ್ಯಕ್ಕೆ ಬಂದ ಕೆಲಸ ಮುಗಿಸಿಕೊಂಡು ಹೋಗಲಿ' ಎಂದು ಅವರು ಸಲಹೆ ನೀಡಿದ್ದಾರೆ.
'ಅವರಿಗೆ ಮಾತನಾಡುವ ಯೋಗ್ಯತೆ ಇಲ್ಲ'
'ರಮ್ಯಾ ಅವರಿಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಮಂಡ್ಯಕ್ಕೆ ಓಟು ಕೇಳಲು ಬಂದ ಅವರು ಆ ಕೆಲಸ ಮುಗಿಸಿಕೊಂಡು ಹೋಗಲಿ. ಜಿಲ್ಲೆಗಾಗಿ, ರೈತರಿಗಾಗಿ ದೇವೇಗೌಡರು ಮತ್ತು ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂಬುದು ನಮಗೆ ಗೊತ್ತು' ಎಂದು ಪುಟ್ಟರಾಜು ಅವರು ತಿರುಗೇಟು ಕೊಟ್ಟಿದ್ದಾರೆ.
'ನಾವು ಬುದ್ಧಿ ಕಲಿಸುತ್ತೇವೆ'
'ರಮ್ಯಾ ಅವರು ವೈಯಕ್ತಿಕ ವಿಚಾರಗಳನ್ನು ತೆಗೆದು ಟೀಕೆ ಮಾಡಿದರೆ ನಾವು ಮತ್ತು ಮಂಡ್ಯ ಜಿಲ್ಲೆಯ ಜನರು ಅವರಿಗೆ ಬುದ್ಧಿ ಕಲಿಸುತ್ತಾರೆ. ಇವರ ಮೂಲಗಳ ಬಗ್ಗೆ ಹೇಳುತ್ತಾ ಹೋದರೆ ಪುಸ್ತಕಗಟ್ಟಲೆ ಇದೆ' ಎಂದು ಪುಟ್ಟರಾಜು ಅವರು ಲೇವಡಿ ಮಾಡಿದರು.
'ಸಾಕಷ್ಟು ಟೀಕೆ ಮಾಡಿದ್ದಾರೆ'
ಸಿ.ಎಸ್.ಪುಟ್ಟರಾಜು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಮ್ಯಾ ಅವರು, 'ಕಳೆದ ಮೂರು ವರ್ಷಗಳಿಂದ ನಾನು ಹಲವು ಟೀಕೆಗಳನ್ನು ಸಹಿಸಿಕೊಂಡು ಬಂದಿದ್ದೇನೆ. ತಂದೆಯನ್ನು ಕಳೆದುಕೊಂಡಾಗ ರಮ್ಯಾ ತಂದೆ ಯಾರು? ರಮ್ಯಾ ಟೆಸ್ಟ್ ಟ್ಯೂಬ್ ಬೇಬಿ ಎಂದೆಲ್ಲ ಟೀಕೆ ಮಾಡಿದ್ದರು. ಈಗ ಕುಮಾರಸ್ವಾಮಿ ಅವರು ನನ್ನ ಕಾಲ್ಗುಣ ಸರಿಇಲ್ಲ ಎಂದು ಟೀಕೆ ಮಾಡುತ್ತಿದ್ದಾರೆ' ಎಂದು ರಮ್ಯಾ ಹೇಳಿದ್ದಾರೆ.
'ನಿಮಗೆ ನೋವಾಗುವುದಿಲ್ಲವೇ?'
'ರೈತರ ಸಮಸ್ಯೆಗಳನ್ನು ಪರಿಹಾರ ಮಾಡಲು ನಾನು ಪ್ರಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಕೆಲಸವನ್ನು ಆಗ ಸ್ವಾಗತಿಸುತ್ತಿದ್ದ ಅವರು ಈಗ ಟೀಕಿಸುತ್ತಿದ್ದಾರೆ. ಕುಮಾರಸ್ವಾಮಿ ಕುಟುಂಬದ ಬಗ್ಗೆ ಮಾತನಾಡಿದರೆ ನೋವಾಗುತ್ತೆ. ಬೇರೆ ಹೆಣ್ಣುಮಕ್ಕಳ ಕುರಿತು ಮಾತನಾಡಿದರೆ ನೋವಾಗುವುದಿಲ್ಲವೇ? ಎಂದು ರಮ್ಯಾ ಪ್ರಶ್ನಿಸಿದ್ದಾರೆ.
'ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ'
'ಕುಮಾರಸ್ವಾಮಿ ಅವರು ಸ್ವತಃ ಸಿನಿಮಾ ನಿರ್ಮಾಪಕರು. ಅವರ ಹೆಂಡತಿ ಈಗಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಗ ಕೂಡಾ ಹೀರೋ ಆಗಿ ಸಿನಿಮಾ ಮಾಡುತ್ತಿದ್ದಾರೆ. ಇದನ್ನು ತಿಳಿದು ಬೇರೆಯವರ ಬಗ್ಗೆ ಮಾತನಾಡುವುದನ್ನು ಕಲಿಯಲಿ' ಎಂದು ರಮ್ಯಾ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ಬುಧವಾರ ಹೇಳಿದ್ದಾರೆ.