ಮಹಿಳೆಯರೊಂದಿಗೆ ಅಶ್ಲೀಲವಾಗಿ ಮಾತಾಡುತ್ತಿದ್ದ ವಿಕೃತನ ಬಂಧನ
ಮಂಡ್ಯ, ಜುಲೈ 07 : ಮಹಿಳೆಯರ ಮೊಬೈಲ್ ನಂಬರನ್ನು ಕಲೆಹಾಕಿ, ಅದಕ್ಕೆ ಕರೆ ಮಾಡಿ ಅಸಹ್ಯ, ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಳವಳ್ಳಿಯ ಎನ್ಇಎಸ್ ಬಡಾವಣೆಯ ನಿವಾಸಿ ಸಿದ್ದರಾಜು ಎಂಬುವರ ಪುತ್ರ ಚಾಲಕ ಉಮೇಶ್ ಎಂಬಾತನೇ ಮಹಿಳೆಯರಿಗೆ ಕಿರುಕುಳ ನೀಡಿ ಸಿಕ್ಕಿ ಬಿದ್ದ ವಿಕೃತ ಮನಸ್ಸಿನ ಮನುಷ್ಯ.
ಈತ ತನ್ನದೇ ಬಡಾವಣೆಯ ಚಿನ್ನಪ್ಪ ಅವರ ಪುತ್ರಿ ಇಂದ್ರಮ್ಮ ಎಂಬುವರ ಮೊಬೈಲ್ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಾ ಕಿರುಕುಳ ನೀಡುತ್ತಿದ್ದನಂತೆ. [ಯುವತಿಯ ರಹಸ್ಯ ವಿಡಿಯೋ : ಬಾಬಿಯ ಕಾ'ಮುಕ' ಬಯಲು]
ಇದರಿಂದ ಬೇಸರಗೊಂಡ ಅವರು ಪುರ ಪೊಲೀಸ್ ಠಾಣೆಗೆ ತೆರಳಿ 8884643046 ಮೊಬೈಲ್ ನಂಬರ್ನಿಂದ ಯಾರೋ ಒಬ್ಬ ವ್ಯಕ್ತಿ ಕರೆ ಮಾಡಿ, ನನ್ನ ಜೊತೆಯಲ್ಲಿ ಅಸಹ್ಯವಾಗಿ ಮಾತನಾಡುವುದು, 'ನೀನು ಸುಂದರವಾಗಿದ್ದಿಯ, ನಾನು ಹೇಳಿದಲ್ಲಿಗೆ ಬರ್ತಿಯಾ' ಎಂದೆಲ್ಲ ಮಾತಾಡಿ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ದೂರು ನೀಡಿದ್ದರು.
ಇಂದ್ರಮ್ಮ ಅವರು ನೀಡಿದ ದೂರನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪುರ ಪೋಲಿಸ್ ಠಾಣೆಯ ಪ್ರಭಾರ ಇನ್ಸ್ಪೆಕ್ಟರ್ ಎಲ್.ಕೆ.ರಮೇಶ್ ಅವರು, ಮೊಬೈಲ್ ನಂಬರನ್ನು ಕಲೆ ಹಾಕಿ ಆತನನ್ನು ಬಂಧಿಸಿ ತಂದು ಪೊಲೀಸ್ ಸ್ಟೈಲ್ನಲ್ಲಿ ವಿಚಾರಿಸಿದಾಗ ನಿಜ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ. [ಲೈಂಗಿಕ ಕಿರುಕುಳ ಆರೋಪ ಬಾಬಾ ಪರಮಾನಂದ ಬಂಧನ]
ಈತನಿಗೆ ಇದೇ ಖಯಾಲಿಯಾಗಿದ್ದು, ಇದುವರೆಗೆ ಈತ ಜಯಮ್ಮ, ಜ್ಯೋತಿ, ಲಕ್ಷ್ಮಿ ಮತ್ತು ತಾಲೂಕಿನ ಅಕ್ಕಪಕ್ಕದ ಗ್ರಾಮಗಳ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿಮಗೂ ಇದೇ ರೀತಿ ಯಾರಾದರೂ ಕರೆ ಮಾಡಿ ಹಿಂಸೆ ನೀಡಿದರೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡುವಂತೆ ಇನ್ಸ್ಪೆಕ್ಟರ್ ಎಲ್.ಕೆ.ರಮೇಶ್ ತಿಳಿಸಿದ್ದಾರೆ.