ಸೂರ್ಯದೇವಾ, ನಿಂಗೆ ಹೇಳೋರು ಕೇಳೋರು ಯಾರೂ ಇಲ್ವಾ?
ಉತ್ತಿಷ್ಠೋತ್ತಿಷ್ಠ ಗೋವಿಂದಾ ಉತ್ತಿಷ್ಠ ಗರುಡಧ್ವಜ..ಎಂದು ಸುಪ್ರಭಾತ ಮೊಳಗುತ್ತಿರಬೇಕಾದರೆ ದೇವರೇ ಏಳದಷ್ಟು ಚಳಿ. ಇನ್ನು ಹಿರಿಯರ, ಕಿರಿಯರ, ಮಕ್ಕಳ ಪಾಡೇನು?
ಚಳಿಚಳಿ ತಾಳೆನು ಈ ಚಳಿಯಾ.. ಎಂದು ಹಾಸಿಗೆಯಿಂದ ಎದ್ದು ಮೈಗೊಡವಲಾಗದಷ್ಟು ಚಳಿಯ ನಡುವೆ ಸ್ಕೂಲಿಗೆ ಹೋಗುವ ಮಕ್ಕಳನ್ನು ಎಬ್ಬಿಸುವುದೇ ದೊಡ್ಡ ತ್ರಾಸ. ಚಳಿಯ ಕೊರೆತಕ್ಕೆ ಪ್ರಾಣಿಪಕ್ಷಿಗಳು ಮುದುಡಿಕೊಂಡು ಗೂಡಿನಿಂದ ಹೊರ ಬರುವುದೇ ದುಸ್ತರ.
ಧನುರ್ಮಾಸದಲ್ಲಿ ಸೂರ್ಯೋದಯದ ಮುನ್ನ ಮಹಾಮಂಗಳಾರತಿ ಮಾಡುತ್ತಿದ್ದ ಅರ್ಚಕರ, ಬೆಳ್ಳಂಬೆಳಗ್ಗೆ ಎದ್ದು ತಣ್ಣೀರು ಸ್ನಾನ ಮಾಡಿ ದೇವರ ದರ್ಶನ ಮಾಡುವ ಅಯ್ಯಪ್ಪ ಭಕ್ತರ, ಮೊದಲ ಪಾಳಯದಲ್ಲಿ ಕೆಲಸ ಮಾಡುವವರ, ಮಾರುಕಟ್ಟೆಯಲ್ಲಿ ಕೆಲಸ ಮಾಡುವವರ ಪರಿಸ್ಥಿತಿಯೂ ಇದರಿಂದ ಹೊರತಾಗಿಲ್ಲ. (ಕನ್ನಡಿಗರೇ ಸಂಕ್ರಾಂತಿ ಚಳಿ ಎದುರಿಸಲು ಸಿದ್ಧರಾಗಿ)
ರಾತ್ರಿ, ಮುಂಜಾನೆ ಗುಂಪುಗೂಡಿ ಬೆಂಕಿ ಹಾಕಿ, ಮೈ ಕಾಯಿಸಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಥರಗುಡುವ ಚಳಿಗೆ ರಾಜ್ಯದ ಹೆಚ್ಚಿನಡೆ ಜನ ತತ್ತರಿಸುತ್ತಿದ್ದಾರೆ.
ಚಿಲ್ಡ್ ಬೀರ್ ಗೆ ಫ್ರಿಜ್ ಅವಶ್ಯಕತೆಯೇ ಇಲ್ಲದಂತಿದೆ ಕೊರೆಯುತ್ತಿದೆ ಶೀತಲ ಅಬ್ಬರ. ಹವಾಮಾನದ ವೈಪ್ಯರೀತ್ಯದಿಂದ ವಾತಾವಾರಣ ಇನ್ನು ಕೆಲವು ದಿನ ಹೀಗೇ ಇರುತ್ತೆ ಅನ್ನುತ್ತೆ ಹವಾಮಾನ ಇಲಾಖೆ. ಒಟ್ಟಿನಲ್ಲಿ ಈ ವಾತಾವರಣದ ಲಾಭ ವೈದ್ಯರಿಗೆ, ಬಜ್ಜಿ ಬೋಂಡಾ, ಮಫ್ಲರ್ ಶ್ವೆಟ್ಟರ್ ವ್ಯಾಪಾರಸ್ಥರಿಗೆ.
ಬೆಂಗಳೂರು ಅಲ್ಲದೇ ರಾಜ್ಯದಲ್ಲಿ ಚಳಿಯ ಹಾವಳಿ ವಿಪರಿಮೀತ. ಬೇಸಿಗೆಯಲ್ಲಿ ಕೆಂಡಕಾರುವ ವಿಜಯಪುರ, ಬಳ್ಳಾರಿ, ಮಂಗಳೂರು ಮುಂತಾದ ನಗರಗಳಲ್ಲೂ ಚಳಿಯ ಅಬ್ಬರಕ್ಕೆ ಥರಗುಟ್ಟಿದವರೇ ಹೆಚ್ಚು.
ಸೂರ್ಯನ ಶಾಖಕ್ಕೆ ಮೈಯೊಡ್ಡಲು ಹಾತೊರೆಯುವ ಜನರಿಗೆ ಸೂರ್ಯನ ದರ್ಶನವಾಗುವುದೇ ಲೇಟು. ಶಿವರಾತ್ರಿ ಬೇಗ ಬರಬಾರದೇ, ಸಾಕಪ್ಪಾ ಈ ಚಳಿಯ ಸಹವಾಸ ಎನ್ನುವಂತಾಗಿದೆ ಈ ಬಾರಿಯ ಚಳಿಗಾಲ. (ಹಿಂದಿನ ದಾಖಲೆ ಮುರಿಯುತ್ತಾ ಬೆಂಗಳೂರು ಚಳಿ)
ಅದ್ಯಾಕೋ ಚಳಿಯ ವಾತಾವರಣ ಸೂರ್ಯನನ್ನೇ ಬಿಟ್ಟಿಲ್ಲ ಅನ್ಸುತ್ತೆ. ಗಂಟೆ ಎಂಟಾದರೂ ಸೂರ್ಯ ಮೋಡವನ್ನೇ ಹೊದಿಕೆಯನ್ನಾಗಿ ಮಾಡಿಕೊಂಡು ಪ್ರಕಾಶಿಸುತ್ತಲೇ ಇಲ್ಲದಿರುವುದು ಜನ ಸೋಮಾರಿತನಕ್ಕೆ ಜೋತು ಬೀಳಲು ಇನ್ನೊಂದು ಕಾರಣ ಇದ್ದರೂ ಇರಬಹುದು.
ಹವಾಮಾನ ತಜ್ಞರ ಪ್ರಕಾರ ರಾಜ್ಯದ ಒಳ ಪ್ರದೇಶಗಳತ್ತ ಪೂರ್ವ ದಿಕ್ಕಿನಿಂದ ಒಣಗಾಳಿ ಜತೆಗೆ ಶೀತಗಾಳಿಯೂ ನುಸುಳುತ್ತಿರುವುದರಿಂದ ದಿಢೀರನೆ ಚಳಿ ಕಾಣಿಸಿಕೊಂಡಿದೆಯಂತೆ. ಇದು ಸಂಕ್ರಾಂತಿಯ ನಂತರದ ಕೆಲ ದಿನಗಳಲ್ಲೂ ಮುಂದುವರಿಯಲಿದೆ.
ಆದರೆ ಈ ಬಾರಿಯ ಚಳಿಯ ಶೀತಲ ಸಮರ ಉತ್ತರ ಕರ್ನಾಟಕದ ಭಾಗದ ಜನತೆಗೆ ಹೊಸ ಅನುಭವ. ವಿಜಯಪುರದಲ್ಲಿ ಶತಮಾನದ ಅತಿ ಕಡಿಮೆ ಅಂದರೆ 7 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಧಾರವಾಡದಲ್ಲಿ 9 ಡಿಗ್ರಿ, ಗದಗ, ರಾಯಚೂರು, ಕೊಪ್ಪಳದಲ್ಲಿ, 11 ಡಿಗ್ರಿ, ಹಾವೇರಿ, ಬೆಳಗಾವಿಯಲ್ಲಿ 12 ಡಿಗ್ರಿ, ಬಿಸಿಲ ನಾಡು ಕಲಬುರಗಿ, ಮತ್ತು ಬೀದರ್ ನಲ್ಲಿ 15 ಡಿಗ್ರಿ ಉಷ್ಣಾಂಶ ದಾಖಲಾಗಿ 'ದಾಖಲೆ'ಯಾಗಿತ್ತು. (ಥಂಡಿ ಹಿಡಿದ ವಿಮಾನವನ್ನೇ ತಳ್ಳಿದ ಪ್ರಯಾಣಿಕರು)
ಮುಂಜಾನೆಯ ಮಂಜು, ಶೀತಹವೆ ಮನುಷ್ಯನಿಗಲ್ಲದೇ ಗಿಡಮರಗಳ ಚಿಗುರಿಗೂ ಹಾನಿ. ಬೇಗನೆ ಸೂರ್ಯನ ಕಿರಣ ಬಿದ್ದರೆ ಮಾತ್ರ ಗಿಡಮರಗಳು ಚಿಗುರೊಡೆಯಬಲ್ಲದು. ಇಲ್ಲದಿದ್ದರೆ, ಇದು ಚಳಿಯ ಅಬ್ಬರದಿಂದಾಗಿ ಫಸಲಿಗೂ ಹೊಡೆತ ಬೀಳಲಿದೆ.
ಒಟ್ಟಿನಲ್ಲಿ, ಬೆಳಗ್ಗೆ ಏಳು ಗಂಟೆ ಸೂರ್ಯೋದಯದ ನಿಗದಿತ ಸಮಯ. ಆದರೆ ಎಂಟು, ಒಂಬತ್ತು ಗಂಟೆಯಾದರೂ ಮೋಡ ಮುಸುಕಿದ ವಾತಾವರಣದಿಂದ ಸೂರ್ಯನ ದರುಶನವೇ ಆಗುತ್ತಿಲ್ಲ.
ಸೂರ್ಯದೇವ ಎಷ್ಟು ಗಂಟೆಗೆ ನೀನು ಡ್ಯೂಟಿಗೆ ರಿಪೋರ್ಟ್ ಆಗಬೇಕು, ಆದರೆ ನೀನು ಕಾಣಿಸಿಕೊಳ್ಳುತ್ತಿರುವುದು ಎಷ್ಟು ಗಂಟೆಗೆ? ದೇವರು ನಿನಗೆ ವಹಿಸಿದ ಕೆಲಸವನ್ನು ಸರಿಯಾಗಿ ಮಾಡಬಾರದೇ? ನೀನು ಬೇಗ ಎದ್ದು ನಿನ್ನ ಡ್ಯೂಟಿಯನ್ನು ಸರಿಯಾಗಿ ಮಾಡಿದರೆ ತಾನೇ, ಜನರು ಉಲ್ಲಸಿತರಾಗಿರಲು ಸಾಧ್ಯ.