ಅ.21 ರಂದು ನಡೆಯಬೇಕಿದ್ದ ಮಹದಾಯಿ ಸಭೆ ನ.3ಕ್ಕೆ ಫಿಕ್ಸ್!
ಅ.21 ರಂದು ನಡೆಯಬೇಕಿದ್ದ 3 ರಾಜ್ಯಗಳ ಮುಖ್ಯಮಂತ್ರಿಗಳ ಮಹದಾಯಿ ಸಭೆಯಲ್ಲಿ ಗೋವಾ ಸಿಎಂ ಪಾಲ್ಗೊಳ್ಳಲು ಆಗುವುದಿಲ್ಲ ಎಂದಿದ್ದರು. ಇದರಿಂದ ಸಭೆಯನ್ನು ಇದೇ ನವೆಂಬರ್ 3 ರಂದು ಮುಂಬೈನಲ್ಲಿ ನಿಗದಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು, ಅಕ್ಟೋಬರ್. 21 : ಮಹದಾಯಿ ನದಿ ನೀರು ವಿವಾದದ ಸಂಧಾನ ಸಭೆಗೆ ಕೊನೆಗೂ ಗೋವಾ ಸಿಎಂ ಲಕ್ಷ್ಮಿಕಾಂತ್ ಪರ್ಸೇಕರ್ ಒಪ್ಪಿಗೆ ನೀಡಿದ್ದಾರೆ. ಅಕ್ಟೋಬರ್ 21 ರಂದು ನಡೆಯಬೇಕಿದ್ದ ಸಭೆ ನವೆಂಬರ್ 3ರಂದು ಮುಂಬೈನಲ್ಲಿ ನಡೆಸಲು ಮೂಹೂರ್ತ ನಿಗದಿ ಮಾಡಲಾಗಿದೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮುಂಬೈನಲ್ಲಿ ಅಕ್ಟೋಬರ್ 21 ರಂದು ನಿಗದಿ ಮಾಡಿದ್ದರು. ಆದರೆ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರು ಕೆಲಸ ಒತ್ತಡದಿಂದ ಇನ್ನು 15 ದಿನಗಳ ವರೆಗೆ ಸಭೆಯಲ್ಲಿ ಭಾಗವಹಿಸಲು ಆಗುವುದಿಲ್ಲ ಎಂದು ಹೇಳಿದ್ದರು. [ಮಹದಾಯಿ ಬಿಕ್ಕಟ್ಟು : ಮಹಾ ಸಿಎಂ ಫಡ್ನವಿಸ್ ಮಧ್ಯಸ್ಥಿಕೆ!]
ಈ ಹಿನ್ನೆಲೆಯಲ್ಲಿ ಮಹದಾಯಿ ನದಿ ನೀರು ವಿವಾದದ ಸಭೆಯನ್ನು ನವೆಂಬರ್ 3ಕ್ಕೆ ನಿಗದಿ ಮಾಡಲಾಗಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರು ಈ ಸಭೆಯ ನೇತೃತ್ವ ವಹಿಸಲಿದ್ದಾರೆ. [ಕ್ಯಾತೆ ತೆಗೆದ ಗೋವಾ ಸಿಎಂ, ಮಹಾದಾಯಿ ಸಭೆ ಮುಂದೂಡಿಕೆ!]
ಅಕ್ಟೋಬರ್ 21ಕ್ಕೆ ನಿಗದಿಯಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲವೆಂದು ಹೇಳಿದ್ದ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಅವರು ನವೆಂಬರ್ 3 ರಂದು ನಡೆಯುವ ಸಭೆಯಲ್ಲಿ ಬಾಗವಹಿಸುತ್ತಾರೋ ಇಲ್ಲವೋ ಎಂಬುವುದನ್ನು ಕಾದು ನೋಡಬೇಕಿದೆ.