ಚಪ್ ಚಪ್ಲಿಯಲ್ಲಿ ಬಡಿದಾಡಿಕೊಂಡ ಪುರಸಭಾ ಸದಸ್ಯರು
ಮಾಗಡಿ, ಸೆಪ್ಟೆಂಬರ್ 19 : ಪುರಸಭೆಯಲ್ಲಿನ ಕಾಂಗ್ರೆಸ್ನ ಎರಡು ಗುಂಪುಗಳ ಭಿನ್ನಮತ ಹಾದಿರಂಪ-ಬೀದಿರಂಪವಾಗಿ ಮಾರ್ಪಟ್ಟು, ಸಾರ್ವಜನಿಕವಾಗಿಯೇ ಚಪ್ಪಲಿಯಲ್ಲಿ ಹೊಡೆದಾಡಿಕೊಂಡು, ಬೈಗುಳಗಳ ಸುರಿಮಳೆಗೈದು, ಕೈಕೈಮಿಲಾಯಿಸುವ ಹಂತ ತಲುಪಿದ ಘಟನೆ ಮಾಗಡಿಯಲ್ಲಿ ಶುಕ್ರವಾರ ನಡೆದಿದೆ. ಸಾರ್ವಜನಿಕರಿಗೆ ಮಾತ್ರ ಪುಗಸಟ್ಟೆ ಮನರಂಜನೆ.
ಆಗಿದ್ದೇನು? : ಪುರಸಭೆಯಲ್ಲಿ ಸರ್ವಸದಸ್ಯರ ಸಭೆಯನ್ನು ಬೆಳಿಗ್ಗೆ ಆಯೋಜಿಸಲಾಗಿತ್ತು. ಸಮಯ 11.30 ಆದರೂ ಸಭೆಯಲ್ಲಿ ಕೇವಲ ಮೂರು ಸದಸ್ಯರಿದ್ದ ಪರಿಣಾಮ, ಕೋರಂ ಇಲ್ಲವಾದ ಕಾರಣಕ್ಕೆ ಸಭೆಯನ್ನ ಮುಂದೂಡಲು ಪುರಸಭೆ ಮುಖ್ಯಾಧಿಕಾರಿ ತೀರ್ಮಾನಿಸಿದರು. ಈ ಸಂದರ್ಭದಲ್ಲಿ ಒಳ ಪ್ರವೇಶಿಸಿದ ಜೆಡಿಎಸ್ನ ಆರು ಮಂದಿ ಸದಸ್ಯರು ಸಭೆ ನಡೆಸುವಂತೆ ಒತ್ತಾಯಿಸಿದರು.
ಕಾಂಗ್ರೆಸ್ನ ಸದಸ್ಯರಾದ ಮಹದೇವ್, ಶಿವಕುಮಾರ್, ಮಹೇಶ್ ಯಾವುದೇ ಕಾರಣಕ್ಕೂ ಕೋರಂ ಇಲ್ಲದಿರುವ ಕಾರಣ ಸಭೆ ನಡೆಸದಂತೆ ನಡಾವಳಿ ಬರೆಯಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಚಂದ್ರಬಾಬು ಸಭೆಯನ್ನು ಮುಂದೂಡಲಾಗಿದೆ ಎಂದು ನಡಾವಳಿ ಬರೆದರು.
ಹಾಲಿ ಅಧ್ಯಕ್ಷೆ ನಿರ್ಮಲಾ ಸೀತಾರಾಂರವರು ಒಪ್ಪಂದದಂತೆ ರಾಜೀನಾಮೆ ನೀಡಿ ಬೇರೊಬ್ಬರಿಗೆ ಅವಕಾಶ ನೀಡಬೇಕೆಂದು ಕೆಪಿಸಿಸಿ ಸದಸ್ಯ ಎ.ಮಂಜು ತಾಕೀತು ಮಾಡಿದ್ದರು. ಆದರೆ ಒಪ್ಪಂದದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದ ನಿರ್ಮಲಾ ಸೀತಾರಾಮ್ ವಿರುದ್ಧ ಕಾಂಗ್ರೆಸ್ನ 12 ಸದಸ್ಯರು ಬಂಡಾಯದ ಬಾವುಟ ಹಾರಿಸಿದ್ದಾರೆ.
ಚಪ್ಪಲಿ ಏಟು : ಸಭೆ ಮುಂದೂಡಿಸಿ ಹೊರಬರುತ್ತಿದ್ದಂತೆ, ಕಛೇರಿಯ ಕೆಳಭಾಗದಲ್ಲಿದ್ದ ನಿರ್ಮಲಾ ಸೀತಾರಾಮ್ರ ಪತಿ ಸೀತಾರಾಮ್ ಹಾಗೂ ಹಾಲಿ ಸದಸ್ಯೆ ಸುಶೀಲಾರ ಪತಿ ರಂಗಹನುಮಯ್ಯ ಹಾಗೂ ಮಾಜಿ ಪುರಸಭಾಧ್ಯಕ್ಷೆ ಕಲ್ಪನಾರ ಪತಿ ಶಿವಣ್ಣ ಮೂವರು ಸೇರಿ ಮಹದೇವ್, ಶಿವಕುಮಾರ್ ಹಾಗೂ ಮಹೇಶ್ಗೆ ವಾಚಾಮಗೋಚರವಾಗಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದರು.
ಮಾತಿಗೆ ಮಾತು ಬೆಳೆದು ಹಾಲಿ ಸದಸ್ಯ ಮಹದೇವ್ ಕೂಡ ತಮ್ಮದೇ ಪಕ್ಷದ ಮುಖಂಡರಾದ ರಂಗಹನುಮಯ್ಯ ಮತ್ತು ಸೀತಾರಾಮ್ ವಿರುದ್ಧ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ. ಸದಸ್ಯರಲ್ಲದವರನ್ನ ಪುರಸಭೆಯಿಂದ ಹೊರಗೆ ಹಾಕಿ ಎಂದು ಕೋಪೋದ್ರಿಕ್ತರಾಗಿ ಹೇಳಿದರು. ಪುರಸಭೆ ನಿಮ್ಮಪ್ಪನದ್ದ ಎಂದು ಮಹದೇವ್ ವಿರುದ್ಧ ತಿರುಗಿಬಿದ್ದ ಸದಸ್ಯೆ ಸುಶೀಲಾ ಪತಿ ಮಾಜಿ ಪುರಸಭಾಧ್ಯಕ್ಷ ರಂಗಹನುಮಯ್ಯ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಚಪ್ಪಲಿ ಸೇವೆ ಮಾಡಿಯೇಬಿಟ್ಟರು.
ಪರಿಸ್ಥಿತಿ ಬಿಗಡಾಯಿಸಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಪುರಸಭೆಯ ಅಧಿಕಾರಿಗಳಾದ ಪ್ರಶಾಂತ್, ಸಿಬ್ಬಂದಿಗಳಾದ ನಾಗಯ್ಯ, ರಾಜಣ್ಣ, ರಾಮಕೃಷ್ಣ ಮಧ್ಯಪ್ರವೇಶಿಸಿ ಎಲ್ಲರನ್ನು ಸಮಾಧಾನಗೊಳಿಸಿ ಹೊರಕಳುಹಿಸಿದರು. ಹೊರಬಂದರೂ ಕಛೇರಿಯ ಬಾಗಿಲಿನಲ್ಲೇ ನಿಂತುಕೊಂಡು ಸೀತಾರಾಮ್ ಟೀಮ್ ಮತ್ತು ಮಹದೇವ್ ಟೀಮ್ ಸುಮಾರು ಅರ್ಧಗಂಟೆಗಳ ಕಾಲ ಬೈದಾಡಿಕೊಂಡಿದೆ.