ಬಾಲಕೃಷ್ಣಗೆ ಟಿಕೆಟ್ ಬೇಡ, ಡಿಕೆಶಿ ಮುಂದೆಯೇ ಜಟಾಪಟಿ
ಮಾಗಡಿ, ಅ.22 : ಮಾಗಡಿ ಕ್ಷೇತ್ರದ ಜೆಡಿಎಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲು ಪ್ರಬಲ ವಿರೋಧ ವ್ಯಕ್ತವಾಗಿದೆ. ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಬಾಲಕೃಷ್ಣ ಕಾಂಗ್ರೆಸ್ ಸೇರಿ, ಮುಂದಿನ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ.
ಮಂಗಳವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿಯೇ ಬಾಲಕೃಷ್ಣಗೆ ಟಿಕೆಟ್ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಈ ಕುರಿತು ಭಾರೀ ಚರ್ಚೆ ನಡೆಯಿತು. ಬಾಲಕೃಷ್ಣ ಅರ್ಧದಲ್ಲಿಯೇ ಸಭೆಯಿಂದ ಹೊರ ನಡೆದರು.
ಡಿಕೆಶಿ ಅಕ್ಕ-ಪಕ್ಕ ಕಾಣಿಸಿಕೊಳ್ಳುತ್ತಿರುವ ಜೆಡಿಎಸ್ ರೆಬೆಲ್ ಶಾಸಕರು
ಬಾಲಕೃಷ್ಣ ಅವರಿಗೆ ಟಿಕೆಟ್ ನೀಡಿದರೆ ಈ ಬಾರಿ ಪಕ್ಷಕ್ಕೆ ಸೋಲು ಖಂಡಿತ. ನಾವು ಅವರನ್ನು ಖಂಡಿತ ಬೆಂಬಲಿಸುವುದಿಲ್ಲ. ಬಾಲಕೃಷ್ಣ ಅವರನ್ನು ಇಷ್ಟುದಿನ ಎದುರಾಳಿಯಾಗಿಯೇ ಕಂಡಿದ್ದೇವೆ. ಅವರಿಗೆ ಟಿಕೆಟ್ ನೀಡುವುದಾದರೆ ಅವರು ಮೊದಲು ಕಾಂಗ್ರೆಸ್ ಸೇರಲಿ ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಜೆಡಿಎಸ್ ಏಳು ಶಾಸಕರು ಕಾಂಗ್ರೆಸ್ಗೆ, ಖರ್ಗೆಗೆ ದೂರು
ಬಾಲಕೃಷ್ಣ ಅವರ ಬದಲಿಗೆ ಮಾಗಡಿ ಮಂಜುನಾಥ್ ಅವರಿಗೆ ಟಿಕೆಟ್ ನೀಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು. ಡಿ.ಕೆ.ಶಿವಕುಮಾರ್ ಅವರ ಮುಂದೆಯೇ ಇಷ್ಟೆಲ್ಲಾ ನಡೆಯುತ್ತಿದ್ದರು ಅವರು ಮೌನವಾಗಿ ಕುಳಿತಿದ್ದರು.
ಜನವರಿ 18ಕ್ಕೆ ಕಾಂಗ್ರೆಸ್ ಸೇರ್ಪಡೆ : ಮಾಗಡಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಾಲಕೃಷ್ಣ ಅವರು, 'ಜನವರಿ 18ಕ್ಕೆ ಕಾಂಗ್ರೆಸ್ ಸೇರುವುದು ಖಚಿತ. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನಮ್ಮ ಹಿತ ಕಾಯುತ್ತೇವೆ' ಎಂದು ಭರವಸೆ ಕೊಟ್ಟಿದ್ದಾರೆ' ಎಂದರು.
ಜೆಡಿಎಸ್ನಿಂದ ಅಮಾನತುಗೊಂಡಿರುವ ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯ ಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಇಕ್ಬಾಲ್ ಅನ್ಸಾರಿ (ಗಂಗಾವತಿ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ) ಕಾಂಗ್ರೆಸ್ ಸೇರಲಿದ್ದಾರೆ.