ಮತಪತ್ರ ಪ್ರದರ್ಶಿಸಿ ಗೋಜಿಗೆ ಸಿಕ್ಕಿದ ಜಿಲ್ಲಾ ಪಂಚಾಯತಿ ಸದಸ್ಯ
ಮಡಿಕೇರಿ, ಡಿಸೆಂಬರ್, 28: ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ರವಿ ಕುಶಾಲಪ್ಪ ಅವರು ಭಾನುವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮಡಿಕೇರಿ ಮತಗಟ್ಟೆಯ ಮತದಾನ ಕೇಂದ್ರದಲ್ಲಿ ಮತಪತ್ರ ಪ್ರದರ್ಶನ ಮಾಡಿದ್ದು, ಮತವನ್ನು ತಡೆಹಿಡಿಯಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಮೀರ್ ಅನೀಸ್ ಅಹಮದ್, ಮತದಾರರು ಗೌಪ್ಯತೆ ಕಾಪಾಡಿಕೊಳ್ಳಬೇಕು. ಆದರೆ ರವಿ ಕುಶಾಲಪ್ಪ ಬಹಿರಂಗವಾಗಿ ಮತಪತ್ರ ಪ್ರದರ್ಶಿಸಿದ್ದು ಚುನಾವಣಾ ಕಾನೂನು ಸ್ಪಷ್ಟ ಉಲ್ಲಂಘನೆಯಾಗಿದೆ. ಮತವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಡಿಸೆಂಬರ್ 30ರ ಮತ ಎಣಿಕೆ ದಿನದಂದು ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಹೇಳಿದರು.[ಎಂಎಲ್ಸಿ ಚುನಾವಣೆ ಶೇ 95 ಮತದಾನದ ಅಂದಾಜು]
ಮತಪತ್ರ ಪ್ರದರ್ಶಿಸಿ ಚುನಾವಣಾ ನೀತಿ ಉಲ್ಲಂಘಿಸಿದ ರವಿ ಕುಶಾಲಪ್ಪ ಅವರ ಮತವನ್ನು ಅಸಿಂಧುಗೊಳಿಸುವಂತೆ ಹಾಗೂ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಬೂತ್ ಏಜೆಂಟ್ ವಿ.ಜಿ. ಮೋಹನ್ ಚುನಾವಣಾಧಿಕಾರಿಯವರಿಗೆ ದೂರು ಸಲ್ಲಿಸಿದ್ದಾರೆ.[ವಿಧಾನಪರಿಷತ್ ಚುನಾವಣೆ ಟಿಕೆಟ್ ಕೊಡೋಕೆ ಹಣ ಬೇಡಿಕೆ ಇಟ್ಟಿದ್ರಾ ಜೋಶಿ?]
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಸ್ಥಾಪಿಸಲಾಗಿದ್ದ ವಿಧಾನ ಪರಿಷತ್ ಚುನಾವಣಾ ಮತ ಕೇಂದ್ರದಲ್ಲಿ ಡಿ.27 ರಂದು ಬೆಳಿಗ್ಗೆ 8 ಗಂಟೆಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮತ ಚಲಾಯಿಸಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ಟಿ.ಜಾನ್ ಸೇರಿದಂತೆ ಜಿಲ್ಲಾ ಪಂಚಾಯಿತಿ ಮಡಿಕೇರಿ ತಾಲೂಕು ಪಂಚಾಯಿತಿ ಹಾಗೂ ನಗರಸಭಾ ಸದಸ್ಯರು ಮತ ಚಲಾಯಿಸಿದರು.