ಮದುವೆ ಒಲ್ಲೆ ಎಂದಿದ್ದಕ್ಕೆ ಪ್ರೇಯಸಿ ಮನೆ ಎದುರೇ ವಿಷ ಕುಡಿದ
ಕೊಪ್ಪಳ, ಅಕ್ಟೋಬರ್ 12: ಪ್ರೇಮ ವೈಫಲ್ಯದ ನೋವಿಗೆ ಸಿಲುಕಿದ ಯುವಕನೊಬ್ಬ ಮೊಬೈಲ್ ಫೋನ್ ನಲ್ಲಿ ವಿಡಿಯೋ ಮಾಡಿ, ತನ್ನ ಬೇಸರ ಹೇಳಿಕೊಂಡು, ಆ ನಂತರ ಪ್ರಿಯತಮೆಯ ಮನೆ ಎದುರೇ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಗಾವತಿ ತಾಲೂಕು ಕಲ್ಗುಡಿಯ ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವನು.
ಕಿರಣ್ ಹಾಗೂ ಕೊಪ್ಪಳ ತಾಲೂಕು ಮುನಿರಾಬಾದ್ ನ ಯುವತಿಯೊಬ್ಬಳು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಿರಣ್ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಸಂಬಂಧಿಕರಾಗಿದ್ದು, ಹುಬ್ಬಳ್ಳಿಯಲ್ಲಿ ಜೊತೆಯಾಗಿಯೇ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರ ಹುಡುಗಿಯ ಕುಟುಂಬದವರಿಗೆ ಗೊತ್ತಾಗಿತ್ತು.[ಚೈತ್ರಾ ಸಾವು ಪ್ರಕರಣ: ಪ್ರಿಯಕರ, ಮತ್ತಿಬ್ಬರು ಯುವಕರ ಮೇಲೆ ದೂರು]
ಆ ನಂತರ ಆಕೆಗೆ ಬೇರೆ ಸಂಬಂಧ ಗೊತ್ತು ಮಾಡಲು ನಿರ್ಧರಿಸಿದ್ದರು. ಆ ಹುಡುಗಿಯೂ ಮದುವೆಗೆ ಒಪ್ಪಿದ್ದಳು. ಈ ವಿಚಾರ ಗೊತ್ತಾದ ನಂತರ ಕಿರಣ್, ಆಕೆಯ ಮನೆ ಬಳಿಗೆ ಹೋಗಿ ಜಗಳ ಮಾಡಿದ್ದ. ಆಗ ಕಿರಣ್ ಜತೆಗೆ ಮದುವೆಯಾಗುವುದಕ್ಕೆ ಹುಡುಗಿ ಸ್ಪಷ್ಟವಾಗಿ ನಿರಾಕರಿಸಿದ್ದಳು.[ಬೇಗ ಮದುವೆಯಾಗು ಎಂದ ಅಪ್ಪ, ನೇಣಿಗೆ ಶರಣಾದ ಟೆಕ್ಕಿ]
ಆತ್ಮಹತ್ಯೆ ಮಾಡಿಕೊಂಡ ಕಿರಣ್, ಅದಕ್ಕೂ ಮುನ್ನ 'ನನ್ನ ಸಾವಿಗೆ ಯುವತಿ ಮತ್ತು ಅವಳ ಕುಟುಂಬಸ್ಥರೇ ಕಾರಣ' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ತನ್ನ ತಾಯಿಯಲ್ಲಿ ಕ್ಷಮೆ ಕೋರಿದ್ದಾನೆ. ಆ ನಂತರ ವಿಡಿಯೋವನ್ನು ತನ್ನ ಅಕ್ಕನ ಮೊಬೈಲ್ ಫೋನಿಗೆ ಕಳುಹಿಸಿ, ಯುವತಿಯ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.