ಪ್ರೇಮ ಪತ್ರ ಬರೆದು ಕೆಲಸ ಕಳೆದುಕೊಂಡ 'ಲವ್ ಗುರು'
ಕೊಪ್ಪಳ, ಡಿ. 10 : ಈತ ಅಂತಿಂಥ ಶಿಕ್ಷಕನಲ್ಲ. ಸುಮ್ಮನೆ ಪಾಠ ಮಾಡುವುದು ಬಿಟ್ಟು ವಿದ್ಯಾರ್ಥಿನಿಗೆ ಲವ್ ಲೆಟರ್ ಬರೆದುಕೊಟ್ಟ ಭೂಪ. ಪ್ರೌಢಶಾಲೆಯ ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದುಕೊಟ್ಟು ಈಗ ಕೆಲಸ ಕಳೆದುಕೊಂಡಿದ್ದಾನೆ.
ಸರ್ಕಾರ ನೀಡಿದ ಸಿಲೆಬಸ್ ಕಲಿಸಿಕೊಂಡು, ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿರಬೇಕಾದ ಗುರುವಿಲ್ಲಿ 'ಲವ್ ಗುರು' ಆಗಿ ಬದಲಾಗಿದ್ದ. ಪಾಠ ಮಾಡುವ ಬದಲು 'ಪ್ರೇಮ ಪಾಠ' ಮಾಡಲು ಹೋಗಿ ಈಗ ಮನೆಯಲ್ಲೇ ಕಾಲಕಳೆಯುವಂತೆ ಮಾಡಿಕೊಂಡಿದ್ದಾನೆ.[ಕೊಪ್ಪಳದಲ್ಲಿ ಸಿಕ್ಕಿಬಿದ್ದ ನಕಲಿ ಕಾಮಿ ಸ್ವಾಮಿ]
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಮಂಜಪ್ಪ ಇಂಥ ಕೆಲಸ ಮಾಡಿದ ಮಹಾನುಭಾವ. ತನಿಖೆ ನಡೆಸಿದ ಡಿಡಿಪಿಐ ಶ್ಯಾಮಸುಂದರ್ ಮಂಜಪ್ಪ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.[ಕೊಪ್ಪಳದ ಸುದ್ದಿ ಬೇಕೆ? ಫೇಸ್ಬುಕ್, ಬ್ಲಾಗ್ ನೋಡಿ]
ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬರೆದುಕೊಟ್ಟ ಪ್ರಕರಣ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಯಲಬುರ್ಗಾದ ಕ್ಷೇತ್ರ ಶಿಕ್ಷಣಾಧಿಕಾರಿ ವಿಚಾರಣೆ ಕೈಗೊಂಡು, ಶಿಕ್ಷಕ ಮಂಜಪ್ಪ ಅವರನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದರು. ಅಲ್ಲದೆ ಡಿಡಿಪಿಐ ಶ್ಯಾಮಸುಂದರ್ ಸಹ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದು, ಶಿಕ್ಷಕ ಮಂಜಪ್ಪ 'ಪ್ರೇಮ ಪರ್ವ' ಮೇಲ್ನೋಟಕ್ಕೆ ಸಾಬೀತಾಗಿದ್ದು ಸೇವೆಯಿಂದ ಅಮಾನತು ಮಾಡಿದ್ದಾರೆ.