ವಿವಿಧೆಡೆ ಲೋಕಾಯುಕ್ತ ದಾಳಿ : ಆಸ್ತಿ, ದಾಖಲೆ ವಶ
ಬೆಂಗಳೂರು, ಡಿ. 20: ಬಹಳ ದಿನಗಳಿಂದ ಯಾವುದೇ ದಾಳಿ ನಡೆಸದೆ ಸುಮ್ಮನಿದ್ದ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ಚುಮು ಚುಮು ಚಳಿಯಲ್ಲಿ ರಾಜ್ಯದ ವಿವಿಧೆಡೆ ದಾಳಿ ನಡೆಸಿದರು. ದಾಳಿ ಸಂದರ್ಭ ಕೋಟ್ಯಂತರ ಮೌಲ್ಯದ ಸಂಪತ್ತನ್ನು ವಶಪಡಿಸಿಕೊಂಡಿರುವುದಾಗಿ ಲೋಕಾಯುಕ್ತರು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಆರ್ಟಿಓ ಆಗಿ ಸೇವೆ ಸಲ್ಲಿಸುತ್ತಿರುವ ಪಾಂಡುರಂಗ ಶೆಟ್ಟಿ ಅವರ ಬೆಂಗಳೂರು ನಿವಾಸದ ಮೇಲೆ ಲೋಕಾಯುಕ್ತರು ದಾಳಿ ನಡೆಸಿದರು. ಲೋಕಾಯುಕ್ತ ಎಸ್ಪಿ ಅಶ್ವಿನಿ ನೇತೃತ್ವದಲ್ಲಿ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸಿತು. [5 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ]
ಮೈಸೂರಿನ ಬೋಗಾದಿ ಬಡಾವಣೆಯಲ್ಲಿ ವಾಸವಿರುವ ಶ್ರೀರಂಗಪಟ್ಟಣದಲ್ಲಿ ಕಂದಾಯ ನಿರೀಕ್ಷಕರಾಗಿರುವ ದೊಡ್ಡಯ್ಯ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಅಪಾರ ಆಸ್ತಿ ಪತ್ತೆಯಾಗಿದೆ. ಮಂಡ್ಯದ ಲೋಕಾಯುಕ್ತ ಎಸ್ಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳು ಆಸ್ತಿ ಹಾಗೂ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. [ರಾಜ್ಯದ 3 ಪ್ರದೇಶಗಳಲ್ಲಿ ಲೋಕಾಯುಕ್ತ ದಾಳಿ]
ಹಾಸನದ ವಿದ್ಯಾನಗರದಲ್ಲಿ ವಾಸವಾಗಿರುವ ಆಹಾರ ನಿರೀಕ್ಷಕ ದೊರೆಸ್ವಾಮಿ ಅವರ ಮನೆ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದು, ವಿವಿಧ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಎಸ್ಪಿ ವೇದಮೂರ್ತಿ ನೇತೃತ್ವದ ತಂಡದಲ್ಲಿ ದಾಳಿ ನಡೆಸಲಾಗಿದೆ. [7 ಕಡೆ ದಾಳಿ, 9 ಕೋಟಿ ಆಸ್ತಿ ಪತ್ತೆ]
ಬೀದರ್ನ ಎಸ್ಪಿ ಆಪ್ತ ಕಾರ್ಯದರ್ಶಿ ಅಶೋಕ್ ಪಾಟೀಲ್ ಅವರ ವಿವಿಧ ನಿವಾಸಗಳ ಮೇಲೆ ಲೋಕಾಯುಕ್ತ ಎಸ್ಪಿ ಎಂ.ಬಿ. ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ವಿವಿಧ ದಾಖಲೆ ಪತ್ರಗಳು ಹಾಗೂ ಅಪಾರ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. [4.35 ಕೋಟಿ ಅಕ್ರಮ ಆಸ್ತಿ ಪತ್ತೆ]
ಭದ್ರಾವತಿಯ ಮೈಸೂರ್ ಪೇಪರ್ ಮಿಲ್ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಜಿ.ವಿ. ನಂಜಯ್ಯ ಮನೆ ಮೇಲೆ ಎಸ್ಪಿ ರುದ್ರೇಶ್ ನೇತೃತ್ವದ ತಂಡ ದಾಳಿ ನಡೆಸಿತು.