ಸರ್ಕಾರದ ನೀಚ ಬುದ್ಧಿಗೆ ಲೋಕಾಯುಕ್ತ ಸಂಸ್ಥೆ ಬಲಿ : ಆಪ್
ಬೆಂಗಳೂರು, ಡಿಸೆಂಬರ್ 08 : ಕರ್ನಾಟಕದಲ್ಲಿ ರಾಜಕೀಯವಾಗಿ ಗಟ್ಟಿ ನೆಲೆ ಕಂಡುಕೊಳ್ಳದಿದ್ದರೂ ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ, ಭ್ರಷ್ಟರ ವಿರುದ್ಧ ದನಿ ಎತ್ತುತ್ತಿರುವ ಆಮ್ಮ ಆದ್ಮಿ ಪಕ್ಷದ ಕರ್ನಾಟಕ ಘಟಕ, ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ಅವರ ರಾಜೀನಾಮೆಯನ್ನು ಸ್ವಾಗತಿಸಿದೆ.
ಭ್ರಷ್ಟ ಭಾಸ್ಕರ್ ರಾವ್ ಅನ್ನು ಲೋಕಾಯುಕ್ತ ಸ್ಥಾನದಿಂದ ಪದಚ್ಯುತಿ ಮಾಡುವುದನ್ನು ವಿಳಂಬ ಮಾಡಿದ್ದಲ್ಲದೆ, ಏಕೈಕ ಹಾಲಿ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಅಡಿ ಅವರನ್ನು ಸರಿಯಾದ ಕಾರಣ ನೀಡದೆ ವಜಾ ಮಾಡುವ ಗೊತ್ತುವಳಿ ಮಂಡಿಸುವ ಮೂಲಕ ಲೋಕಾಯುಕ್ತ ಸಂಸ್ಥೆಯನ್ನು ಸಮಾಧಿ ಮಾಡಲು ಮುಂದಾಗಿದೆ. ಸರಕಾರದ ನೀಚ ಬುದ್ಧಿಗೆ ಲೋಕಾಯುಕ್ತ ಸಂಸ್ಥೆ ಬಲಿಯಾಗುತ್ತಿದೆ ಎಂದು ಕರ್ನಾಟಕ ಆಪ್ ಟೀಕಿಸಿದೆ. ['ಭಾಸ್ಕರರಾವ್ ರಾಜೀನಾಮೆ ಅಂಗೀಕರಿಸಬಾರದಿತ್ತು']
ಕೆಲವು ಶಾಸಕರು, ಆರ್.ವಿ ದೇಶಪಾಂಡೆ, ಡಿ.ಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಆಂಜನೇಯರಂತಹ ಪ್ರಭಾವಿ ಮಂತ್ರಿಗಳು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಸುಮಾರು 800 ದೂರುಗಳು, ಭ್ರಷ್ಟ ಭಾಸ್ಕರ್ ರಾವ್ನಿಂದಾಗಿ ಧೂಳು ಹಿಡಿದು ಕೂತಿದ್ದವು. ಈ ಪ್ರಕರಣಗಳು ಸುಭಾಷ್ ಅಡಿಗೆ ವರ್ಗವಾಗುವುರಿಂದ, ತಾವುಗಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿ ಬೀಳುವುದಾಗಿ ಹೆದರಿ ಕಾಂಗ್ರೆಸ್ ಸರ್ಕಾರ ಇಡೀ ಕರ್ನಾಟಕ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಲು ಹೊರಟಿತ್ತು ಎಂದು ಆಪ್ ಆಕ್ರೋಶ ವ್ಯಕ್ತಪಡಿಸಿದೆ.
ಲೋಕಾಯುಕ್ತ ಸಂಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಆಮ್ ಆದ್ಮಿ ಪಕ್ಷ ಈ ಕೆಳಗಿನ ಆಗ್ರಹಗಳನ್ನು ಮಾಡುತ್ತಿದ್ದು, ಇವನ್ನು ರಾಜ್ಯ ಸರ್ಕಾರ ಪೂರೈಸದಿದ್ದಲ್ಲಿ ರಾಜ್ಯಾದ್ಯಂತ ತೀವ್ರತರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. [ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಆಗ್ರಹಗಳು ಹೀಗಿವೆ:
1) ಲೋಕಾಯುಕ್ತ ಸಂಸ್ಥೆಯಲ್ಲಿನ ಹಲವು ಭ್ರಷ್ಟಾಚಾರ ಪ್ರಕರಣಗಳ ಕಡತಗಳನ್ನು ನಾಶವಾಗಿರುವ ಅನುಮಾನವಿದೆ. ಹಾಗಾಗಿ ಭಾಸ್ಕರ್ ರಾವ್ ತನ್ನ ಕಚೇರಿಯಿಂದ ಹೊರತೆಗೆದುಕೊಂಡು ಹೋಗಿರುವ ಎಲ್ಲಾ ಕಡತಗಳ ಕುರಿತು ಈ ಕೂಡಲೇ ಕ್ರಿಮಿನಲ್ ವಿಚಾರಣೆ ಆರಂಭಗೊಳ್ಳಬೇಕು.
2) ಉಪ ಲೋಕಾಯುಕ್ತ ಸುಭಾಷ್ ಅಡಿ ವಿರುದ್ಧ ಮಂಡನೆಯಾಗಿರುವ ಪದಚ್ಯುತಿ ಗೊತ್ತುವಳಿಯನ್ನು ಈಕೂಡಲೇ ಹಿಂಪಡೆದು ಲೋಕಾಯುಕ್ತ ಸಂಸ್ಥೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬಿಡಬೇಕು.
3) ಹೊಸ ಲೋಕಾಯುಕ್ತ ಪದವಿಗೆ ಸಲಹೆಯಾಗುವ ಹೆಸರುಗಳನ್ನು ಸಾರ್ವಜನಿಕಗೊಳಿಸಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರರನ್ನು ಒಳಗೊಂಡಂತೆ ವಿಸ್ತ್ರತವಾಗಿ ಚರ್ಚೆಯಾಗಬೇಕು. ಈ ಮೂಲಕ ಪ್ರಾಮಾಣಿಕ ಹಾಗೂ ಸಕ್ರಿಯ ಲೋಕಾಯುಕ್ತರನ್ನು ಆಯ್ಕೆ ಮಾಡಬೇಕು.
4) ಲೋಕಾಯುಕ್ತ ಹುದ್ದೆಗೆ ಸಲಹೆಯಾಗುವ ಎಲ್ಲಾ ಹೆಸರುಗಳ ಕುರಿತು ಪರಿಶೀಲನೆ ನಂತರವೇ ಲೋಕಾಯುಕ್ತ ನೇಮಕವಾಗಬೇಕು. [ಕರ್ನಾಟಕ ಲೋಕಾಯುಕ್ತ ಹಗರಣದ Timeline]