ಸ್ಪೀಕರ್ ಸಂಧಾನ ವಿಫಲ : ಅಹೋರಾತ್ರಿ ಧರಣಿ ಮುಂದುವರಿಕೆ
ಬೆಂಗಳೂರು, ಜುಲೈ 14 : ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು, ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಧರಣಿ ನಿರತ ಪ್ರತಿಪಕ್ಷಗಳ ಜೊತೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ನಡೆಸಿದ ಸಭೆ ವಿಫಲವಾಗಿದೆ. ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರಾಕರಿಸಿದರು. ಆದರೆ, ಪ್ರತಿಪಕ್ಷಗಳು ತಮ್ಮ ಪಟ್ಟನ್ನು ಮುಂದುವರೆಸಿವೆ.['ಜಾರ್ಜ್ ರಾಜೀನಾಮೆ ಪಡೆದು, ಉತ್ತರ ಕೊಡಿ']
ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಸಚಿವ ಟಿ.ಬಿ.ಜಯಚಂದ್ರ, ಕಾಗೋಡು ತಿಮ್ಮಪ್ಪ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆರ್.ಅಶೋಕ್ ಮುಂತಾದವರು ಪಾಲ್ಗೊಂಡಿದ್ದರು. ಒಮ್ಮತದ ನಿರ್ಧಾರಕ್ಕೆ ಬರಲು ಸಭೆ ವಿಫಲವಾಗಿದೆ. [ಸಿಐಡಿ ಮತ್ತು ನ್ಯಾಯಾಂಗ ತನಿಖೆಯ ನಡುವಿನ ವ್ಯತ್ಯಾಸವೇನು?]
ಗುರುವಾರ ಬೆಳಗ್ಗೆ ಎರಡು ಬಾರಿ ವಿಧಾನಸಭೆ ಕಲಾಪವನ್ನು ಮುಂದೂಡಲಾಗಿದೆ. ಆದರೆ, ಸಚಿವರ ರಾಜೀನಾಮೆ ಪಡೆಯುವ ತನಕ ಮತ್ತು ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವ ತನಕ ಹೋರಾಟ ಮುಂದುವರೆಸಲು ಬಿಜೆಪಿ ಮತ್ತು ಜೆಡಿಎಸ್ ನಿರ್ಧರಿಸಿವೆ. [ನ್ಯಾಯಾಂಗ ತನಿಖೆಗೆ ಪ್ರತಿಪಕ್ಷಗಳ ವಿರೋಧವೇಕೆ?]
ಒಂದು ತಿಂಗಳು ರಾಜೀನಾಮೆ ಪಡೆಯಿರಿ : ಸ್ಪೀಕರ್ ಜೊತೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಅವರು 'ಜಾರ್ಜ್ ನಿರಪರಾಧಿ ಎಂದು ಹೇಳಿದರು'. ಪ್ರತಿಪಕ್ಷ ನಾಯಕ ಶೆಟ್ಟರ್ ಅವರು, 'ಒಂದು ತಿಂಗಳ ಮಟ್ಟಿಗೆ ಜಾರ್ಜ್ ರಾಜೀನಾಮೆ ಪಡೆಯಿರಿ. ಒಂದು ತಿಂಗಳವೊಳಗೆ ತನಿಖೆಯ ವರದಿಯನ್ನು ತರಿಸಿಕೊಳ್ಳಿ' ಎಂದು ಸಲಹೆ ನೀಡಿದರು.
ಆದರೆ, ರಾಜೀನಾಮೆ ಪಡೆಯಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಮುಖ್ಯಮಂತ್ರಿಗಳು ಬದ್ಧರಾಗಿರುವುದರಿಂದ ಸಂಧಾನ ಸಭೆ ಮುರಿದುಬಿದ್ದಿದೆ. ಇಂದು ಬೆಳಗ್ಗೆ ಗದ್ದಲದ ಹಿನ್ನಲೆಯಲ್ಲಿ ವಿಧಾನಪರಿಷತ್ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.