ಲಿಂಗಾಯತ ಸ್ವತಂತ್ರ ಧರ್ಮ, ಬಯಲಾಯಿತು ಬಿಎಸ್ ವೈ ದ್ವಂದ್ವ ನಿಲುವು
ಬೆಂಗಳೂರು, ಜುಲೈ 29: ಲಿಂಗಾಯತ ಸ್ವತಂತ್ರ ಧರ್ಮ ವಿವಾದ ಭುಗಿಲೇಳುತ್ತಿರುವ ಸಂದರ್ಭದಲ್ಲೇ ಬಹಿರಂಗ ಆಗಿರುವ ದಾಖಲೆಯೊಂದು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಅವರ ದ್ವಂದ್ವ ನೀತಿಯನ್ನು ಬಯಲಿಗಿಟ್ಟಿದೆ.
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾವು ಐದು ವರ್ಷದ ಹಿಂದೆ ಮನವಿಯೊಂದನ್ನು ಆಗಿನ ಪ್ರಧಾನಿ ಮನ್ ಮೋಹನ್ ಸಿಂಗ್ ಅವರಿಗೆ ಸಲ್ಲಿಸಿತ್ತು. ಅದಕ್ಕೆ ಯಡಿಯೂರಪ್ಪ ಸೇರಿದಂತೆ ಪ್ರಮುಖ ಲಿಂಗಾಯತ ನಾಯಕರು ಸಹಿ ಹಾಕಿದ್ದರು.
'ಧರ್ಮ ಸಂಕಟ'ದಲ್ಲಿ ಬಿಜೆಪಿ, ಸ್ವತಂತ್ರ ಧರ್ಮದ ವಿಚಾರದಲ್ಲಿ ಏನಂತಾರೆ?
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಿಸಲು ಕೇಂದ್ರಕ್ಕೆ ಶಿಫಾರಸು ಮಾಡ್ತೀನಿ ಎಂದರೆ ಯಡಿಯೂರಪ್ಪ ಅವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ.
ಇಂದಿನ ಸ್ಥಿತಿಗೆ ವೀರಶೈವರಲ್ಲಿನ ಅವಿವೇಕವೇ ಕಾರಣ: ಚಿದಾನಂದ ಮೂರ್ತಿ
ಇದರ ಜತೆಗೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಅವರು, "ವೀರಶೈವ ಹಾಗೂ ಲಿಂಗಾಯತ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಅವು ಹಿಂದೂ ಧರ್ಮದ ಭಾಗವೇ" ಎಂದು ಯಡಿಯೂರಪ್ಪ ಅವರು ತಮ್ಮ ನಿಲುವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಜನಗಣತಿ ವೇಳೆ ಸಲ್ಲಿಸಿದ್ದ ಮನವಿ
2013ರ ಜುಲೈ 25ರಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮನವಿ ಸಲ್ಲಿಸಿ, ಜನ ಗಣತಿ ವೇಳೆ ದೇಶದಾದ್ಯಂತ ಇರುವ ಲಿಂಗಾಯತರಿಗೆ ವೀರಶೈವ ಲಿಂಗಾಯತ ಎಂಬ ಪ್ರತ್ಯೇಕ ಧರ್ಮ, ಸಂಕೇತ ದಾಖಲಿಸಲು ಅವಕಾಶ ಮಾಡಿಕೊಡಬೇಕು ಎಂದಿದ್ದರು.
ಶಾಸಕರು-ಸಂಸದರ ಸಹಿ ಇತ್ತು
ಮನವಿ ಪತ್ರದಲ್ಲಿ ರಾಜ್ಯದ ಎಲ್ಲ ಲಿಂಗಾಯತ ಶಾಸಕ-ಸಂಸದರ ಸಹಿ ಇತ್ತು. "ನಾವು ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಗೋವಾ ಮತ್ತು ದೇಶದ ಇತರ ಭಾಗದ ಜನಪ್ರತಿನಿಧಿಗಳು. ಸಮುದಾಯದಿಂದ ನಾಲ್ಕು ಕೋಟಿ ಮಂದಿ ಇದ್ದೀವಿ. ನಾವು ಈ ಮನವಿಯನ್ನು ಬೆಂಬಲಿಸುತ್ತೇವೆ" ಎಂಬ ಒಕ್ಕಣೆ ಒಳಗೊಂಡಿದೆ.
ಚಿದಂಬರಂ ಅವರಿಗೂ ಮನವಿ ಸಲ್ಲಿಕೆ
ಇದೇ ರೀತಿಯ ಮನವಿಯೊಂದನ್ನು ಜುಲೈ ಏಳರ, 2013ರಲ್ಲಿ ಕೇಂದ್ರ ಸಚಿವರಾಗಿದ್ದ ಪಿ.ಚಿದಂಬರಂ ಅವರಿಗೆ ಸಲ್ಲಿಸಲಾಯಿತು. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನ ಮಾನ ನೀಡಬೇಕು. ಗಣತಿ ವೇಳೆ ಸಿಕ್, ಜೈನ್ ಮತ್ತು ಬೌದ್ಧರ ರೀತಿಯಲ್ಲಿ ವೀರಶೈವ ಲಿಂಗಾಯತ ಧರ್ಮವನ್ನು ಪರಿಗಣಿಸಬೇಕು ಎಂದು ಮನವಿ ಮಾಡಲಾಯಿತು.
ಜೆಡಿಎಸ್ ನಿಂದಲೂ ದ್ವಂದ್ವ ನೀತಿ
ಇನ್ನು ಜೆಡಿಎಸ್ ನ ದ್ವಂದ್ವ ನೀತಿ ಕೂಡ ಬಯಲಾಗುತ್ತಿದೆ. ಈಗ ಆ ಪಕ್ಷ ಸಿದ್ದರಾಮಯ್ಯ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ಮಾಡುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದೆ. ಆದರೆ ಈ ಹಿಂದೆ ಮನವಿಗೆ ಬಸವರಾಜ ಹೊರಟ್ಟಿ, ಎಸ್ ಎಸ್ ಶಿವಶಂಕರ್ ಮತ್ತು ಮಲ್ಲಿಕಾರ್ಜುನ ಖೂಬಾ ಕೂಡ ಸಹಿ ಹಾಕಿದ್ದರು.
ಧಾರ್ಮಿಕ ಹಾಗೂ ರಾಜಕೀಯ ನಿಲುವು ಬೇರೆಬೇರೆ
ಇನ್ನು ಯಡಿಯೂರಪ್ಪ ಅವರ ನಿಲುವನ್ನು ಬೆಂಬಲಿಸಿರುವ ಮಾತೆ ಮಹಾದೇವಿ, ಮನವಿಗೆ ಸಹಿ ಹಾಕಿರುವುದು ಯಡಿಯೂರಪ್ಪ ಅವರ ಧಾರ್ಮಿಕ ನಿಲುವು. ಇದೀಗ ವಿರೋಧ ವ್ಯಕ್ತಪಡಿಸಿರುವುದು ರಾಜಕೀಯ ನಿಲುವು. ಯಡಿಯೂರಪ್ಪ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ. ಆ ಪಕ್ಷವು ಹಿಂದುತ್ವದಲ್ಲಿ ನಂಬಿಕೆ ಇರಿಸಿಕೊಂಡಿದೆ ಎಂದು ಹೇಳಿದ್ದಾರೆ.