ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಚಿರತೆ
ಮಂಡ್ಯ, ಜನವರಿ.05: ಕಳೆದ ಆರು ತಿಂಗಳಿನಿಂದ ರೈತರ ಸಾಕು ಪ್ರಾಣಿಗಳನ್ನು ತಿಂದು ರೈತರ ನಿದ್ದೆಗೆಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದ್ದು, ಮೈಸೂರು ಮೃಗಾಲಯಕ್ಕೆ ಕೊಂಡೊಯ್ಯಲಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಕಾಳೇನಹಳ್ಳಿ ಗ್ರಾಮದ ಕಿರಣ್ ಅವರ ತೋಟದ ಮನೆಯ ಬಳಿ ಚಿರತೆ ಬೋನಿಗೆ ಸೆರೆ ಸಿಕ್ಕಿತು. ಇದೀಗ ಸೆರೆ ಸಿಕ್ಕಿರುವ ಚಿರತೆಗೆ ಮೈಸೂರು ಮೃಗಾಲಯದಲ್ಲಿ ಚಿಕಿತ್ಸೆ ನೀಡಿ ಬಳಿಕ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದೆಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.[ಚಾಮರಾಜನಗರದಲ್ಲಿ ಕಾಡು ಪ್ರಾಣಿಗಳು ಸಾವನ್ನಪ್ಪಲು ಕಾರಣವೇನು?]
ಆರೇಳು ತಿಂಗಳಿನಿಂದ ಈ ಭಾಗದಲ್ಲಿ ರೈತರ ಸಾಕು ಪ್ರಾಣಿಗಳಾದ ಹಸು, ಎಮ್ಮೆ, ನಾಯಿ, ಕುರಿ, ಮೇಕೆ ಮತ್ತಿತರ ಪ್ರಾಣಿಗಳನ್ನು ತಿಂದು ಹಾಕುವ ಮೂಲಕ ರೈತರು ಹೆಜ್ಜೆ ಹೆಜ್ಜೆಗೂ ಭಯದ ವಾತಾವರಣದಲ್ಲಿಯೇ ಬದುಕುವಂತಾಗಿತ್ತು.[ಚಿರತೆ ಸಂತತಿಯಲ್ಲಿ ಕರ್ನಾಟಕಕ್ಕೆ ದ್ವಿತೀಯ ಸ್ಥಾನ]
ಕಳೆದ ವಾರ ಕಿರಣ್ ಅವರ ಮನೆ ಬಳಿ ಚಿರತೆಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಿರಣ್ ಅವರು ಅರಣ್ಯ ಇಲಾಖೆಗೆ ದೂರು ನೀಡಿ ಚಿರತೆಯನ್ನು ಹಿಡಿಯುವಂತೆ ಲಿಖಿತ ಮನವಿ ಮಾಡಿದ್ದರು. ಕಿರಣ್ ಮನವಿ ಸ್ವೀಕರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಐದು ದಿನಗಳ ಹಿಂದೆ ಕಾಳೇನಹಳ್ಳಿ ಬಳಿ ಬೋನನ್ನು ಇಟ್ಟು ಕಾರ್ಯಾಚರಣೆ ನಡೆಸಿದ್ದರು.