ರಾಜ್ಯದ ಎರಡು ಕಡೆ ಚಿರತೆ ದಾಳಿ: ರೈತನಿಗೆ ಗಾಯ, ಕರು ಸಾವು
ಮೈಸೂರಿನ ಎಚ್.ಡಿ.ಕೋಟೆಯ ಆನಹಟ್ಟಿ ಗ್ರಾಮದಲ್ಲಿ ಮಹದೇವ ಸ್ವಾಮಿ (29) ಎಂಬ ರೈತರೊಬ್ಬರು ಚಿರತೆ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದರೆ, ಕೊಪ್ಪಳ ಜಿಲ್ಲೆಯ ಗುನ್ನಾಳ ಎಂಬ ಗ್ರಾಮದಲ್ಲಿ ಚಿರತೆಯ ದಾಳಿಗೆ ಕರುವೊಂದು ಬಲಿಯಾಗಿದೆ.
ಬೆಂಗಳೂರು, ಮಾರ್ಚ್ 30: ಊರು ಕೇರಿಗಳಿಗೆ ನುಗ್ಗಿ ಮನುಷ್ಯರ ಮೇಲೆ ಕಾಡು ಪ್ರಾಣಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳಿಗೆ ಇನ್ನೂ ಪೂರ್ಣ ವಿರಾಮ ಬಿದ್ದಿಲ್ಲ. ರಾಜ್ಯದಲ್ಲಿ ಗುರುವಾರ ಮುಂಜಾನೆ ರಾಜ್ಯದ ಎರಡು ಕಡೆ ಚಿರತೆ ದಾಳಿ ಪ್ರಕರಣಗಳು ವರದಿಯಾಗಿವೆ.
ಮೊದಲ ಪ್ರಕರಣದಲ್ಲಿ ಮೈಸೂರಿನ ಎಚ್.ಡಿ.ಕೋಟೆಯ ಆನಹಟ್ಟಿ ಗ್ರಾಮದಲ್ಲಿ ಮಹದೇವ ಸ್ವಾಮಿ (29) ಎಂಬ ರೈತರೊಬ್ಬರು ಚಿರತೆ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾರೆ.
ಎಂದಿನಂತೆ ಗುರುವಾರ ಮುಂಜಾನೆಯೇ ಹೊಲದ ಕೆಲಸಗಳಿಗಾಗಿ ತೆರಳಿದ್ದ ಅವರು, ನಿತ್ಯ ಕಾಯಕದಲ್ಲಿ ನಿರತರಾಗಿದ್ದಾಗ ಚಿರತೆಯೊಂದು ಅವರ ಮೇಲೆರಗಿ ದಾಳಿ ನಡೆಸಿದೆ. ಆದರೆ, ಅವರು ಜೋರಾಗಿ ಕೂಗಾಡಿದ್ದರಿಂದಾಗಿ ಅಕ್ಕಪಕ್ಕದ ಹೊಲದಲ್ಲಿದ್ದ ಕೆಲವರು ಓಡಿ ಬಂದಿದ್ದಾರೆ. ಆಗ ಚಿರತೆ ಅವರನ್ನು ಬಿಟ್ಟು ಪರಾರಿಯಾಗಿದೆ ಎಂದು ಹೇಳಲಾಗಿದೆ.
ಈ ದಾಳಿಯಲ್ಲಿ ಮಹದೇವ ಸ್ವಾಮಿಯ ಬೆನ್ನು ಹಾಗೂ ಕೈಗಳಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕೊಪ್ಪಳ ವರದಿ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯ ಗುನ್ನಾಳ ಎಂಬ ಗ್ರಾಮದಲ್ಲಿ ಬುಧವಾರ (ಮಾರ್ಚ್ 29) ಮಧ್ಯರಾತ್ರಿ ವೇಳೆ ಚಿರತೆಯೊಂದು ಹಸುಗಳ ಕೊಟ್ಟಿಗೆಯೊಂದರ ಮೇಲೆ ದಾಳಿ ಮಾಡಿ, ಒಂದು ಕರುವನ್ನು ಕೊಂದು ಹಾಕಿದೆ.
ರಾಮಣ್ಣ ತಳವಾರ ಎಂಬುವರ ಮನೆಯ ಹಿಂಭಾಗದಲ್ಲಿರುವ ಕೊಟ್ಟಿಗೆಯ ಮೇಲೆ ಈ ದಾಳಿ ನಡೆದಿದೆ. ಈ ಭಾಗದಲ್ಲಿ ಕಳೆದ 15 ದಿನಗಳಿಂದಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದು ಈಗಾಗಲೇ ಅರಣ್ಯಾಧಿಕಾರಿಗಳಿಗೆ ದೂರು ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.