ಪರಿಷತ್ ಫಲಿತಾಂಶ : ಯಾರು ಏನು ಹೇಳಿದರು?
ಬೆಂಗಳೂರು, ಡಿಸೆಂಬರ್ 31 : ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13 ಸ್ಥಾನಗಳಲ್ಲಿ ಜಯಗಳಿಸಿದೆ. ಬಿಜೆಪಿ 6 ಮತ್ತು ಜೆಡಿಎಸ್ನ 4 ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಅಚ್ಚರಿ ಉಂಟು ಮಾಡಿದ್ದಾರೆ.
ಈ ಚುನಾವಣೆ ಫಲಿತಾಂಶ ಮೇಲ್ಮನೆಯ ಬಲಾಬಲದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ. ಕಾಂಗ್ರೆಸ್ನ 12 ಸದಸ್ಯರು ನಿವೃತ್ತರಾಗಿದ್ದು, ಒಂದು ಸ್ಥಾನವನ್ನು ಮಾತ್ರ ಪಕ್ಷ ಹೆಚ್ಚಿಗೆ ಪಡೆದಿದೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಲಾ ಒಂದೊಂದು ಸ್ಥಾನಗಳನ್ನು ಕಳೆದುಕೊಂಡಿವೆ. [ವಿಧಾನಪರಿಷತ್ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು?]
ಪರಿಷತ್ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಇದು ಸರ್ಕಾರಕ್ಕೆ ಸಿಕ್ಕ ಗೆಲುವು. ಬಂಡಾಯ ಅಭ್ಯರ್ಥಿಗಳೆಲ್ಲ ಸೋಲುತ್ತಾರೆ ಎಂದು ಗೊತ್ತಿತ್ತು. ಮತದಾರರು ಬುದ್ಧಿವಂತರು. ಯೋಚಿಸಿ ಮತದಾನ ಮಾಡಿದ್ದಾರೆ' ಎಂದು ಹೇಳಿದ್ದಾರೆ. [ಪರಿಷತ್ ಫೈಟ್ : ಬಿಜೆಪಿ ಸೋಲಿನ ಹೊಣೆ ಯಾರ ಹೆಗಲಿಗೆ?]
'ಕೆಲವು ಕ್ಷೇತ್ರಗಳ ಫಲಿತಾಂಶ ನಿರಾಶೆ ಉಂಟು ಮಾಡಿದೆ. ಹಣದ ಪ್ರಭಾವ, ಅಧಿಕಾರದ ದುರುಪಯೋಗದಿಂದಾಗಿ ಕೆಲವು ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಫಲಿತಾಂಶದ ಬಗ್ಗೆ ಯಾರು, ಏನು ಹೇಳಿದರು? ಚಿತ್ರಗಳಲ್ಲಿ ನೋಡಿ.......
'ಕಾರ್ಯಕರ್ತರು ಹೇಳಿದ್ದನ್ನೇ ಮಾಡಿದ್ದಾರೆ'
'ಹಾಸನದಲ್ಲಿ ಪಕ್ಷಕ್ಕೆ ಐತಿಹಾಸಿಕ ಜಯ ದೊರೆತಿದೆ. ಅನಿರೀಕ್ಷಿತ ಫಲಿತಾಂಶ ತರುವುದಾಗಿ ಕಾರ್ಯಕರ್ತರು ಹೇಳಿದ್ದರು. ಅದನ್ನು ಮಾಡಿ ತೋರಿಸಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರು ಆಡಿದ ಮಾತಿಗೆ ಗೌರವ ಕೊಡುವುದಾದರೆ ಹೇಳಿದಂತೆ ನಡೆದುಕೊಳ್ಳಬೇಕು'.
'ಭರವಸೆಯನ್ನು ಸರ್ಕಾರ ಈಡೇರಿಸಿದೆ'
ಪರಿಷತ್ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು, 'ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ಇದು ಗ್ರಾಮೀಣ ಜನರಿಗೆ ತಲುಪಿದೆ ಎನ್ನುವುದನ್ನು ಫಲಿತಾಂಶ ಸಾಬೀತು ಪಡಿಸಿದೆ' ಎಂದು ಹೇಳಿದ್ದಾರೆ.
'ಹಣ ಅಧಿಕಾರದ ಪ್ರಭಾವ'
'2 ರಿಂದ 3 ಕ್ಷೇತ್ರಗಳ ಫಲಿತಾಂಶ ನಿರಾಶೆ ಉಂಟು ಮಾಡಿದೆ. ಹಣದ ಪ್ರಭಾವ, ಅಧಿಕಾರದ ದುರುಪಯೋಗದಿಂದಾಗಿ ಕೆಲವು ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಸೋಲಿನ ಪರಾಮರ್ಶೆ ಮಾಡುತ್ತೇವೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
'ಆತುರದಿಂದ ನಿರ್ಧರಿಸಿಲ್ಲ'
'ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಆತುರದ ನಿರ್ಧಾರ ಕೈಗೊಂಡಿಲ್ಲ. ಶಿವಮೊಗ್ಗದಲ್ಲಿ ಸಿದ್ದರಾಮಣ್ಣ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿತ್ತು. ನಾನು ವಿರೋಧಿಸಿದ್ದೇನೆ ಎನ್ನುವ ಸುದ್ದಿ ಸುಳ್ಳು. ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇವೆ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
'ನನ್ನ ಗೆಲುವು ಅಭಿಮಾನಿಗಳ ಗೆಲುವು'
'ನನ್ನ ಗೆಲುವು ಅಭಿಮಾನಿಗಳ ಗೆಲುವು. ನಾನು ಎಂದೂ ದೊಡ್ಡವನಲ್ಲ, ನನ್ನನ್ನು ಬೆಳೆಸಿದ, ನಾಯಕನನ್ನಾಗಿ ರೂಪಿಸಿದ ಬಿಜೆಪಿ ದೊಡ್ಡದು. ನನಗಾಗಿ ಅಹೋರಾತ್ರಿ ಶ್ರಮಿಸಿದ ಕಾರ್ಯಕರ್ತ ಪಡೆಯ ಗೆಲುವು' ಎಂದು ಬಿಜೆಪಿಯ ಬಂಡಾಯ ಅಭ್ಯರ್ಥಿ ಬಸವನಗೌಡ ಯತ್ನಾಳ್ ಹೇಳಿದ್ದಾರೆ.
'ಸೋಲು ಆಘಾತ ತಂದಿದೆ'
'ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿನ ಪಕ್ಷದ ಸೋಲು ಆಘಾತ ತಂದಿದೆ. ಯಾವುದೇ ಕಾರಣಕ್ಕೂ ಈ ಎರಡು ಕ್ಷೇತ್ರಗಳಲ್ಲಿ ಪಕ್ಷ ಸೋಲುವ ಸಾಧ್ಯತೆಯೇ ಇಲ್ಲ. ಪಕ್ಷದ ನಾಯಕರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲವಾಗಿದೆ' ಎಂದು ಜೆಡಿಎಸ್ ನಾಯಕ ಚೆಲುವರಾಯ ಸ್ವಾಮಿ ಹೇಳಿದ್ದಾರೆ.