ಅತೃಪ್ತರಿಗೆ ಅಭಯ ನೀಡದ ಕೃಷ್ಣ, ಪ್ರಸಾದ್ ಅಂಡ್ ಪ್ರಸಾದ್ ಟಾಕ್
ಬೆಂಗಳೂರು, ಜೂನ್ 27: ಅತೃಪ್ತ ಕಾಂಗ್ರೆಸ್ಸಿಗರ ಜತೆ ಸೋಮವಾರ ನಡೆಸಬೇಕಿದ್ದ ಸಭೆಯನ್ನು ಮಾಜಿ ಸಿಎಂ, ವಿದೇಶಾಂಗ ಸಚಿವ ಎಸ್ಸೆಂ ಕೃಷ್ಣ ಅವರು ರದ್ದುಗೊಳಿಸಿದ್ದಾರೆ. ಈ ಮೂಲಕ ಭಿನ್ನಮತೀಯರಿಗೆ ಭಾರಿ ಹಿನ್ನಡೆಯಾಗಿದೆ. ಅಂಬರೀಶ್, ಖಮರುಲ್ ಇಸ್ಲಾಂ, ಶ್ರೀನಿವಾಸ್ ಪ್ರಸಾದ್ ಅವರ ಮುಂದೆ ನಡೆ ಏನು? ಕರ್ನಾಟಕ ರಾಜಕೀಯ ಚಟುವಟಿಕೆಗಳ ರೌಂಡಪ್ ಇಲ್ಲಿದೆ
ಅತೃಪ್ತರೊಂದಿಗೆ ನಡೆಯಬೇಕಿದ್ದ ಸಭೆರನ್ನು ಕೃಷ್ಣ ಅವರು ರದ್ದುಗೊಳಿಸಲು ಅನಾರೋಗ್ಯ ಕಾರಣ ಎನ್ನಲಾಗಿದೆ. ಆದರೆ, ಈಗಾಗಲೇ ಅತೃಪ್ತರಿಗೆ ಕಾದು ನೋಡಿ, ತಾಳ್ಮೆಯಿಂದಿರಿ ಎಂದು ಬೋಧಿಸುವ ಮೂಲಕ ಕೃಷ್ಣ ಅವರು ಭಿನ್ನಮತೀಯರಿಂದ ದೂರ ಸರಿಯುವುದು ನಿಚ್ಚಳವಾಗಿದೆ.[ಅಂಬರೀಶ್ ಮತ್ತೆ ಸಂಪುಟಕ್ಕೆ, ರಮ್ಯಾ ಮತ್ತೆ ಸಂಸತ್ ಸ್ಥಾನಕ್ಕೆ?]
ಬಂಡಾಯಗಾರರು ಯಾರು?: ಸಂಪುಟದಿಂದ ಕೈ ಬಿಟ್ಟ ಬಳಿಕ ಮುಖ್ಯಮಂತ್ರಿಗಳ ವಿರುದ್ಧ ದನಿ ಎತ್ತಿದವರ ಪೈಕಿ ಮಾಜಿ ಕಂದಾಯ ಸಚಿವ ಶ್ರೀನಿವಾಸಪ್ರಸಾದ್, ಮಾಜಿ ವಸತಿ ಸಚಿಅ ಅಂಬರೀಶ್ ಹಾಗೂ ಖಮರುಲ್ ಇಸ್ಲಾಂ ಮುಂಚೂಣಿಯಲ್ಲಿದ್ದಾರೆ. ಅಂಬರೀಷ್ ಅವರ ರೆಬೆಲ್ ವಾಯ್ಸ್ ಸದ್ಯಕ್ಕೆ ತಣ್ಣಗಾಗಿದೆ. ರಮ್ಯಾ ಅವರು ಕ್ಯಾಬಿನೆಟ್ ಪ್ರವೇಶ ವಿಳಂಬ ಅಥವಾ ಕಷ್ಟ ಎಂಬುದು ಸ್ಪಷ್ಟವಾಗಿದೆ.
ಹೈದರಾಬಾದ್ ಕರ್ನಾಟಕ ಪ್ರದೇಶದ ನಾಯಕರನ್ನು ಒಟ್ಟುಗೂಡಿಸುವಲ್ಲೇ ಸುಸ್ತಾಗಿರುವ ಖಮರುಲ್ ಇಸ್ಲಾಂರನ್ನು ಪಕ್ಷ ಇನ್ನೂ ಬಂಡಾಯಗಾರ ಎಂದು ಪರಿಗಣಿಸಿಲ್ಲ. ಶ್ರೀನಿವಾಸ್ ಪ್ರಸಾದ್ ಅವರು ಏಕಾಂಗಿಯಾಗಿ ಒಂದಷ್ಟು ಗುಪ್ತ ಸಭೆಗಳನ್ನು ನಡೆಸುತ್ತಿದ್ದಾರೆ ಅಷ್ಟೆ,
ಭಾನುವಾರ ಟುಸ್ ಆದ ಭಿನ್ನರ ಸಭೆ: ಸಿಎಂ ಸಿದ್ದರಾಮಯ್ಯ ವಿರುದ್ಧ ದನಿ ಎತ್ತಲು ನಮ್ಮ ಜತೆ 40ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂಬ ಸುದ್ದಿ ಕೇಳಿ ಕಾಂಗ್ರೆಸ್ ಅಷ್ಟೇ ಅಲ್ಲ ಬಿಜೆಪಿ, ಜೆಡಿಎಸ್ ಕೂಡಾ ಒಮ್ಮೆ ಹುಬ್ಬೇರಿಸಿತ್ತು. ಆದರೆ, ಶ್ರೀನಿವಾಸಪ್ರಸಾದ್ ನೇತೃತ್ವದಲ್ಲಿ ಭಾನುವಾರ ನಡೆಯಬೇಕಿದ್ದ ಸಭೆ ಸಂಖ್ಯಾ ಬಲವಿಲ್ಲದೆ ರದ್ದಾಯಿತು.
ಹರಿಪ್ರಸಾದ್ ಜತೆ ಶ್ರೀನಿವಾಸ್ ಪ್ರಸಾದ್ ಮಾತುಕತೆ: ಎಸ್ಸೆಂಕೃಷ್ಣರನ್ನು ಭೇಟಿ ಮಾಡಿದ ನಂತರ ಶ್ರೀನಿವಾಸ್ ಪ್ರಸಾದ್ ಅವರು ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸಂಪುಟ ಪುನರ್ ರಚನೆ, ಸ್ವಹಿತಾ ಸಕ್ತಿ, ನಾಯಕತ್ವ ಬದಲಾವಣೆ, ಅತೃಪ್ತರ ಬಣ, ಜಾಫರ್ ಷರೀಫ್ ಅವರ ಬೆಂಬಲದ ಬಗ್ಗೆ ಹರಿಪ್ರಸಾದ್ ಅವರಿಗೆ ಶ್ರೀನಿವಾಸ್ ಪ್ರಸಾದ್ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಅಲುಗಾಡಿಸುವಂಥ ಯಾವುದೇ ಬೆಳವಣಿಗೆ ಇಲ್ಲಿ ತನಕ ಕಂಡು ಬಂದಿಲ್ಲ.