ಜಿಲ್ಲಾಸುದ್ದಿ : ಎಸ್ಎಲ್ ಭೈರಪ್ಪ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಮೈಸೂರು, ಜೂನ್ 16 : ಖ್ಯಾತ ಲೇಖಕ ಡಾ|| ಎಸ್.ಎಲ್. ಭೈರಪ್ಪ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರು ಜೂನ್ 17ರಂದು ಸಂಜೆ 4-30 ಗಂಟೆಗೆ ಮೈಸೂರಿನಲ್ಲಿರುವ ಅವರ ಮನೆಯಲ್ಲಿ ನೀಡಲಿದ್ದಾರೆ.
5ಜಿ ವೈಫೈ ಹಾಟ್ಸ್ಪಾಟ್ ಸೇವೆ : ಮೈಸೂರು-ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ ಅವರು ಜೂನ್ 17ರಂದು ಮಧ್ಯಾಹ್ನ 1 ಗಂಟೆಗೆ ಮೃಗಾಲಯದಲ್ಲಿ 5ಜಿ ವೈಫೈ ಹಾಟ್ಸ್ಪಾಟ್ ಸೇವೆಯನ್ನು ಉದ್ಘಾಟಿಸಲಿದ್ದಾರೆ.
ಚಿತ್ರದುರ್ಗ : ಮಳೆಗಾಲ ಶುರುವಾಗಿರುವಾಗ ಸ್ವಚ್ಛತೆ ಇಲ್ಲದಿದ್ದರೆ ರೋಗರುಜಿನಗಳು ಗ್ಯಾರಂಟಿ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಚಿತ್ರದುರ್ಗ ಜಿಲ್ಲಾಡಳಿತ ಜೂನ್ 17, ಶುಕ್ರವಾರದಿಂದ ಒಂದು ವಾರ 'ಸ್ವಚ್ಛತಾ ಅಭಿಯಾನ'ವನ್ನು ಹಮ್ಮಿಕೊಂಡಿದೆ.
ಜೂನ್ 17ರಂದು ಕೊಳಚೆ ಪ್ರದೇಶಗಳಲ್ಲಿ, ಜೂನ್ 18ರಂದು ಶಿಕ್ಷಣ ಸಂಸ್ಥೆಗಳು ಮತ್ತು ಹೋಟೆಲುಗಳು, ಜೂನ್ 19ರಂದು ಸರಕಾರಿ ಕಚೇರಿಗಳಲ್ಲಿ, ಜೂನ್ 20ರಂದು ಸಾರ್ವಜನಿಕ ಸ್ಥಳಗಳಲ್ಲಿ, ಜೂನ್ 21ರಂದು ಸರಕಾರಿ ಮತ್ತು ಖಾಸಲಿ ಆಸ್ಪತ್ರೆಗಳಲ್ಲಿ ಮತ್ತು ಜೂನ್ 22ರಂದು ಫ್ಯಾಕ್ಟರಿಗಳಲ್ಲಿ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. [ಚಿತ್ರದುರ್ಗ : ಪಿಎಸ್ಐ ಗಿರೀಶ್ ಪತ್ನಿ ಕೊಲೆ ಪ್ರಕರಣಕ್ಕೆ ತಿರುವು]
ರೈತರ ಜಾಗೃತಿಗಾಗಿ ಕೃಷಿ ಅಭಿಯಾನ
ಕೊಪ್ಪಳ : ರೈತರ ಅಭ್ಯುದಯಕ್ಕಾಗಿ ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನೆ ಇಲಾಖೆಗಳಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ಕೃಷಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 20 ದಿನಗಳ ಕಾಲ ಕೃಷಿ ಅಭಿಯಾನವನ್ನು ಹಮ್ಮಿಕೊಂಡಿದೆ.
'ಇಲಾಖೆಗಳ ನಡಿಗೆ- ರೈತರ ಮನೆ ಬಾಗಿಲಿಗೆ' ಎನ್ನುವ ಘೋಷಣೆಯೊಂದಿಗೆ ಕೃಷಿ ಅಭಿಯಾನಕ್ಕಾಗಿ ವಾರ್ತಾ ಇಲಾಖೆಯು ವಿಶೇಷ ವಾಹನವನ್ನು ಸಿದ್ಧಪಡಿಸಿದ್ದು, ವಾಹನವು 20 ದಿನಗಳ ಕಾಲ ಜಿಲ್ಲೆಯ ಎಲ್ಲ ತಾಲೂಕಿನ ಆಯ್ದ ಗ್ರಾಮಗಳಿಗೆ ಭೇಟಿ ನೀಡಿ, ಕೃಷಿಗೆ ಸಂಬಂಧಿಸಿದಂತೆ ರೈತರಲ್ಲಿ ಜಾಗೃತಿ ಮೂಡಿಸಲಿದೆ.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯಲ್ಲಿರುವ ಹಲವು ಯೋಜನೆಗಳ ಮಾಹಿತಿಯನ್ನು ಒಳಗೊಂಡ ಕಿರುಹೊತ್ತಿಗೆ, ಕರಪತ್ರ, ಯೋಜನೆಗಳ ಬಗ್ಗೆ ಮಡಿಕೆ ಪತ್ರವನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು. ಅಲ್ಲದೆ ಆಯ್ದ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ರೈತರಿಗೆ ಮಾಹಿತಿ ಒದಗಿಸಲಾಗುವುದು. [ಎವರೆಸ್ಟ್ ಏರಿದ ಅನುಭವ ಬಿಚ್ಚಿಟ್ಟ ಕೊಪ್ಪಳದ ಪ್ರಭಾಕರನ್]
ರೇನ್ಕೋಟ್, ಹೆಲ್ಮೆಟ್ ತೊಟ್ಟ ಬಸ್ ಚಾಲಕ
ಮಂಗಳೂರು : ಜೋಕಟ್ಟೆ ಸ್ಟೇಟ್ ಬ್ಯಾಂಕ್ ಮಾರ್ಗವಾಗಿ ಸಂಚರಿಸುವ 2c ನಂಬರ್ ಸಿಟಿ ಬಸ್ ನ ಮುಂಭಾಗದ ಒಂದು ಗಾಜು ಒಡೆದಿದ್ದು, ಮಳೆ ಜೋರಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚಾಲಕ ರೈನ್ ಕೋಟ್ ಹಾಗೂ ಹೆಲ್ಮೆಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ದೃಶ್ಯ ಗುರುವಾರ ಮುಂಜಾನೆ ಕಂಡುಬಂದಿತು. ಬಸ್ ಪ್ರಯಾಣಿಕರಿಗೆ ಚಾಲಕನ ಹೊಸ ವೇಷ ಕುತೂಹಲಕ್ಕೆ ಕಾರಣವಾದರೆ, ಕೆಲವರು ಚಾಲಕನ ಭಾವಚಿತ್ರ ಸೆರೆಹಿಡಿದು ವಾಟ್ಸ್ ಆಪ್ ನಲ್ಲಿ ರವಾನೆ ಮಾಡುತ್ತಿದ್ದರು. [ಮಂಗಳೂರಿಗೆ ಬರುತ್ತಿದೆ ಚೆನ್ನೈ, ಆಂಧ್ರದ ಮೀನು!]
ಪ್ರಯಾಣ ದರದಲ್ಲಿ ಭಾರೀ ಕಡಿತ
ಬೆಳಗಾವಿ : ಬೆಳಗಾವಿ- ಹೈದರಾಬಾದ, ಬೊರಿವಲ್ಲಿ, ನಾಸಿಕ್, ಔರಂಗಾಬಾದ್, ತಿರುಪತಿ, ಚೆನೈ, ಮೈಸೂರು, ಧರ್ಮಸ್ಥಳ ಮಾರ್ಗವಾಗಿ ವಾರದ ಎಲ್ಲಾ ದಿನ ಪ್ರಸ್ತುತ ಪ್ರಯಾಣ ದರವನ್ನು ಶೇ.10ರಷ್ಟು ಕಡಿಮೆ, ಬೆಳಗಾವಿಯಿಂದ ಬೆಂಗಳೂರು ಮಾರ್ಗವಾಗಿ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಶೇ.10ರಷ್ಟು ಕಡಿಮೆ ಹಾಗೂ ಸೋಮವಾರದಿಂದ ಗುರುವಾರ ಪ್ರಸ್ತುತ ಪ್ರಯಾಣ ದರವನ್ನು ಶೇ.20ರಷ್ಟು ಕಡಿಮೆ ಮಾಡಲಾಗಿದೆ.