ಯತಿಗಳ ವೃಂದಾವನದಲ್ಲಿ ಉತ್ತರಾದಿ, ರಾಯರ ಮಠದ ವೈಷಮ್ಯ!
ಇದು ನಾಡಿನ ಎರಡು ಪ್ರಮುಖ ದ್ವೈತ ಸಂಪ್ರದಾಯ ಪೀಠಗಳಾದ ಉತ್ತರಾದಿ ಮತ್ತು ಗುರುರಾಯರ ಮಠದ ಅಸಂಖ್ಯಾತ ಭಕ್ತರ ನೆಮ್ಮದಿಗೆ ಭಂಗ ತರುವಂತಹ ಘಟನೆ. ನವವೃಂದಾವನ ಗಡ್ಡಿಯಲ್ಲಿನ ಪೂಜೆ ಮತ್ತು ಜಾಗಕ್ಕೆ ಸಂಬಂಧಪಟ್ಟ ವಿವಾದ ಎರಡು ಮಠದ ನಡುವಿನ ಸಂಬಂಧಕ್ಕೆ ಮತ್ತಷ್ಟು ಹುಳಿ ಹಿಂಡಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತುಂಗಭದ್ರ ನದಿ ತಟದಲ್ಲಿರುವ ಪವಿತ್ರ ಕ್ಷೇತ್ರ ನವವೃಂದಾವನ ಗಡ್ಡಿ. ಇಲ್ಲಿ ಗುರುರಾಘವೇಂದ್ರರ ಗುರುಗಳಾದ ಸುದೀಂಧ್ರ ತೀರ್ಥರು, ವ್ಯಾಸರಾಜರು ಸೇರಿದಂತೆ ಒಂಬತ್ತು ಯತಿವರ್ಯರ ವೃಂದಾವನವಿದೆ.
ಇದು ಉತ್ತರಾದಿ, ರಾಯರ ಅಥವಾ ವ್ಯಾಸರಾಜ ಮಠಕ್ಕೆ ಸೇರಿದ್ದೋ ಎನ್ನುವ ವಿವಾದಕ್ಕೆ ದಶಕಗಳ ಇತಿಹಾಸವಿದೆ. ಮೂರು ಮಠದ ಪೈಕಿ ವ್ಯಾಸರಾಜ ಮಠ ಹೊರತು ಪಡಿಸಿ ಈ ಜಾಗ ಮತ್ತು ಪೂಜೆಯ ಹಕ್ಕು ತಮ್ಮದೆಂದು ಎರಡೂ ಮಠಗಳು ಕೋರ್ಟ್ ಮೆಟ್ಟಲೂ ಏರಿದ್ದಾಗಿತ್ತು.
ಜಾಗಕ್ಕೆ ಸಂಬಂಧಿಸಿದಂತೆ ಇರುವ ಕಲಹ ಎರಡು ಮಠದ ಭಕ್ತರ ನಡುವೆ ವೈಷಮ್ಯಕ್ಕೂ ಕಾರಣವಾಗಿತ್ತು, ಕೆಲವೊಂದು ಹಂತದಲ್ಲಿ ಉತ್ತರಾದಿ ಮತ್ತು ರಾಯರ ಮಠದ ಭಕ್ತರ ಮತ್ತು ಸಿಬ್ಬಂದಿಗಳ ನಡುವೆ ಮಾರಾಮಾರಿಯ ಹಂತಕ್ಕೂ ಹೋಗಿತ್ತು.
ಈ ಜಾಗ ಯಾವ ಮಠಕ್ಕೆ ಸೇರಿದ್ದು ಎನ್ನುವ ವಿವಾದ 23 ವರ್ಷದ ಹಿಂದೆಯೇ ಕೋರ್ಟ್ ಮೆಟ್ಟಲೇರಿತ್ತು. ಈ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಇದೇ ಏಪ್ರಿಲ್ 22ರಂದು ತನ್ನ ತೀರ್ಪು ಪ್ರಕಟಿಸಿದೆ.
ಕೋರ್ಟ್ ತೀರ್ಪು ಏನು, ಆದರೂ ಮುಗಿಯದ ಮನಸ್ತಾಪ. ಮುಂದೆ ಓದಿ..
ಉತ್ತರಾದಿ ಮಠ
ದಶಕಗಳ ಇತಿಹಾಸವಿರುವ ಈ ವ್ಯಾಜ್ಯಕ್ಕೆ ಧಾರವಾಡ ಪೀಠ ಒಂದು ವಾರದ ಕೆಳಗೆ ತೀರ್ಪನ್ನು ನೀಡಿತ್ತು. ಹೈಕೋರ್ಟ್ ಈ ಜಾಗ ಉತ್ತರಾದಿ ಮಠಕ್ಕೆ ಸೇರಿದ್ದು ಎನ್ನುವ ಆದೇಶ ಹೊರಡಿಸಿತ್ತು. ಆದರೂ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಮಠಗಳ ನಡುವೆ ವಿವಾದ ಮತ್ತೆಷ್ಟು ಭುಗಿಲೆದ್ದಿದೆ.
ನವವೃಂದಾವನ ಗಡ್ಡಿ
ಸುಮಾರು 23 ಎಕರೆ ಜಮೀನಲ್ಲಿರುವ ಈ ಪವಿತ್ರ ವೃಂದಾವನದ ಸ್ಥಳ ಮತ್ತು ಸ್ಥಳಕ್ಕೆ ಸಂಬಂಧ ಪಟ್ಟ ಕಂದಾಯ ದಾಖಲೆಗಳು ಉತ್ತರಾದಿ ಮಠದ ಹೆಸರಿನಲ್ಲಿದೆ. ಹಾಗಾಗಿ ಈ ಜಾಗ ಉತ್ತರಾದಿ ಮಠಕ್ಕೆ ಸೇರಿದ್ದು, ರಾಯರ ಮಠದವರು ಇದಕ್ಕೆ ಅಡ್ಡಿ ಮಾಡಬಾರದು ಎನ್ನುವ ತೀರ್ಪನ್ನು ಧಾರವಾಡ ಹೈಕೋರ್ಟ್ ನೀಡಿತ್ತು. ಆದರೆ ಪೂಜೆಗೆ ಸಂಬಂಧಿಸಿದಂತೆ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ ಎನ್ನುವುದು ರಾಯರ ಮಠದ ವಾದ.
ರಾಯರ ಮಠದವರು ಹೇಳುವುದೇನು?
ಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಜಾಗ ಉತ್ತರಾದಿ ಮಠಕ್ಕೇ ಇರಲಿ, ನಾವು ಪೂಜೆಗೆ ಮಾತ್ರ ಆ ಜಾಗಕ್ಕೆ ಹೋಗುತ್ತೇವೆ. ರಾಯರ ಗುರುಗಳು, ವ್ಯಾಸರಾಜರೂ ಸೇರಿದಂತೆ ಯತಿವರ್ಯರ ವೃಂದಾವನ ಇರುವ ಸ್ಥಳ. ನಾವು ಅಲ್ಲಿಗೆ ಪೂಜೆಗೆ ಮಾತ್ರ ಹೋಗುತ್ತೇವೆ. ಇದಕ್ಕೆ ಯಾರೂ ಅಡ್ಡಿ ಪಡಿಸುವಂತಿಲ್ಲ ಎನ್ನುವುದು ಮಂತ್ರಾಲಯದ ರಾಘವೇಂದ್ರ ಮಠದ ನಿಲುವು.
ಉತ್ತರಾದಿ ಮಠ
ಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದ ಮೇಲೂ ರಾಯರ ಮಠದವರು ಸ್ಥಳಕ್ಕೆ ಆಗಮಿಸುವುದಕ್ಕೆ ನಮ್ಮ ವಿರೋಧವಿದೆ. ಇಲ್ಲಿನ ಪೂಜಾ ಕೈಂಕರ್ಯಗಳಿಗೆ ರಾಯರ ಮಠದವರು ಅಡ್ಡಿ ಪಡಿಸಬಾರದು ಎನ್ನುವುದು ಉತ್ತರಾದಿ ಮಠದ ವಾದ.
ಭಕ್ತರು ಕಂಗಾಲು
ಮಂತ್ರಾಲಯ ಮಠದ ಧರ್ಮಾಧಿಕಾರಿಗಳು ಸೇರಿದಂತೆ ರಾಯರ ಭಕ್ತರು ನವವೃಂದಾವನ ಗಡ್ಡಿಗೆ ಕೆಲವು ದಿನಗಳ ಹಿಂದೆ ಪೂಜೆ ಸಲ್ಲಿಸಲು ಆಗಮಿಸಿದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಉತ್ತರಾದಿ ಮಠದವರ ವಿರೋಧದ ನಡುವೆಯೂ ರಾಯರ ಮಠದವರು ವೃಂದಾವನಕ್ಕೆ ಪೂಜೆ ಸಲ್ಲಿಸಿದ್ದಾರೆ.
ಕೊಪ್ಪಳ ಪೊಲೀಸ್ ಮುಖ್ಯಸ್ಥರ ಬಳಿ ಹೋದ ಭಕ್ತರು
ರಾಯರ ಮಠದವರು ವೃಂದಾವನಕ್ಕೆ ಪೂಜೆ ಸಲ್ಲಿಸಿದ ನಂತರ, ಉತ್ತರಾದಿ ಮಠದ ಭಕ್ತರು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ. ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆಂದು ಕಮಿಷನರ್ ಭರವಸೆ ನೀಡಿದ್ದರೂ ಪವಿತ್ರ ನವವೃಂದಾವನ ಗಡ್ಡಿ ಎರಡು ಮಠಗಳ ನಡುವಿನ ಕಿತ್ತಾಟಕ್ಕೆ ವೇದಿಕೆಯಾಗಿದ್ದು ಒಪ್ಪುವಂತಹ ವಿಚಾರವಲ್ಲ.