ಕಳ್ಳರ ಪಾಲಾದ ರಾಷ್ಟ್ರಕವಿ ಕುವೆಂಪು ಅವರ 'ಜ್ಞಾನಪೀಠ'
ಕುಪ್ಪಳ್ಳಿ, ನ.24: ರಾಷ್ಟ್ರಕವಿ ಕುವೆಂಪು(ಕೆ.ವಿ ಪುಟ್ಟಪ್ಪ) ಅವರ ಬಾಲ್ಯದ ಮನೆ ಹಾಗೂ ಮ್ಯೂಸಿಯಂ ಆಗಿರುವ ಕುಪ್ಪಳ್ಳಿಯ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನವಾಗಿದೆ. ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಪ್ರಮುಖ ಪ್ರಶಸ್ತಿಗಳನ್ನು ಕಾಣೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ನಿವಾಸ ಕವಿಶೈಲದಲ್ಲಿ ಕಳ್ಳತನವಾಗಿದೆ. ಸೋಮವಾರ ರಾತ್ರಿ ದುಷ್ಕರ್ಮಿಗಳು ಮನೆಯ ಸುತ್ತಾ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.
ನಂತರ ಮಹಡಿಯಲ್ಲಿ ಪ್ರದರ್ಶನಕ್ಕಿಟ್ಟಿರುವ ಜ್ಞಾನಪೀಠ, ಪದ್ಮಭೂಷಣ ಪ್ರಶಸ್ತಿಗಳನ್ನು ಕದ್ದೊಯ್ದಿದ್ದಾರೆ. ಇನ್ನೂ ಕೆಲವು ಅಮೂಲ್ಯ ವಸ್ತುಗಳು ಕಾಣೆಯಾಗಿವೆ. ಈ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ತೀರ್ಥಹಳ್ಳಿ ಪೊಲೀಸರು ಹೇಳಿದ್ದಾರೆ.
ಕವಿಶೈಲದಲ್ಲಿ ಸಿಬ್ಬಂದಿಗಳು ಕಡಿಮೆ ಇದ್ದ ಸಮಯವನ್ನು ನೋಡಿಕೊಂಡು ಈ ಕೃತ್ಯ ಎಸಗಲಾಗಿದೆ. ಅಲ್ಲದೆ, ಮನೆಯಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾ ಇದೆ. ಎಷ್ಟು ಪ್ರಮಾಣದ ಭದ್ರತೆ ಇದೆ ಎಂಬ ವಿಷಯವನ್ನು ಚೆನ್ನಾಗಿ ಅರಿತವರೇ ಈ ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.