ಕುಂದಾಪುರದ ಚಾಲಕನ ಮೇಲೆ ರಾಮೇಶ್ವರಂನಲ್ಲಿ ಹಲ್ಲೆ
ಮಂಗಳೂರು, ಸೆಪ್ಟೆಂಬರ್ 13: ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ಕಾರಣ ಮಂಗಳೂರಿನಿಂದ ಬೆಂಗಳೂರಿಗೆ ತೆರಳಬೇಕಿದ್ದ ಬಹುತೇಕ ಬಸ್ಗಳು ಸೋಮವಾರ ರಾತ್ರಿ ಸಂಚಾರ ಮೊಟಕುಗೊಳಿಸಿವೆ.
ಮಂಗಳೂರು ಹಾಗೂ ಉಡುಪಿ ಕಡೆಯಿಂದ 300ಕ್ಕೂ ಹೆಚ್ಚು ಖಾಸಗಿ ಹಾಗೂ ಸರಕಾರಿ ಬಸ್ಗಳು ಸಂಚರಿಸಬೇಕಿತ್ತು. ಅವುಗಳಲ್ಲಿ ಬೆರಳೆಣಿಕೆಯ ಬಸ್ಗಳು ಹೊರತುಪಡಿಸಿ ಉಳಿದೆಲ್ಲವೂ ಸಂಚಾರ ರದ್ದು ಪಡಿಸಿವೆ.[ಮುಖ್ಯಮಂತ್ರಿ ಸಿದ್ದರಾಮಯ್ಯ-ಜಯಲಲಿತಾ ಬರೆದ ಪತ್ರಗಳಲ್ಲಿ ಏನಿದೆ?]
ತುರ್ತು ಪ್ರಯಾಣಿಸುವವರಿಗಾಗಿ ಒಂದೇ ಬಸ್ ನಲ್ಲಿ ಕಳಿಸಿಕೊಡುವ ವ್ಯವಸ್ಥೆಯನ್ನು ಮಾಡಿದ್ದರಿಂದ ಶೇ 15ರಷ್ಟು ಬಸ್ಗಳು ಮಾತ್ರ ಸೋಮವಾರ ರಾತ್ರಿ ಬೆಂಗಳೂರಿಗೆ ತೆರಳಿವೆ ಎಂದು ತಿಳಿದು ಬಂದಿದೆ.
ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಬಹುತೇಕ ಬಸ್ಗಳ ಸಂಚಾರ ರದ್ದುಪಡಿಸಿವೆ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಖಾಸಗಿ ಬಸ್ ಕಂಪೆನಿಗಳು ಪ್ರಯಾಣಿಕರ ಟಿಕೆಟ್ ಚಾರ್ಜ್ ಮರಳಿಸಿವೆ. ಇನ್ನೂ ಕೆಲವು ಬದಲಿ ದಿನಾಂಕಗಳಲ್ಲಿ ಸಂಚರಿಸುವಂತೆ, ಮರಳಿ ಬುಕ್ ಮಾಡಲು ಪ್ರಯಾಣಿಕರಿಗೆ ಸೂಚಿಸಿವೆ.[ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಲಾಟೆ, ಪೊಲೀಸರ ಹೇಳಿಕೆ ಮಾತ್ರ ನಂಬಿ!]
ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಇಡೀ ಕನ್ನಡಿಗರು ಒಕ್ಕೊರಲಿನಿಂದ ಬೆಂಬಲಿಸುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯವರು ಕೂಡ ನಿಮ್ಮ ಜತೆಗಿದ್ದೇವೆ. ಆದರೆ ಚಳವಳಿ ಅಹಿಂಸಾತ್ಮಕವಾಗಿರಲಿ ಎಂದು ದರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಕುಂದಾಪುರದ ಚಾಲಕನಿಗೆ ತಮಿಳುನಾಡಿನಲ್ಲಿ ಹಲ್ಲೆ: ಕುಂದಾಪುರದ ಹಾಲಾಡಿಯ ಟೂರಿಸ್ಟ್ ವಾಹನವೊಂದನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ಜಖಂಗೊಳಿಸಿದ್ದು, ಚಾಲಕ ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕುಂದಾಪುರ ತಾಲೂಕಿನ ಸಿದ್ದಾಪುರದ ಅಮಾಸೆಬೈಲ್ ನ ಮಂಜುನಾಥ್ ಟೂರಿಸ್ಟ್ ನ ಟೆಂಪೋ ಟ್ರಾವೆಲರ್ ಚಾಲಕ ರಟ್ಟಾಡಿಯ ಮಂಜುನಾಥ್ ಕುಲಾಲ್ ಅವರ ಮೇಲೆ ತಮಿಳುನಾಡಿನ ರಾಮೇಶ್ವರಂ ಬಳಿ ಸೋಮವಾರ ಹಲ್ಲೆ ನಡೆಸಲಾಗಿದೆ.[ಉಮೇಶ್ ಕುಟುಂಬಕ್ಕೆ ಪರಿಹಾರ 10 ಲಕ್ಷ ರು.ಗೆ ಏರಿಕೆ]
ರಾಮೇಶ್ವರಂ ದೇವಸ್ಥಾನ ಸಹಿತ ತಮಿಳುನಾಡಿನ ಹಲವು ದೇವಳಗಳಿಗೆ ಹರಕೆ ತೀರಿಸಲು 12 ಮಂದಿ ಪ್ರಯಾಣಿಕರನ್ನು ಅಮಾಸೆಬೈಲ್ನಿಂದ ಮಂಜುನಾಥ್ ಕರೆದೊಯ್ದಿದ್ದ ವೇಳೆ ಘಟನೆ ನಡೆದಿದೆ. ಸೆ. 10 ರಂದು ಸಿದ್ದಾಪುರದಿಂದ ಬಾಡಿಗೆಗೆ ಹೊರಟಿದ್ದ ವಾಹನವು ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ವೇಳೆ ಚಾಲಕನನ್ನು ಥಳಿಸಲಾಗಿದೆ.
ಪ್ರವಾಸಿ ತಂಡ ಮಂಗಳವಾರ ಸಿದ್ದಾಪುರಕ್ಕೆ ವಾಪಸ್ ಆಗಬೇಕಿತ್ತು. ವಾಹನದ ಮಾಲೀಕರೂ ಆಗಿರುವ ಚಾಲಕ ಹಾಗೂ ಪ್ರಯಾಣಿಕರಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರಕ್ಷಣೆ ನೀಡಲಾಗಿದೆ. ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ ಅಸೋಸಿಯೇಷನ್ ನ ಕಾರ್ಯದರ್ಶಿ ಸಿದ್ದಾಪುರದ ಕೃಷ್ಣ ಪೂಜಾರಿಗೆ ಕರೆ ಮಾಡಿದ ಚಾಲಕ ಘಟನೆಯ ವಿವರಗಳನ್ನು ತಿಳಿಸಿದ್ದಾರೆ. ಆ ನಂತರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ, ರಕ್ಷಣೆ ಒದಗಿಸುವಂತೆ ಕೋರಲಾಗಿದೆ.