ಒಂದಂಕಿ ಲಾಟರಿ ಹಗರಣ : ಕುಮಾರಸ್ವಾಮಿ ಸಿಡಿಸಿದ್ರು ಬಾಂಬ್
ಬೆಂಗಳೂರು, ಮೇ 23 : 'ಅಕ್ರಮ ಲಾಟರಿ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಹೆಸರು ಕೇಳಿಬರುತ್ತಿದೆ. ಸರ್ಕಾರ ಇಂತಹ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಲಾಟರಿ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಶನಿವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು, 'ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಲಾಟರಿ ಕಿಂಗ್ಪಿನ್ ಪಾರಿ ರಾಜನ್ ಅವರನ್ನು ಪರಿಚಯಿಸಿದ್ದು' ಎಂಬ ಬಾಂಬ್ ಸಿಡಿಸಿದರು. [ರಾಜ್ಯದ ಜನರಿಗೆ 10 ರೂ.ಲಾಟರಿ ಭಾಗ್ಯ?]
'ಕರ್ನಾಟಕದಲ್ಲಿ ಒಂದಂಕಿ ಲಾಟರಿ ದಂಧೆ ಹೇಗೆ ನಡೆಯುತ್ತದೆ? ಎಂಬುದನ್ನು ವಿಧಾನಸಭೆ ಕಲಾಪದಲ್ಲಿಯೇ ಹೇಳಿದ್ದೆ. ಆಗ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಇಷ್ಟು ದೊಡ್ಡ ಹಗರಣ ನಡೆದರೂ ಗೃಹಸಚಿವರು, ಮುಖ್ಯಮಂತ್ರಿಗಳು ಏಕೆ ಅಧಿಕಾರಿಗಳನ್ನು ಅಮಾನತು ಮಾಡಿಲ್ಲ?, ನೀವು ಪಾರಿ ರಾಜನ್ ಎನ್ನುವ ದಲಿತನಿಗೆ ರಕ್ಷಣೆ ನೀಡುತ್ತಿದ್ದೀರಾ? ಎಂದು ಪ್ರಶ್ನಿಸಿದರು. [ಟ್ವಿಟ್ಟರಿಗೆ ಬಂದ್ರು ಕುಮಾರಸ್ವಾಮಿ]
'ಪಾರಿ ರಾಜನ್ ಮತ್ತು ನನ್ನ ನಡುವೆ ಒಡನಾಟ ವಿತ್ತು. ಆದರೆ, ಅವರ ಪರವಾಗಿ ಕೆಲಸ ಮಾಡಿ ಎಂದು ನಾನು ಯಾವ ಅಧಿಕಾರಿಗೂ ಸೂಚನೆ ಕೊಟ್ಟಿಲ್ಲ. ನನ್ನ ಪ್ರಾಮಾಣಿಕ ಕೆಲಸ, ನಿಷ್ಟುರ ಹೆಜ್ಜೆಗಳು ನನ್ನನ್ನು ಈ ರೀತಿ ಆರೋಪಕ್ಕೆ ಸಿಲುಕಿಸಿರಬಹುದು. ಈ ಬಗ್ಗೆ ಯಾವುದೇ ತನಿಖೆ ಎದುರಿಸಲು ನಾನು ಸಿದ್ಧ' ಎಂದು ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾರು, ಏನು ಹೇಳಿದರು ನೋಡೋಣ ಬನ್ನಿ...
ಸಿಬಿಐ ತನಿಖೆ ವಹಿಸಲು ಎಚ್ಡಿಕೆ ಆಗ್ರಹ
ಅಕ್ರಮ ಲಾಟರಿ ದಂಧೆಯಲ್ಲಿ ಪೊಲೀಸ್ ಅಧಿಕಾರಿಗಳ ಹೆಸರು ಕೇಳಿಬರುತ್ತಿದೆ. ಸರ್ಕಾರ ಇಂತಹ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಲಾಟರಿ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಅಮಾತು ಮಾಡಲು ಹಿಂಜರಿಕೆ ಏಕೆ?
ಲಾಟರಿ ದಂಧೆಯಲ್ಲಿ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡದೇ ಅಂಥವರನ್ನು ಹೆಚ್ಚುವರಿ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಅಮಾನತು ಮಾಡಲು ಹಿಂಜರಿಕೆ ಏಕೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಹಲವು ಪೊಲೀಸ್ ಅಧಿಕಾರಿಗಳು ಭಾಗಿ
'ನಿವೃತ್ತ ಡಿಜಿಪಿ ಶಂಕರ್ ಬಿದರಿ ಅವರೇ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಲಾಟರಿ ಕಿಂಗ್ಪಿನ್ ಪಾರಿ ರಾಜನ್ ಅವರನ್ನು ಪರಿಚಯಿಸಿದ್ದು, ಹಲವು ಪೊಲೀಸ್ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಆದ್ದರಿಂದ ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಎಚ್ಡಿಕೆ ಒತ್ತಾಯಿಸಿದರು.
ದಕ್ಷಿಣೆ ಕೊಡಲು ದೆಹಲಿಗೆ ಹೋಗುತ್ತಿದ್ದಾರೆ
'ರಾಜ್ಯದ ಜನರು ಸಮಸ್ಯೆಗಳಿಗೆ ಸಿಕ್ಕಿ ಒದ್ದಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಮತ್ತು ಸಚಿವರು ತಮಗೆ ರಕ್ಷಣೆ ಕೊಡುತ್ತಿರುವವರಿಗೆ ದಕ್ಷಿಣೆ ಕೊಡಲು ದೆಹಲಿಗೆ ಹೋಗಿದ್ದಾರೆ' ಎಂದು ಎಚ್ಡಿಕೆ ಆರೋಪಿಸಿದರು. ಲಾಟರಿ ಒಂದೇ ಅಲ್ಲ, ಐಪಿಎಲ್ ದಂಧೆಯೂ ನಡೆಯುತ್ತಿದೆ. ಒಂದೊಂದು ಮ್ಯಾಚ್ಗೆ 3 ಸಾವಿರ ಕೋಟಿ ದಂಧೆ ನಡೆದಿದೆ ಎಂದು ಆರೋಪ ಮಾಡಿದರು.
ಯಾವುದೇ ತನಿಖೆ ಸಿದ್ಧ ಅಂದ್ರು ಅಲೋಕ್ ಕುಮಾರ್
'ಲಾಟರಿ ಬುಕ್ಕಿ ಪಾರಿ ರಾಜನ್ ಮತ್ತು ನನ್ನ ನಡುವೆ ಒಡನಾಟ ಇತ್ತು. ನನ್ನ ಪ್ರಾಮಾಣಿಕ ಕೆಲಸ, ನಿಷ್ಟುರ ಹೆಜ್ಜೆಗಳು ನನ್ನನ್ನು ಈ ರೀತಿ ಆರೋಪಕ್ಕೆ ಸಿಲುಕಿಸಿರಬಹುದು. ದಕ್ಷಿಣ ವಿಭಾಗ ಡಿಸಿಪಿಯಾಗಿದ್ದ ವೇಳೆ, ಅಕ್ರಮ ಲಾಟರಿ ವ್ಯವಹಾರ ಹತ್ತಿಕ್ಕಿ, ಪ್ರಕರಣ ದಾಖಲಿಸಿದ್ದೇನೆ. ಈ ಆರೋಪದ ಕುರಿತು ಯಾವುದೇ ತನಿಖೆಗೂ ನಾನು ಸಿದ್ಧ ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
'ನಾನು ಹೇಗೆ ಪರಿಚಯ ಮಾಡಿ ಕೊಡಲಿ?'
'ಶಂಕರ್ ಬಿದರಿ ಅವರೇ ಅಲೋಕ್ ಕುಮಾರ್ ಅವರಿಗೆ ಲಾಟರಿ ಕಿಂಗ್ಪಿನ್ ಪಾರಿ ರಾಜನ್ ಅವರನ್ನು ಪರಿಚಯಿಸಿದ್ದು' ಎಂಬ ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ನಾಯಕ ಶಂಕರ ಬಿದರಿ ತಿರುಗೇಟು ಕೊಟ್ಟಿದ್ದಾರೆ. 'ನನಗೆ ರಾಜನ್ ಪರಿಚಯವಿಲ್ಲ, ಅವರನ್ನು ನಾನು ಹೇಗೆ ಮತ್ತೊಬ್ಬರಿಗೆ ಪರಿಚಯ ಮಾಡಿಕೊಡಲಿ, ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಇಂತಹ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೆ ಸತ್ಯ ತಿಳಿಯಲಿದೆ' ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.