‘ಡಿಜಿಟಲ್ ಪಥ’ದಲ್ಲಿ 2018ರ ಚುನಾವಣಾ ರೇಸಿಗಿಳಿದ ಎಚ್ಡಿಕೆ
2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ನಗರದಲ್ಲಿ 'ಕುಮಾರ ಪಥ 2018' ಎನ್ನುವ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಚಿಂತನ ಮಂಥನ ಕಾರ್ಯಕ್ರಮವನ್ನು ಕುಮಾರಸ್ವಾಮಿ ಹಮ್ಮಿಕೊಂಡಿದ್ದರು.
ಬೆಂಗಳೂರು, ಏಪ್ರಿಲ್ 17: 2018ರ ರಾಜ್ಯ ವಿಧಾನಸಭಾ ಚುನಾವಣೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಇದರ ಭಾಗವಾಗಿ ಇತ್ತೀಚೆಗೆ ನಗರದಲ್ಲಿ 'ಕುಮಾರ ಪಥ 2018' ಎನ್ನುವ ಸಾಮಾಜಿಕ ಜಾಲತಾಣ ಕಾರ್ಯಕರ್ತರ ಚಿಂತನ ಮಂಥನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
2018ರ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಈಗಾಗಲೇ ಒಂದು ಸುತ್ತಿನ ರಾಜ್ಯ ಪ್ರವಾಸವನ್ನೂ ಕುಮಾರಸ್ವಾಮಿ ಮುಗಿಸಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನೂತನ ಕಚೇರಿ ಉದ್ಘಾಟನೆ ನೆಪದಲ್ಲಿ ಭರ್ಜರಿ ಸಮಾವೇಶವನ್ನೂ ಜೆಡಿಎಸ್ ನಡೆಸಿತ್ತು.['ಕಾನೂನಿನ ಹೆಸರಿನಲ್ಲಿ ಕರಾವಳಿಯಲ್ಲಿ ದೌರ್ಜನ್ಯ' - ಕುಮಾರಸ್ವಾಮಿ]
ಈ ಹಿಂದೆ ಸಾಮಾಜಿಕ ಜಾಲಾತಾಣಗಳಿಗೆ ಕುಮಾರಸ್ವಾಮಿ ದುಮುಕಿದ್ದರು. ಇದರ ಮುಂದುವರಿದ ಭಾಗವಾಗಿ ಈ ಸಮಾವೇಶ ಹಮ್ಮಿಕೊಂಡು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಎಲ್ಲರ ಹುಬ್ಬೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿಯವರು ಕಾರ್ಯಕರ್ತರ ಹಲವು ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡಿದರು.
ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ರಾಜ್ಯದ ಸಮಸ್ಯೆಗಳ ಪರಿಹಾರವೇ ಮುಖ್ಯವಾದುರಿಂದ ವ್ಯಕ್ತಿದೂಷಣೆಗಿಂತ ಜನರ ಕಷ್ಟಕ್ಕೆ ಸ್ಪಂದಿಸಲು ಮೊದಲ ಆದ್ಯತೆ ನೀಡೋಣ ಎಂದು ಹೇಳಿದರು.[ಗಾಳಿಸುದ್ದಿ : 2018ರ ಚುನಾವಣೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ!]
ಸ್ಟಾರ್ಟ್ ಅಪ್ ಗಳಿಗೆ ಶೇಕಡಾ 3 ಇನ್ಸೆಂಟಿವ್
ಕಾರ್ಯಕ್ರಮದಲ್ಲಿ ಗಿರೀಶ್ ಮೈಸೂರ್ ರವರು ಹೊಸದಾಗಿ ಪ್ರಾರಂಭವಾಗುವ ಕಂಪೆನಿಗಳಿಗೆ ಯೋಜನೆಗಳೇನಿರಬೇಕೆಂದು ಪ್ರಶ್ನಿಸಿದಾಗ, ಕುಮಾರಸ್ವಾಮಿಯವರು ಹೊಸ ಕಂಪೆನಿಗಳಿಗೆ ಸರ್ಕಾರವೇ ಎರಡು ಅಥವಾ ಮೂರು ಪರ್ಸೆಂಟ್ ನಷ್ಟು ಇನ್ಸೆಂಟಿವ್ಸ್ ಕೊಟ್ಟು ಅಭಿವೃದ್ಧಿಯ ಅನುದಾನ ನೀಡುವ ಕುರಿತು ಆಲೋಚನೆ ಇದೆ ಎಂದು ಹೇಳಿದರು.
ಬೆಳೆಗಳಿಗೆ ವೈಜ್ಞಾನಿಕ ಬೆಲೆ
ಯುವಕರಿಗೆ ಕೃಷಿ ಕ್ಷೇತ್ರದಲ್ಲಿ ಯಾವ ರೀತಿ ಮಾನ್ಯತೆ ಒದಗಿಸುವ ಯೋಜನೆಗಳನ್ನು ರೂಪಿಸಲಿದ್ದೀರಿ ಎಂದು ವಿದ್ಯಾ ಮೈಸೂರ್ ರವರು ಪ್ರಶ್ನಿಸಿದಾಗ, ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುವುದರೊಂದಿಗೆ ಹವಾಮಾನಕ್ಕೆ ತಕ್ಕುದಾದ ಬೆಳೆಗಳನ್ನು ಬೆಳೆಯುವುದರ ಕಡೆಗೆ ನವ ಯುವಕರ ಗಮನ ಸೆಳೆದು, ಟೆಕ್ನಿಕಲ್ ಹಾಗೂ ಫೈನಾನ್ಶಿಯಲ್ ಸಪೋರ್ಟ್ ನೀಡುವ ಯೋಜನೆಗಳನ್ನು ಸರ್ಕಾರ ಮುಂದಿನ ದಿನಗಳಲ್ಲಿ ರೂಪಿಸಲಿದೆ ಎಂದು ಕುಮಾರಸ್ವಾಮಿಯವರು ಉತ್ತರಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯೆಗೆ ಪರಿಹಾರ
ಮಂಗಳೂರಿನ ದೇವಿಪ್ರಸಾದ್ ನಾಯಕ್ ರವರು ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಸಿಕೊಳ್ಳಬಹುದೆಂದು ನಿಮ್ಮ ಅನಿಸಿಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳ ಮೂಲಕ ತ್ವರಿತ ಸಮಸ್ಯೆ ಪರಿಹಾರ, ಜತೆಗೆ ತಕ್ಷಣ ಸ್ಪಂದನೆ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಜನಪರ ಕಾಳಜಿ ವ್ಯಕ್ತಪಡಿಸಿದರು.
ಕರೆ ಒತ್ತುವರಿಗೆ ಪರಿಹಾರ
ಗೋವಾದ ಖುರೇಷ್ ರವರು ಕೆರೆ ಒತ್ತುವರಿ ಸಮಸ್ಯೆಗಳ ಬಗ್ಗೆ ಕುಮಾರಸ್ವಾಮಿಯವರ ಗಮನ ಸೆಳೆದರು. "ಸಾವಿರ ಕೆರೆಗಳ ನಗರದಲ್ಲಿ ಕೆರೆಗಳನ್ನು ಮುಚ್ಚಿ ಒತ್ತುವರಿಯ ಅಕ್ರಮಕ್ಕೆ ಮುಂದಾದವರನ್ನು, ಅಕ್ರಮ ಬಿಲ್ಡರ್ ಗಳನ್ನೂ ಕಾನೂನು ಕ್ರಮದ ಮೂಲಕ ತಡೆಯಲಾಗುವುದು. ಅಲ್ಲದೆ ಹೂಳು ತೆಗೆದು, ಇರುವ ಕೆರೆಗಳ ಕ್ಷಮತೆ ಹೆಚ್ಚಿಸುವ ಆಲೋಚನೆ ಇದೆ ಎಂದು ಕುಮಾರಸ್ವಾಮಿಯವರು ನುಡಿದರು.
ಪ್ರವಾಸೋದ್ಯಮಕ್ಕೆ ಉತ್ತೇಜನ
ನಾಗಮಂಗಲದ ಛಾಯಾಕುಮಾರ್ ರವರು ಪ್ರವಾಸೋದ್ಯಮ ಇಲಾಖೆಯಿಂದ ಹೆಚ್ಚಿನ ಆದಾಯ ತರಿಸುವುದರ ಬಗ್ಗೆ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದರು. ಪ್ರಕೃತಿ ಸಂಪತ್ತನ್ನು ಆರ್ಥಿಕ ಅಭಿವೃದ್ಧಿಯೊಂದಿಗೇ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕಾದ ಅವಶ್ಯಕತೆ ಇದೆ. ಪ್ರವಾಸಿ ತಾಣಗಳಲ್ಲಿ ವಿಶ್ರಾಂತಿ ಕೊಠಡಿಯಂತವುಗಳು ಕೂಡಾ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಸೃಷ್ಟಿಯ ಅವಕಾಶಗಳೂ ಪ್ರವಾಸೋದ್ಯಮದಲ್ಲಿ ಹೆಚ್ಚಿರುವುದರಿಂದ, ಸಮಗ್ರ ದೃಷ್ಟಿಯಿಂದ ಅಭಿವೃದ್ಧಿಗೊಳಿಸುವತ್ತ ನಮ್ಮ ಚಿಂತನೆಯಿದೆ ಎಂದು ಎಚ್ಡಿಕೆ ಹೇಳಿದರು.
ವಿದ್ಯಾರ್ಥಿ ಸಮುದಾಯಕ್ಕೆ ಉದ್ಯೋಗ
ರಾಮನಗರದ ಜಯಕುಮಾರ್ ಗೌಡರವರು ವಿದ್ಯಾರ್ಥಿ ಸಮುದಾಯಕ್ಕೆ ವಿದ್ಯೆಗೆ ತಕ್ಕುದಾದ ಉದ್ಯೋಗ ದೊರಕುವಂತೆ ಮಾಡುತ್ತೀರಾ ಎಂಬ ಪ್ರಶ್ನೆ ಕೇಳಿದರು. ಆಗ ಕುಮಾರಸ್ವಾಮಿ ಕನಿಷ್ಟ ಒಂದು ಕೋಟಿ ಉದ್ಯೋಗವನ್ನು ಯುವಕರಿಗೆ ಹಾಗೂ ಕನ್ನಡಿಗರಿಗೆ ಸೃಜಿಸುವ ಯೋಜನೆಗಳು ಈಗಾಗಲೇ ನಮ್ಮಿಂದ ರೂಪಿಸಲಾಗಿದೆ. ಅವಕಾಶ ಸಿಕ್ಕಿದಲ್ಲಿ ಖಂಡಿತ ಜಾರಿಗೆ ತರುತ್ತೇವೆ ಎಂದರು.
ಎಂಡೋ ಪೀಡಿತರಿಗೆ ಮೊದಲ ಆದ್ಯತೆ
ಉಡುಪಿಯ ರಾಕೇಶ್ ಶೆಟ್ಟಿಯವರು ಎಂಡೋಸಲ್ಫಾನ್ ಸಿಂಪಡಿಕೆಯಿಂದ ಹಲವರು ದಕ್ಷಿಣ ಕನ್ನಡದಲ್ಲಿ ಬಳಲುತ್ತಿದ್ದಾರೆ. ಅವರಿಗೆ ಏನು ನೆರವು ನೀಡುತ್ತೀರಿ ಎಂದು ಕೇಳಿದಾಗ, "ಸರ್ಕಾರದಿಂದ ಮೊದಲನೇ ಆದ್ಯತೆಯಾಗಿ ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರ ಕಾರ್ಯ ಕೈಗೊಳ್ಳಲಿದ್ದೇವೆ," ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ಹೇಳಿದರು.
ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ
ರಾಘವೇಂದ್ರ ಎನ್ನುವ ಕಾರ್ಯಕರ್ತರು ರಸ್ತೆ ನಿರ್ಮಾಣ ಕಾಮಗಾರಿಗಳು ಕುಂಠಿತವಾಗಿರುವ ಕುರಿತು ಪ್ರಶ್ನಿಸಿದರು. "ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಲ್ಲದೇ, ಎಲ್ಲಾ ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಲಾಗಿದೆ. ನಮ್ಮ ಸರ್ಕಾರ ಐವತ್ತು ವರ್ಷಗಳಿಗೂ ಹೆಚ್ಚಿನ ದೂರದೃಷ್ಟಿಯನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಿದೆ ಎಂದು ಎಚ್ಡಿಕೆ ಹೇಳಿದರು.
ವಿದೇಶಿ ಕರೆ
ಕುಮಾರಸ್ವಾಮಿಯವರ ಸಂವಾದ ಕಾರ್ಯಕ್ರಮಕ್ಕೆ ನ್ಯೂಜರ್ಸಿಯಿಂದ ಮಧುರ ಎನ್ನುವವರು ಕರೆ ಮಾಡಿದ್ದರು. ಬೆಂಗಳೂರಿನ ಹಲವು ಸಮಸ್ಯೆಗಳಿಗೆ ನಿಮ್ಮ ಉತ್ತರವೇನು ಎಂದು ಪ್ರಶ್ನಿಸಿದರು.
"ಹಣದ ಕೊರತೆಗಿಂತ ಹೆಚ್ಚಾಗಿ ಇಂದು ಅಧಿಕಾರಸ್ಥಾನದಲ್ಲಿರುವವರಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಬಿಜೆಪಿ ಕಾಂಗ್ರೆಸ್ ನ ಆಡಳಿತ ನೋಡಿರುವ ಕನ್ನಡ ಜನತೆ ಕುಮಾರಸ್ವಾಮಿಗೆ ಆಡಳಿತ ನೀಡಿದಲ್ಲಿ, ಒಂದುಕ್ಷಣ ವ್ಯರ್ಥ ಮಾಡದೇ ದಿನದ ಇಪ್ಪತ್ನಾಲ್ಕು ಘಂಟೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅದಕ್ಕಾಗಿ ಒಂದು ಅವಕಾಶ ನೀಡಿ," ಎಂದು ಕುಮಾರಸ್ವಾಮಿ ಕೇಳಿಕೊಂಡರು.
ಕೋಲಾರಕ್ಕೆ ನೀರು
ಕೋಲಾರದ ಸುಧಾಕರಗೌಡರವರು ಕೋಲಾರ ನೀರಾವರಿ ಹೋರಾಟಕ್ಕೆ ನಿಮ್ಮ ಸಹಕಾರ ಬೇಕೆಂದು ಕೇಳಿಕೊಂಡಾಗ, "ಕುಡಿಯುವ ನೀರಿನ ಸಮಸ್ಯೆಗೆ ಹಲವು ಸರ್ಕಾರಗಳು ಪೊಳ್ಳು ಆಶ್ವಾಸನೆಯನ್ನು ಮಾತ್ರ ನೀಡುತ್ತಾ ಬಂದಿವೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ರೂಪುರೇಷೆಗಳನ್ನು ನಾವೀಗಾಗಲೇ ರೂಪಿಸಿದ್ದು ಒಂದೊಂದು ಬಿಡಿಗಾಸೂ ಜನತೆಗೆ ನೀರನ್ನು ಒದಗಿಸುವ ಸಲುವಾಗಿಯೇ ಸದ್ಭಳಕೆಯಾಗಲಿದೆ," ಎಂದರು.
ಮಧ್ಯವರ್ತಿಗಳಿಗೆ ಕಡಿವಾಣ
ಶಿವಮೊಗ್ಗದ ಪುಟ್ಟೇಗೌಡರು ಅಡಕೆ ಬೆಳೆ ನಾಶಕ್ಕೆ ಪರಿಹಾರ ಕ್ರಮದ ಆಲೋಚನೆಗಳೇನಿವೆ ಎಂದು ಪ್ರಶ್ನಿಸಿದರು. ಈ ಸಂದರ್ಭ ಕುಮಾರಸ್ವಾಮಿ, "ಮಧ್ಯವರ್ತಿಗಳು ತಿನ್ನುತ್ತಿರುವ ಲಾಭವನ್ನು ತಗ್ಗಿಸಿ ಎಲ್ಲಾ ಬೆಳೆಗಳಿಗೆ ಸೂಕ್ತ ಬೆಲೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ," ಎಂದರು.
ಕುಮಾರಸ್ವಾಮಿಯವರೇ ಉತ್ತರ
ನಂತರ ಮಾತನಾಡಿದ ವೈಎಸ್.ವಿ ದತ್ತಾ, ಕುಮಾರಸ್ವಾಮಿಯವರೇ ಸಮಸ್ಯೆಗೆ ಉತ್ತರ ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಆದರೆ ಅಧಿಕಾರ ದೊರಕಿಸಿಕೊಡುವ ವಾತಾವರಣ ಮಾತ್ರ ಈ ತನಕ ನಿರ್ಮಾಣವಾಗಿಲ್ಲ.
ಯುವಕರಲ್ಲಿ ಕೆಲವು ಸಮೂಹ ಸನ್ನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತಲಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ಎಸಗಿರುವ ಅನ್ಯಾಯವನ್ನು ಪುರಾವೆ ಸಹಿತ ಖಂಡಿಸಿ ಜೆಡಿಎಸ್ ನ ಮಹತ್ತ್ವವನ್ನು ಎಲ್ಲರಿಗೂ ತಿಳಿಸುವ ಕಾರ್ಯ ಎಲ್ಲಾ ಕಾರ್ಯಕರ್ತರಿಂದ ಆಗಬೇಕಿದೆ. ಆಗ ಮಾತ್ರ ಕುಮಾರಸ್ವಾಮಿಯವರಿಗೆ ಅಧಿಕಾರ ದೊರಕಿಸಿಕೊಡಲು ಸಾಧ್ಯ ಎಂದರು.