ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಆತಂಕ ಬೇಡ
ಕುಕ್ಕೆಸುಬ್ರಹ್ಮಣ್ಯ, ಮೇ 03 : ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ತೀರ್ಥದ ಬಾಟಲಿಗೂ ನೀರಿಲ್ಲವೆಂದ ಮೇಲೆ ಉಳಿದ ಸೇವೆಗಳು, ಸೌಲಭ್ಯಗಳು ಹೇಗೆ ಸಿಗಲಿವೆ ಎಂಬ ಆತಂಕ ಭಕ್ತಾದಿಗಳಲ್ಲಿ ಎದ್ದಿತ್ತು. ಈ ದೇವಸ್ಥಾನದ ಅಧಿಕಾರಿಯೊಬ್ಬರು ಈ ಆತಂಕವನ್ನು ದೂರ ಮಾಡಿದ್ದಾರೆ.
ವಿಶ್ವಾದ್ಯಂತ ಭಕ್ತರನ್ನು ಹೊಂದಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರಾಕೃತಿಕ ಕಾರಣಗಳಿಂದ ಮಳೆ ಬಾರದೇ ನೀರಿನ ವ್ಯತ್ಯಯವುಂಟಾಗಿದ್ದರೂ, ರಜಾ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರ ಸಂದರ್ಶಿಸುವ ರಾಜ್ಯದ ಭಕ್ತಾದಿಗಳು ಆತಂಕಪಡುವ ಅಗತ್ಯವಿಲ್ಲವೆಂದು ದೇವಸ್ಥಾನಗಳ ಅಧ್ಯಯನಕಾರ ಪಿ.ಜಿ.ಚಂದ್ರಶೇಖರ ರಾವ್ ಸ್ಪಷ್ಟನೆ ನೀಡಿದ್ದಾರೆ.
ದೇವಸ್ಥಾನದ ಒಳಾಂಗಣದಲ್ಲಿರುವ ಪವಿತ್ರ ತೀರ್ಥಬಾವಿಯಲ್ಲಿನ ನೀರನ್ನು ದೇವರ ನಿತ್ಯ ಅಭಿಷೇಕಕ್ಕೆ ಮತ್ತು ಪತಿನಿತ್ಯ ಸುಮಾರು 80 ಕಿಲೋದಷ್ಟು ಅಕ್ಕಿಯ ನೈವೇದ್ಯ ತಯಾರಿಗೆ ಹಾಗೂ ಬಂದ ಭಕ್ತಾದಿಗಳಿಗೆ ಕೊಡಲ್ಪಡುವ ಕರತೀರ್ಥಕ್ಕೆ (ಕೈತೀರ್ಥ) ಬಳಸಲ್ಪಡುವುದು ಇಲ್ಲಿನ ಪೂರ್ವಶಿಷ್ಟ ಸಂಪದಾಯವಾಗಿದೆ. ಈ ಕಾರ್ಯಗಳಿಗೆ ಸಾಕಷ್ಟು ನೀರು ತೀರ್ಥಬಾವಿಯಲ್ಲಿ ದೊರೆಯುತ್ತಿದ್ದು, ದೇವರ ನಿತ್ಯ ಕೈಂಕರ್ಯಗಳು ನಿಯಮಿತವಾಗಿ ನೆರವೇರುತ್ತಿದೆ ಎಂದು ಅವರು ವಿವರಿಸಿದರು. [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ!]
ಭಕ್ತರು ಮನೆಗೆ ಕೊಂಡು ಹೋಗುವ ತೀರ್ಥ ಬಾಟಲಿಗಳನ್ನು ಮಾತ ವಿತರಿಸಲಾಗುತ್ತಿಲ್ಲ. ಹಿಂದಿನ ವರ್ಷಗಳಲ್ಲೂ ಬೇಸಿಗೆ ಕಾಲದಲ್ಲಿ ಇಂಥ ಪರಿಸ್ಥಿತಿ ಬಂದಿತ್ತು. ಭಕ್ತರಿಗೆ ಸುಲಭಸಾಧ್ಯವಾಗುವಂತೆ ಇತ್ತೀಚಿನ ವರ್ಷಗಳಲ್ಲಿ ತೀರ್ಥ ಬಾಟಲಿಗಳ ವಿತರಣಾ ವ್ಯವಸ್ಥೆ ಅಳವಡಿಸಲಾಗಿದೆಯೇ ಹೊರತು ಪೂರ್ವಕಾಲದಲ್ಲಿ ತೀರ್ಥಬಾಟಲಿಗಳೇ ಇರಲಿಲ್ಲ. ದೇವಳದ ಇತರ ಬಾವಿಗಳ ನೀರನ್ನು ತೀರ್ಥವಾಗಿ ನೀಡುವಂತಿಲ್ಲ.
ದೇವರ ನಿತ್ಯಕಾರ್ಯಕ್ಕೆ ಬೇಕಾದಷ್ಟು ನೀರು ಲಭ್ಯವಿದ್ದು ಯಾವುದೇ ಅಡಚಣೆ ಉಂಟಾಗಿಲ್ಲ. ನಿತ್ಯದಲ್ಲಿ ಸುಮಾರು 12,000 ಜನರಿಗೆ ದೇವರ ಪ್ರಸಾದ ಭೋಜನ ವ್ಯವಸ್ಥೆ, 150ರಷ್ಟು ಸರ್ಪ ಸಂಸ್ಕಾರ ಸೇವೆಗಳು, ಶಾಲಾ-ಕಾಲೇಜು ಇರುವ ಸಂದರ್ಭ ಸುಮಾರು 1,800 ವಿದ್ಯಾರ್ಥಿಗಳಿಗೆ ಭೋಜನವನ್ನು ದೇವಸ್ಥಾನ ನಿರ್ವಹಿಸುತ್ತಿದೆ. ದೇವಸ್ಥಾನದ ಅಧೀನದಲ್ಲಿರುವ ಹತ್ತು ವಸತಿಗೃಹಗಳಲ್ಲಿ ಸ್ನಾನಾದಿ ಇತರ ಬಳಕೆಗೆ ನೀರನ್ನು ಟ್ಯಾಂಕರುಗಳಲ್ಲೂ ಒದಗಿಸಲಾಗುತ್ತಿದ್ದು ಕ್ಷೇತ್ರ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆಯಿದೆ ಎಂದು ರಾವ್ ಹೇಳಿದರು. [ನಮ್ಮೆಲ್ಲಾ ಜಂಜಾಟ ಮರೆಸುವ ನಿಸರ್ಗದ ಸ್ವರ್ಗವೇ 'ಬಿಸಿಲೆಘಾಟ್']
ತೀರ್ಥ ಬಾಟಲಿ ಮಾತ್ರ ಇಲ್ಲ
ಮಳೆ ಬಾರದ ಕಾರಣ ಸದ್ಯ ತೀರ್ಥ ಬಾಟಲಿಗಳು ಮಾತ್ರ ಮನೆಗೊಯ್ಯಲು ಸಿಗುತ್ತಿಲ್ಲ. ಇದರ ಹೊರತಾಗಿ ವಸತಿ ವ್ಯವಸ್ಥೆ, ದೇವರ ದರ್ಶನ, ಸೇವಾದಿಗಳು ಸಾಂಗವಾಗಿ ನೆರವೇರುತ್ತಿದೆ. ಪೂಜಾ ವಿಧಾನಗಳಲ್ಲಿ ದೇವಳದ ಪ್ರಧಾನ ಅರ್ಚಕ ವರ್ಗಕ್ಕೂ ನೇಮ-ನಿಷ್ಠೆಗಳಂತಹ ವಿಶಿಷ್ಟ ಕಟ್ಟುಪಾಡುಗಳಿದ್ದು ಅದನ್ನು ಚಾಚೂತಪ್ಪದೇ ಪಾಲಿಸಲಾಗುತ್ತಿದೆ. ರಾಜ್ಯಾದ್ಯಂತದಿಂದ ದೇವರ ದರ್ಶನಕ್ಕಾಗಿ ಬಂದು ತಮ್ಮ ಹರಕೆ ತೀರಿಸಿ ಕೃತಾರ್ಥರಾಗಲು ಭಕ್ತಾದಿಗಳಿಗೆ ಯಾವುದೇ ಅಡ್ಡಿಗಳಿಲ್ಲವೆಂದು ಅವರು ತಿಳಿಸಿದರು.
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ
ಪಿ.
ಜಿ.
ಚಂದ್ರಶೇಖರ್
ರಾವ್
ಮೊಬೈಲ್
:
93432
57135
[email protected]